ಶಿವಮೊಗ್ಗ; ತಾಯಿಯ ಕೊಳೆತ ಶವದೊಂದಿಗೆ ಐದು ದಿನ ಕಳೆದ ಮಗಳು
ಶಿವಮೊಗ್ಗ, ಮೇ 19: ಐದು ದಿನಗಳಿಂದ ತಾಯಿಯ ಶವದೊಂದಿಗೆ ಮಗಳು ಕಾಲ ಕಳೆದಿರುವ ಘಟನೆ ಶಿವಮೊಗ್ಗದ ಬಸವನಗುಡಿಯಲ್ಲಿ ಬೆಳಕಿಗೆ ಬಂದಿದೆ. ಬಸವನಗುಡಿ ನಿವಾಸಿ ನಿವೃತ್ತ ಶಾಲಾ ಶಿಕ್ಷಕಿ ರಾಜೇಶ್ವರಿ (65) ಮೃತಪಟ್ಟ ಮಹಿಳೆ. ಮನೆಯೊಳಗೆ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಆದರೆ ತಾಯಿಯ ಶವದ ಜೊತೆಗೇ ಐದು ದಿನಗಳನ್ನು ಮಗಳು ಕಳೆದಿರುವ ಸಂಗತಿ ಇಂದು ಬೆಳಕಿಗೆ ಬಂದಿದೆ. ಮೃತ ರಾಜೇಶ್ವರಿ ಪತಿ 20 ವರ್ಷದ ಹಿಂದೆಯೇ ಮೃತಪಟ್ಟಿದ್ದರು. ಹೀಗಾಗಿ ಮನೆಯಲ್ಲಿ ತಾಯಿ ಮಗಳು ಇಬ್ಬರೇ ವಾಸಿಸುತ್ತಿದ್ದರು. ಕೆಲ ವರ್ಷಗಳಿಂದ ರಾಜೇಶ್ವರಿ ಅವರು ಸ್ತನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಅನಾಥ ಶವಗಳಿಗೆ ಮುಕ್ತಿದಾತ ಚಾಮರಾಜನಗರದ ಈ ಪೊಲೀಸ್ ಅಧಿಕಾರಿ
ರಾಜೇಶ್ವರಿ ಅವರ ಮಗಳು ಮಾನಸಿಕ ಅಸ್ವಸ್ಥೆಯಾಗಿದ್ದು, ತಾಯಿ ಸತ್ತು ಐದು ದಿನವಾದರೂ ಆಕೆಗೆ ಇದರ ಅರಿವು ಇರಲಿಲ್ಲ. ಶವ ಕೊಳೆತು ವಾಸನೆ ಬರುತ್ತಿದ್ದರೂ ಆಕೆ ಮನೆಯೊಳಗೇ ಇದ್ದಳು. ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಜಯನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಮನೆಯೊಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಮಗಳನ್ನು ಸುರಭಿ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಈ ಘಟನೆ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.