ಶಿವಮೊಗ್ಗ: ಭಾರೀ ಮಳೆಗೆ ಭರ್ತಿಯಾಗುತ್ತಿರುವ ಜಲಾಶಯಗಳು; ಜನಜೀವನ ಅಸ್ತವ್ಯಸ್ತ
ಶಿವಮೊಗ್ಗ, ಜುಲೈ 15: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಜೋರು ಮಳೆಯಾಗುತ್ತಿದ್ದು, ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಅಲ್ಲದೆ ಜಿಲ್ಲೆಯ ಹಳ್ಳ ಕೊಳ್ಳಗಳು ಭರ್ತಿಯಾಗಿವೆ.
ಕಳೆದ 24 ಗಂಟೆ ಅವಧಿಯಲ್ಲೇ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 59.31 ಮಿ.ಮೀ ಮಳೆಯಾಗಿದೆ. ಈ ತಿಂಗಳಲ್ಲಿ ಇದು ಅತ್ಯಧಿಕ ಪ್ರಮಾಣದ ಮಳೆಯಾಗಿದೆ ಎಂದು ಹೇಳಲಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಬ್ಬರ: ಕೃಷಿ ಚಟುವಟಿಕೆ ಚುರುಕು
ಶಿವಮೊಗ್ಗ ತಾಲ್ಲೂಕಿನಲ್ಲಿ 18 ಮಿ.ಮೀ, ಭದ್ರಾವತಿಯಲ್ಲಿ 48.20 ಮಿ.ಮೀ, ತೀರ್ಥಹಳ್ಳಿ 79.60 ಮಿ.ಮೀ, ಸಾಗರದಲ್ಲಿ 70.80 ಮಿ.ಮೀ, ಶಿಕಾರಿಪುರದಲ್ಲಿ 27 ಮಿ.ಮೀ, ಸೊರಬದಲ್ಲಿ 29.20 ಮಿ.ಮೀ, ಹೊಸನಗರದಲ್ಲಿ 142.40 ಮಿ.ಮೀ ಮಳೆಯಾಗಿದೆ.
ಜಲಾಶಯಗಳ ಒಳ ಹರಿವು ಹೆಚ್ಚಳ
ಮಳೆ ಬಿರುಸಾಗಿರುವುದರಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಒಂದೇ ದಿನ ಎರಡು ಅಡಿ ಹೆಚ್ಚಳವಾಗಿದೆ. ಗುರುವಾರ ಜಲಾಶಯಕ್ಕೆ 47,808 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಇಂದಿನ ನೀರಿನ ಮಟ್ಟ 1788.10 ಅಡಿಗಳಷ್ಟಿದೆ.
ಇನ್ನು ಭದ್ರಾ ಜಲಾಶಯಕ್ಕೂ ನೀರಿನ ಒಳ ಹರಿವು 18,214 ಕ್ಯೂಸೆಕ್ ದಾಖಲಾಗಿದ್ದು, ಜಲಾಶಯದ ನೀರಿನ ಮಟ್ಟ 159 ಅಡಿಗೆ ಹೆಚ್ಚಳವಾಗಿದೆ.
ಮಳೆ ಪ್ರಮಾಣ ಹೆಚ್ಚಳವಾದಂತೆ ತುಂಗಾ ಜಲಾಶಯದ ಒಳ ಮತ್ತು ಹೊರ ಹರಿವು ಪ್ರಮಾಣ ಏರಿಕೆಯಾಗುತ್ತಿದೆ. ಜಲಾಶಯಕ್ಕೆ ಬೆಳಿಗ್ಗೆ 8 ಗಂಟೆಗೆ 29,267 ಕ್ಯೂಸೆಕ್ ಒಳ ಹರಿವು ಇತ್ತು. ಅಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ಬೆಳಗ್ಗೆ 10 ಗಂಟೆಗೆ 41,040 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಮಂಟಪ ಮುಳುಗಲು ಎರಡು ಅಡಿ
ತುಂಗಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರಗೆ ಬಿಡುತ್ತಿರುವುದರಿಂದ ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪ ಮುಳುಗುವ ಹಂತಕ್ಕೆ ಬಂದಿದೆ. ಎರಡು ಅಡಿಯಷ್ಟು ನೀರು ಹೆಚ್ಚಳವಾದರೆ ಮಂಟಪ ಮುಳುಗಲಿದೆ.