ಆರಗ ಜ್ಞಾನೇಂದ್ರ ವಿರುದ್ಧ ಹೋರಾಟ; ಕಿಮ್ಮನೆ ರತ್ನಾಕರ್ ಪಾದಯಾತ್ರೆ
ಶಿವಮೊಗ್ಗ, ಮೇ 04; ಬಿಜೆಪಿ ಸರ್ಕಾರದ ದುರಾಡಳಿತ ಖಂಡಿಸಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ದ ಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ಹೋರಾಟ ಆರಂಭವಾಗಲಿದೆ.
ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಗೃಹ ಸಚಿವರ ತವರೂರು ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಿಂದ ಶಿವಮೊಗ್ಗ ತನಕ ಪಾದಯಾತ್ರೆ ನಡೆಸಲಿದ್ದಾರೆ.
ಸಾಲು ಸಾಲು ವೈಫಲ್ಯಗಳ ಸರದಾರ ಆರಗ ಜ್ಞಾನೇಂದ್ರರನ್ನು ಸಂಪುಟದಿಂದ ಕಿತ್ತುಹಾಕಿ: ಸಿದ್ದರಾಮಯ್ಯ
ಮೇ 6 ರಿಂದ 10ರ ತನಕ ನಾಲ್ಕು ದಿನಗಳ ಕಾಲ ಈ ಬೃಹತ್ ಪಾದಯಾತ್ರೆ ನಡೆಯಲಿದೆ. ಈ ಮೂಲಕ ಗೃಹ ಸಚಿವರ ವಿರುದ್ಧ ತವರು ಕ್ಷೇತ್ರದಲ್ಲಿಯೇ ದೊಡ್ಡ ಹೋರಾಟವನ್ನು ಪ್ರತಿಪಕ್ಷ ಕಾಂಗ್ರೆಸ್ ಹಮ್ಮಿಕೊಂಡಿದೆ.
ಸಿಎಂ ಆರಗ ಜ್ಞಾನೇಂದ್ರ ರಾಜೀನಾಮೆ ಪಡೆಯಲಿ; ಸಿದ್ದರಾಮಯ್ಯ
ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಿಂದ ಮೇ 6ರಂದು ಆರಂಭವಾಗುವ ಮೌನ ಪ್ರತಿಭಟನೆ ಹೊದಲ ಮಾರ್ಗವಾಗಿ ಬೆಜ್ಜವಳ್ಳಿ, ಮಂಡಗದ್ದೆ, ಸಕ್ರೆಬೈಲು, ಹರಕೆರೆ ಮೂಲಕ ಮೇ 10ರಂದು ಜಿಲ್ಲಾ ಕೇಂದ್ರ ಶಿವಮೊಗ್ಗ ತಲುಪಲಿದೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಈ ಕುರಿತು ಮಾತನಾಡಿದ್ದು, "ಬಿಜೆಪಿ ಸರ್ಕಾರದ ಎಲ್ಲಾ ಅಕ್ರಮಗಳನ್ನು ಬಹಿರಂಗಪಡಿಸುವ ಉದ್ದೇಶದಿಂದ ಮೇ 6 ರಿಂದ 10ರ ತನಕ ಬೃಹತ್ ಪಾದಯಾತ್ರೆ ಚಳವಳಿ ಹಮ್ಮಿಕೊಂಡಿದ್ದೇವೆ" ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ; ಗುಡ್ಡೇಕೊಪ್ಪದಿಂದ ಶಿವಮೊಗ್ಗ ತನಕ ನಡೆಯವ ಪಾದಯಾತ್ರೆಯ ಸಮಾರೋಪ ಸಮಾರಂಭ ಶಿವಮೊಗ್ಗದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ವಿವಿಧ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕಾಂಗ್ರೆಸ್ ಮುಖಂಡ ಅಮ್ರಪಾಲಿ ಸುರೇಶ್ ಪಾದಯಾತ್ರೆ ಬಗ್ಗೆ ಮಾಹಿತಿ ನೀಡಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಸಾಮಾನ್ಯರ ದಿನ ನಿತ್ಯದ ಜೀವನವನ್ನು ದುಸ್ವಪ್ನ ದಂತೆ ಕಾಡುತಿದ್ದು, ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತಿದೆ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರಿ ನೇಮಕಾತಿಯಲ್ಲಿ ಅಕ್ರಮ ಭ್ರಷ್ಟಾಚಾರ ಐತಿಹಾಸ ಅಂಚನ್ನು ದಾಟಿದ್ದು ಸಾವಿರಾರು ಕೋಟಿಯ ಹಗರಣ ನಡೆದಿದ್ದು, ಅರ್ಹ ಉದ್ಯೋಗಾಂಕ್ಷಿಗಳು ಜೀವನದ ಭರವಸೆ ಕಳೆದುಕೊಂಡಿದ್ದಾರೆ. ಅದರಲ್ಲೂ ಪಿಎಸ್ಐ ನೇಮಕಾತಿ ಹಗರಣ ಸುಸಂಸ್ಕೃತ ನಾಡಿನ ಗೌರವವನ್ನು ಮಣ್ಣು ಪಾಲು ಮಾಡಿದೆ ಎಂದು ತಿಳಿಸಿದ್ದಾರೆ.
ಇದರ ನೈತಿಕ ಹೊಣೆಗಾರಿಕೆ ಹೊತ್ತು ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ರಾಜನಾಮೆ ನೀಡಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಪದವಿಯ ಘನತೆ ಉಳಿಸುವ ನಿಟ್ಟಿನಲ್ಲಿ ಅವರನ್ನು ಸಂಪುಟದಿಂದ ಕೈ ಬಿಟ್ಟು ಹಗರಣದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕೆಪಿಸಿಸಿ ವಕ್ತಾರರಾದ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಗೃಹ ಸಚಿವರ ಕ್ಷೇತ್ರದಿಂದ ಶಿವಮೊಗ್ಗದ ತನಕ ಬ್ರಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಸೇರಬೇಕಾಗಿ ಮನವಿ ಮಾಡಿದ್ದಾರೆ.