ದೇಗುಲದಲ್ಲಿ ಗಲಭೆ; ಸಿಗಂದೂರು ದೇವಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ
ಶಿವಮೊಗ್ಗ, ಅಕ್ಟೋಬರ್ 17: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಭೇಟಿ ನೀಡಿದ್ದು, ದೇವಸ್ಥಾನದ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಿನ್ನೆಯಷ್ಟೇ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಶೇಷಗಿರಿ ಭಟ್ ಹಾಗೂ ಭಕ್ತರ ನಡುವೆ ಗದ್ದಲ ನಡೆದಿದ್ದು, ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಇಂದು ಜಿಲ್ಲಾಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಧರ್ಮದರ್ಶಿ ಹಾಗೂ ಪ್ರಧಾನ ಅರ್ಚಕರ ಸಮಸ್ಯೆಗಳನ್ನು ಆಲಿಸಿದರು.
ಸಿಗಂದೂರು ದೇವಾಲಯದಲ್ಲಿ ಗದ್ದಲ, ಗಲಾಟೆ; ಪೊಲೀಸರ ಪ್ರವೇಶ
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಿನ್ನೆ ದೇಗುಲದಲ್ಲಿ ಗಲಭೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗುತ್ತಿದೆ. ಸಾಗರ ಉಪ ವಿಭಾಗಾಧಿಕಾರಿಗಳಿಗೆ ಒಂದು ವಾರದಲ್ಲಿ ದೇವಸ್ಥಾನದ ಕುರಿತು, ದೇವಸ್ಥಾನದ ಆರ್ಥಿಕ ಸ್ಥಿತಿಗತಿಯ ವರದಿಯನ್ನು ನೀಡಲು ಸೂಚಿಸಲಾಗಿದೆ. ವರದಿ ಬಂದ ಮೇಲೆ ಮತ್ತೊಮ್ಮೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು" ಎಂದು ಮಾಹಿತಿ ನೀಡಿದರು.
ಜಿಲ್ಲಾಡಳಿತ ಈ ಕುರಿತು ಮುಂದಿನ ಕ್ರಮವನ್ನು ತೆಗೆದುಕೊಂಡು ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದೂ ತಿಳಿಸಿದರು.