ಪೆಟ್ರೋಲ್ ಹಾಕಿಸಲು ಬಂದವರಿಗೆ ಶಿವಮೊಗ್ಗದಲ್ಲಿ ಸ್ವೀಟ್ ಹಂಚಿ ‘ಸಂಭ್ರಮ’
ಶಿವಮೊಗ್ಗ, ಜೂನ್ 9: ಶಿವಮೊಗ್ಗದಲ್ಲಿ ಪೆಟ್ರೋಲ್ ದರ 100 ರೂ. ದಾಟಿದ್ದು, ನಗರದಲ್ಲಿ ಜನಾಕ್ರೋಶ ವ್ಯಕ್ತವಾಗಿದೆ. ಪೆಟ್ರೋಲ್ ಬಂಕ್ ಒಂದರ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಇರುವ ನಂದಿ ಪೆಟ್ರೋಲ್ ಬಂಕ್ ಮುಂದೆ ತಟ್ಟೆ ಬಡಿದು, ಪೆಟ್ರೋಲ್ ಹಾಕಿಸಲು ಬಂದವರಿಗೆ ಸಿಹಿ ಹಂಚಲಾಯಿತು.
ಸೆಂಚುರಿ ಬಾರಿಸಿದ ಕ್ರಿಕೆಟಿಗನಂತೆ ಬ್ಯಾಟ್ ಎತ್ತಿದರು
ಪೆಟ್ರೋಲ್ ಬಂಕ್ ಎದುರು ತಟ್ಟೆ ಬಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಅಚ್ಛೇ ದಿನ ಬಂದೇ ಬಿಡ್ತು ಅಂತಾ ಘೋಷಣೆ ಕೂಗಿದರು. ಶಿವಮೊಗ್ಗದಲ್ಲಿ ಪೆಟ್ರೋಲ್ ದರ ದಾಖಲೆ ಬರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಘಟಕದಿಂದ ಸೆಂಚುರಿ ಬಾರಿಸಿದ ಕ್ರಿಕೆಟಿಗನಂತೆ ಬ್ಯಾಟ್ ಎತ್ತಿ ಶಿವಮೊಗ್ಗ ಡಿಸಿ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
"ಅಣಕು ಮಾಡುವಂತೆ ಸಂಭ್ರಮಾಚರಣೆ'
ಪೆಟ್ರೋಲ್ ಬೆಲೆ ನೂರು ರೂ. ತಲುಪಿದ್ದರಿಂದ ಶಿವಮೊಗ್ಗಕ್ಕೆ ಅಚ್ಛೇ ದಿನ ಬಂದಂತಾಗಿದೆ ಅಂತಾ ಕಾಂಗ್ರೆಸ್ ಕಾರ್ಪೋರೇಟರ್ ಎಚ್.ಸಿ ಯೋಗೇಶ್ ವ್ಯಂಗ್ಯ ಮಾಡಿದರು. ಅಚ್ಛೇ ದಿನ ಬಂದ ಕಾರಣಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ಗ್ರಾಹಕರಿಗೆ ಸಿಹಿ ಹಂಚಿದರು.
ಪೆಟ್ರೋಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ. ಆದ್ದರಿಂದ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಪದಕ ನೀಡಬೇಕು ಅಂತಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು.
ಏರಿಕೆಯಾಗುತ್ತಲೆ ಇದೆ ದರ
ಶಿವಮೊಗ್ಗದಲ್ಲಿ ಸಾಮಾನ್ಯ ಪೆಟ್ರೋಲ್ ದರ 0.26 ಪೈಸೆ ಹೆಚ್ಚಳವಾಗಿದ್ದು, ಬುಧವಾರ ಪ್ರತಿ ಲೀಟರ್ ಬೆಲೆ 100.14 ರೂ.ಗೆ ತಲುಪಿದೆ. ಪವರ್ ಪೆಟ್ರೋಲ್ ಪ್ರತಿ ಲೀಟರ್ಗೆ 103.69 ರೂ. ಆಗಿದೆ. ಜಿಲ್ಲೆಯಲ್ಲಿ ಡಿಸೇಲ್ ಪ್ರತಿ ಲೀಟರ್ಗೆ 92.87 ರೂ. ಇದೆ.
ಕಳೆದ ವರ್ಷ ಪ್ರತಿ ಲೀಟರ್ ದರ 74.62 ರೂ.
ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ ದುಬಾರಿಯಾಗುತ್ತಲೆ ಇದೆ. ಕಳೆದ ವರ್ಷ ಪ್ರತಿ ಲೀಟರ್ ದರ 74.62 ರೂ. ಇತ್ತು. ಆರು ತಿಂಗಳ ಹಿಂದೆ 84.96 ರೂ.ಗೆ ತಲುಪಿತ್ತು. ಮೂರು ತಿಂಗಳ ಹಿಂದೆ 91.03 ರೂ.ಗೆ ಏರಿಕೆಯಾಯ್ತು. ಈಗ 100.14 ರೂ.ಗೆ ಏರಿಕೆಯಾಗಿದ್ದು ವಾಹನ ಸವಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ ಗಿರೀಶ್, ಮುಖಂಡರಾದ ಕೆ.ರಂಗನಾಥ್, ಎಚ್.ಸಿ ಯೋಗೇಶ್, ಯುವ ಕಾಂಗ್ರೆಸ್ ಮುಖಂಡರಾದ ಲೋಕೇಶ್, ನಿತಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.