ಎರಡು ತಿಂಗಳ ನಂತರ ಪತ್ತೆಯಾಯ್ತು ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ ಶವ
ಶಿವಮೊಗ್ಗ, ಅಕ್ಟೋಬರ್ 14: ಎರಡು ತಿಂಗಳ ಹಿಂದೆ ಸುರಿದ ಮಹಾಮಳೆಯ ಪ್ರವಾಹಕ್ಕೆ ಸಿಲುಕಿ ಕುಮಧ್ವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಎರಡು ತಿಂಗಳ ಬಳಿಕ ಪತ್ತೆಯಾಗಿದೆ.
ಕುಂಸಿಯ ಅಮರನಾಥ್ ಅವರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಚೊರಡಿ ಸಮೀಪದ ದೊಡ್ಡಿಮಟ್ಟಿ ಬಳಿಯ ಕುಮದ್ವತಿ ನದಿಪಾತ್ರದಲ್ಲಿ ಇಂದು ಪತ್ತೆಯಾಗಿದೆ.
ಶಿವಮೊಗ್ಗ; ನಾಪತ್ತೆಯಾಗಿದ್ದ ಯುವತಿ ಬಾವಿಯಲ್ಲಿ ಶವವಾಗಿ ಪತ್ತೆ
ಆಗಸ್ಟ್ ತಿಂಗಳಲ್ಲಿ ಚೊರಡಿ ಕುಮಧ್ವತಿ ನದಿ ಸೇತುವೆ ಮೇಲೆ ನಿಂತು ನದಿಯನ್ನು ನೋಡುತ್ತಿದ್ದಾಗ ಬೋಲೇರೋ ಕಾರು ಡಿಕ್ಕಿ ಹೊಡೆದು ಮೂವರು ನದಿಗೆ ಬಿದ್ದಿದ್ದರು. ನದಿಗೆ ಬಿದ್ದ ಮರುದಿನವೇ ರಾಮಪ್ಪ ಎಂಬುವವರ ಶವ ಪತ್ತೆಯಾಗಿತ್ತು. ಆದರೆ ಹರೀಶ್ ಹಾಗೂ ಅಮರನಾಥ್ ಶವಕ್ಕಾಗಿ ಎನ್ ಡಿಆರ್ ಎಫ್ ಸಿಬ್ಬಂದಿ ಹದಿನೈದು ದಿನ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಇದರಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರು.
ಇಂದು ಮೃತದೇಹ ಕಾಣಿಸಿದ್ದು, ಸ್ಥಳೀಯ ರೈತರು ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವದ ಮೇಲಿರುವ ಜರ್ಕಿನ್, ಬಟ್ಟೆಗಳ ಆಧಾರದ ಮೇಲೆ ಇದು ಅಮರನಾಥ್ ಅವರ ಶವ ಎಂದು ಗುರುತಿಸಿದ್ದಾರೆ. ಹರೀಶ್ ಎಂಬುವವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ.