ಕಂಬಳ ಓಟಗಾರ ಶ್ರೀನಿವಾಸ ಗೌಡರಿಗೆ ಸಿ.ಟಿ.ರವಿ ಸಾಥ್
ಶಿವಮೊಗ್ಗ, ಫೆಬ್ರವರಿ 17: ಕಂಬಳ ಓಟದಲ್ಲಿ ದಾಖಲೆ ನಿರ್ಮಿಸಿರುವ ಮಂಗಳೂರಿನ ಶ್ರೀನಿವಾಸ ಗೌಡ ಅವರ ಸಾಮರ್ಥ್ಯವನ್ನು ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್ ಮೂಲಕ ಪ್ರಾಯೋಗಿಕವಾಗಿ ಪರಿಶೀಲಿಸಿದ ಬಳಿಕ ಅಗತ್ಯ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಭಾನುವಾರ ನೆಹರು ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶ್ರೀನಿವಾಸ ಗೌಡರ ದಾಖಲೆ ಓಟದ ಬಗ್ಗೆ ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾಗಿದೆ. ಅವರಿಗೆ ಹೆಚ್ಚಿನ ತರಬೇತಿ ನೀಡಲು ಪೂರ್ವಭಾವಿಯಾಗಿ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಕೇಂದ್ರ ಕ್ರೀಡಾ ಸಚಿವರು ಕೂಡ ಈ ಕುರಿತಾಗಿ ಹೇಳಿಕೆ ನೀಡಿದ್ದಾರೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಉನ್ನತ ತರಬೇತಿಗೆ ಎಲ್ಲಾ ನೆರವು ಒದಗಿಸಲಾಗುವುದು" ಎಂದರು.
ನಾನು ಕೆಸರಿನ ಓಟಗಾರ, ಟ್ರ್ಯಾಕ್ನಲ್ಲಿ ಓಡುವುದಿಲ್ಲ: ಕಂಬಳ ವೀರ ಶ್ರೀನಿವಾಸ್ ಗೌಡ
"ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಕೇಂದ್ರ ಸರ್ಕಾರದ ಆಶಯ ಸಹ ಆಗಿದೆ. ರಾಜ್ಯ ಸರ್ಕಾರ ಕ್ರೀಡಾ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಿದೆ" ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ದಿಢೀರ್ ಭೇಟಿ: ಕ್ರೀಡಾ ವಸತಿ ಶಾಲೆಗಳ ಸ್ಥಿತಿಗತಿ ಅರಿಯಲು ಮುಂದಿನ ದಿನಗಳಲ್ಲಿ ದಿಢೀರ್ ಭೇಟಿ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರೀಡಾ ಶಾಲೆಯ ವಿದ್ಯಾರ್ಥಿಗಳಿಗೆ ಊಟ ಉಪಾಹಾರ, ಕ್ರೀಡಾ ಸಾಮಗ್ರಿಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ. ಊಟದ ಮೆನುವನ್ನು ನೋಟೀಸ್ ಬೋರ್ಡ್ ನಲ್ಲಿ ಹಾಕಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿದರೇ 'ಕಂಬಳ ವೀರ'? ಸತ್ಯವೇನು?
ಇದಕ್ಕೂ ಮೊದಲು ಸಚಿವರು ವಿದ್ಯಾರ್ಥಿಗಳೊಂದಿಗೆ ಕ್ರೀಡಾ ವಸತಿ ಶಾಲೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಿಕ್ಕಿರುವ ಅವಕಾಶವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಲು ಶ್ರಮಿಸುವಂತೆ ಸಚಿವರು ಮಕ್ಕಳಿಗೆ ತಿಳಿಸಿದರು.