ಬಸವಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡದ್ದಕ್ಕೆ ಬಸವಣ್ಣನ ವೇಷದಲ್ಲೇ ಬಂದ ಪಾಲಿಕೆ ಸದಸ್ಯ
ಶಿವಮೊಗ್ಗ, ನವೆಂಬರ್ 4: ಪಾಲಿಕೆ ಸದಸ್ಯರೊಬ್ಬರು ಬಸವಣ್ಣನವರ ವೇಷದಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿ ನಂತರ ಪಾಲಿಕೆಯ ಕಲಾಪದಲ್ಲಿ ಭಾಗವಹಿಸಿದ ಘಟನೆ ಇಂದು ಮಹಾನಗರ ಪಾಲಿಕೆಯಲ್ಲಿ ನಡೆಯಿತು. ಹೀಗೆ ಪ್ರತಿಭಟನೆ ನಡೆಸಲು ಒಂದು ಕಾರಣವೂ ಇದೆ.
ಜಯನಗರಕ್ಕೆ ಮತ್ತೊಂದು ಗರಿ; ಪ್ರಕೃತಿ ವನ ಲೋಕಾರ್ಪಣೆ
ನಗರದ ಗಾಂಧಿ ಪಾರ್ಕ್ ಪ್ರವೇಶ ದ್ವಾರದಲ್ಲಿ ಲಂಡನ್ ನಿಂದ ತರಲಾದ ಬಸವಣ್ಣನ ಪ್ರತಿಮೆಯನ್ನು ಒಂದೂವರೆ ವರ್ಷ ಕಳೆದರೂ ಪ್ರತಿಷ್ಠಾಪನೆ ಮಾಡಿಲ್ಲ. ಹೀಗಾಗಿ ಈ ನಡೆಯನ್ನು ವಿರೋಧಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಪ್ರತಿಭಟನೆ ಹಮ್ಮಿಕೊಂಡಿತ್ತು. ಇವರೊಂದಿಗೆ ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್ ಬಸವಣ್ಣನ ವೇಷ ಹಾಕಿಕೊಂಡು ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಪಾಲಿಕೆಯ ಕಲಾಪದಲ್ಲಿ ಭಾಗವಹಿಸಿ ಎಲ್ಲರ ಗಮನಸೆಳೆದರು.
ಇಂದು ನಗರದ ಡಿವಿಎಸ್ ವೃತ್ತದಿಂದ ಮಹಾನಗರ ಪಾಲಿಕೆ ಆವರಣದವರೆಗೆ ಮೆರವಣಿಗೆ ನಡೆಸಿದ ವೀರಶೈವ ಮಹಾ ಸಭಾದ ಪ್ರತಿಭಟನಾ ಮೆರವಣಿಗೆಯಲ್ಲಿ ಬಸವಣ್ಣ ಧರಿಸುತ್ತಿದ್ದ ಇಷ್ಠಲಿಂಗ ಧಾರಣೆ, ರುದ್ರಾಕ್ಷಿ ಮಾಲೆ, ಬಿಳಿ ಪಂಚೆ, ನೊಸಲಿಗೆ ವಿಭೂತಿ ಧರಿಸಿಕೊಂಡು ಯೋಗೀಶ್ ಪಾಲ್ಗೊಂಡಿದ್ದರು.
ಲಂಡನ್ ನಿಂದ ಒಂದೂವರೆ ವರ್ಷದ ಹಿಂದೆ ತರಲಾದ ಬಸವಣ್ಣನ ಪ್ರತಿಮೆಯನ್ನ ಪ್ರತಿಷ್ಠಾಪನೆ ಮಾಡಲು ಗಾಂಧಿ ಪಾರ್ಕ್ ನ ಪ್ರವೇಶ ದ್ವಾರವನ್ನು ಗುರುತಿಸಲಾಗಿತ್ತು. ಪ್ರತಿಷ್ಠಾಪನೆಗೆ 25 ಲಕ್ಷ ರೂ ನಿಗದಿಪಡಿಸಲಾಗಿತ್ತು. ಆದರೆ ಕಾಮಗಾರಿ ಆರಂಭಿಸಿಲ್ಲವೆಂದು ಆರೋಪಿಸಿದ್ದಾರೆ. ಆದಷ್ಟು ಬೇಗ ಬಸವಣ್ಣನ ಪ್ರತಿಷ್ಠಾಪನೆ ಆಗಬೇಕು. ಇನ್ನು ಮೂರು ತಿಂಗಳ ಒಳಗೆ ಬಸವಣ್ಣನ ಪ್ರತಿಷ್ಠಾಪನೆಗೆ ಬೇಕಾದ ಕಾಮಗಾರಿಯನ್ನು ಮುಗಿಸಬೇಕು ಎಂದು ಒತ್ತಾಯಿಸಲಾಯಿತು.