ನನಸಾಯ್ತು ಹತ್ತಾರು ವರ್ಷಗಳ ಕನಸು; ಸಿಗಂದೂರು ಸೇತುವೆ ಕಾಮಗಾರಿ ಆರಂಭ
Recommended Video
ಶಿವಮೊಗ್ಗ, ಜನವರಿ 21: ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ 423.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಮುಂದಿನ ಮೂರು ವರ್ಷದೊಳಗೆ ಕಾಮಗಾರಿ ಪೂರ್ಣಗೊಂಡು ಪ್ರಯಾಣಿಕರಿಗೆ ಸಂಚಾರ ಸುಗಮವಾಗಲಿದೆ.
ಈ ಮೂಲಕ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಹತ್ತಾರು ವರ್ಷಗಳ ಕನಸು ನನಸಾಗುವ ಸಮಯ ಹತ್ತಿರ ಬರುತ್ತಿದೆ. ದಶಕದಿಂದಲ್ಲೂ ಸೇತುವೆ ಕುರಿತು ಸ್ಥಳೀಯರು ಹೋರಾಟ ನಡೆಸಿದ್ದು, ಬಂಗಾರಪ್ಪ ಕಾಲದಿಂದಲೂ ಈ ಕಾಮಗಾರಿಗೆ ಕಾಲ ಕೂಡಿ ಬಂದಿರಲಿಲ್ಲ. ಬಿ.ಎಸ್ ಯಡಿಯೂರಪ್ಪ ನವರು ಮೊದಲನೇ ಅವಧಿಯಲ್ಲಿಯೂ ಸೇತುವ ಕಾಮಗಾರಿ ನಡೆಸಲು ತೊಡಕು ಉಂಟಾಗಿದ್ದು, ಕಳೆದ ವರ್ಷ ಈ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಈ ವರ್ಷ ಕಾಮಗಾರಿ ಆರಂಭವಾಗಿದ್ದು, ಆದಷ್ಟು ಬೇಗ ಪೂರ್ಣಗೊಳ್ಳುವ ಭರವಸೆ ಇದೆ.
ನನಸಾಗುತ್ತಿದೆ ಬಹು ವರ್ಷಗಳ ಕನಸು
ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿಗೆ ಸಿಂಗಧೂರು ಸೇತುವೆ ಕಾಮಗಾರಿ ಹತ್ತಾರು ವರ್ಷಗಳ ಕನಸ್ಸಾಗಿದ್ದು, ಕೇಂದ್ರ -ರಾಜ್ಯ ಸರ್ಕಾರಗಳು ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿ ಕಾಮಗಾರಿ ಆರಂಭಿಸಿರುವುದು ಸ್ಥಳೀಯರಲ್ಲಿ ಹಾಗೂ ಸಿಂಗದೂರು ದೇವಿ ಭಕ್ತರಲ್ಲಿ ಸಂತಸ ಮೂಡಿಸಿದೆ.
ಸಿಗಂದೂರು ಸೇತುವೆ ಕಾಮಗಾರಿಗೆ ನಿತೀನ್ ಗಡ್ಕರಿ ಚಾಲನೆ
ಉನ್ನತ ತಂತ್ರಜ್ಞಾನದ ಸೇತುವೆ
ದೇಶದ ಅತೀ ದೊಡ್ಡ ಹಾಗೂ ಉನ್ನತ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಬೆರಳೆಣಿಕೆಯ ಸೇತುವೆಗಳಲ್ಲಿ ಸಿಗಂದೂರು ಸೇತುವೆ ಕೂಡ ಒಂದಾಗಲಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಶಿವಮೊಗ್ಗ ಜಿಲ್ಲೆ ಮತ್ತಷ್ಟು ಹತ್ತಿರವಾಗಲಿದ್ದು, ಉದ್ಯೋಗಾವಕಾಶ ಸೃಷ್ಟಿಯಾಗುವ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಲಿದೆ. 2.42 ಕಿ.ಮೀ. ಉದ್ದ ಹಾಗೂ 16 ಮೀ. ಅಗಲದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಹಿನ್ನೀರಿನ ಎರಡೂ ದಡಗಳಲ್ಲಿ ಸೇತುವೆಗೆ ಪೂರಕ ರಸ್ತೆ ನಿರ್ಮಿಸುವ ಜವಾಬ್ದಾರಿಯನ್ನೂ ಗುತ್ತಿಗೆ ಕಂಪನಿಗೆ ವಹಿಸಲಾಗಿದೆ. ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್ ಕಾನ್ ಕಂಪನಿಯು ಗುತ್ತಿಗೆ ಪಡೆದಿದೆ.
ಪ್ರವಾಸೋದ್ಯಮ ಅಭಿವೃದ್ಧಿ
ಸೇತುವೆ ನಿರ್ಮಾಣದಿಂದ ಪ್ರತಿನಿತ್ಯ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದು ಪ್ರತಿನಿತ್ಯ ಎರಡು ಲಾಂಜ್ ಗಳು ಮಾತ್ರ ಜನರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಸ್ಥಳೀಯ ವಾಹನಗಳಿಗೆ ಆದ್ಯತೆ ನೀಡಿದ್ದು, ಪ್ರವಾಸಿ ವಾಹನಗಳು ಲಾಂಜ್ ನಲ್ಲಿ ಹೋಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಸೇತುವೆ ನಿರ್ಮಾಣದಿಂದ ಪ್ರವಾಸಿಗರು ನೇರವಾಗಿ ಸಿಂಗದೂರು ತಲುಪಬಹುದು. ಅಲ್ಲಿಂದ ಕೊಲ್ಲೂರು ಮುರುಡೇಶ್ವರ ಮುಂತಾದ ಪ್ರವಾಸಿ ತಾಣಗಳಿಗೆ ಪ್ರಯಾಣಿಸಲು ಮಾರ್ಗ ಸುಗಮವಾಗುತ್ತದೆ.
ಹೊಳೆಬಾಗಿಲು-ಸಿಗಂದೂರು ಸಂಪರ್ಕ ಸೇತುವೆಗೆ ಕೇಂದ್ರ ಅಸ್ತು
ನನೆಗುದಿಗೆ ಬಿದ್ದಿದ್ದ ಸೇತುವೆ ಕಾಮಗಾರಿ
ವ್ಯಾಪಾರ ವಹಿವಾಟು ಹಾಗೂ ಯಾವುದೇ ಲಾಭದಾಯಕವಿಲ್ಲ ಎಂದು ಸೇತುವೆ ಕಾಮಗಾರಿ ನನೆಗುದ್ದಿಗೆ ಬಿದ್ದಿತ್ತು. ಆದರೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಯತ್ನದಿಂದ ರಾಜ್ಯ ಹಾಗೂ ಕೇಂದ್ರದ ಅರಣ್ಯ ಪ್ರಾಧಿಕಾರಗಳಿಂದ ಹಾಗೂ ಜಲ ಮಂಡಳಿಗಳಿಂದ ಗ್ರೀನ್ ಸಿಗ್ನಲ್ ದೊರೆತು ಕೇಂದ್ರ ಸರ್ಕಾರ ಹಣವನ್ನು ಮಂಜೂರು ಮಾಡಲಾಗಿದೆ. ನಿತಿನ್ ಗಡ್ಕರಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಒಟ್ಟಿನಲ್ಲಿ ಸಿಂಗದೂರು ಸೇತುವೆ ಕಾಮಗಾರಿ ಆರಂಭವಾಗಿರುವುದು ಸ್ಥಳೀಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೂ ಸಂತಸ ತಂದಿದೆ.