ಶಿವಮೊಗ್ಗ; ಜನರ ಪ್ರಾಣ ಮುಖ್ಯವೋ, ಧ್ವಜ ಮುಖ್ಯವೋ?
ಶಿವಮೊಗ್ಗ, ಆಗಸ್ಟ್, 09: "ಜನರ ಹೆಣದ ಮೇಲೆ ಬಾವುಟ ನೆಡಲು ಹೊರಟಿದ್ದೀರಾ?. ಜನರ ಪ್ರಾಣ ಮುಖ್ಯವೋ ಬಾವುಟ ಹಾರಿಸುವುದು ಮುಖ್ಯವೋ?" ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರೆ ಜಿ. ಪಲ್ಲವಿ ಪಿಡಿಓ ಒಬ್ಬರಿಗೆ ತರಾಟೆಗೆ ತೆಗೆದುಕೊಂಡರು.
ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಆದರೆ ಇದುವರೆಗೂ ಯಾವ ಅಧಿಕಾರಿಗಳು ಅವರ ನೆರವಿಗೆ ನಿಂತಿಲ್ಲ. ಆದ್ದರಿಂದ ಅಲ್ಲಿನ ಜನರು ಯಾವುದೇ ದಾರಿ ಇಲ್ಲದೆ ಪ್ರತಿನಿತ್ಯವೂ ಮಳೆಯ ನೀರಿನಲ್ಲೇ ಜೀವನ ಸಾಗಿಸುವಂತಾಗಿದೆ. ಜನಪ್ರತಿನಿಧಿಗಳು ಇದ್ದು ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದರು.
ಶಿವಮೊಗ್ಗ ಜಿಲ್ಲೆಗೆ ಹಳದಿ ಅಲರ್ಟ್; ಭದ್ರಾ ಡ್ಯಾಂ ಒಳಹರಿವು ಹೆಚ್ಚಳ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅಲ್ಲಿನ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಹಲವು ಮನೆಗಳು ಕುಸಿದ ಕಾರಣ ಜನರು ಪರದಾಡುವಂತಾಗದೆ. ಹೀಗೆ ಮಳೆಯಿಂದ ಹಾನಿಗೊಳಗಾದ ಗ್ರಾಮಗಳಿಗೆ ಕಾಂಗ್ರೆಸ್ ಜಿಲ್ಲಾ ವಕ್ತಾರೆ ಪಲ್ಲವಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಧನಸಹಾಯ ಮಾಡಿದರು.
ಬಾವುಟಕ್ಕೆ ಕೋಲು ತರುವುದೆ ಮುಖ್ಯನಾ?: ಕೊಮ್ಮನಾಳು ಗ್ರಾಮದಲ್ಲಿ ಯಶೋದಮ್ಮ ಮತ್ತು ಕಾಂತಿ ಬಾಯಿ ಎಂಬುವವರಿಗೆ ಸೇರಿದ ಮನೆಗಳು ಕುಸಿದಿವೆ. ಈ ವಿಚಾರ ತಿಳಿದು ಪಲ್ಲವಿ ಅಲ್ಲಿಗೆ ಭೇಟಿ ನೀಡಿ, ಮನೆಯವರಿಗೆ ನೆರವು ನೀಡಿದರು. ಶನಿವಾರ ಮನೆ ಕುಸಿದಿದ್ದರೂ ಅಧಿಕಾರಿಗಳು ಮಾತ್ರ ಇತ್ತ ತಲೆ ಹಾಕಿರಲಿಲ್ಲ ಎಂದು ಗ್ರಾಮಸ್ಥರು ದೂರಿದರು. ಇದೆ ವೇಳೆ ಸ್ಥಳಕ್ಕೆ ಆಗಮಿಸಿದ ಪಿಡಿಒಗೆ ಪಲ್ಲವಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.
ಮನೆಗಳು ಕುಸಿದು ಮೂರು ದಿನಗಳಾಗಿವೆ. ಆದರೂ ಇದುವರೆಗೂ ಸ್ಥಳಕ್ಕೆ ಭೇಟಿ ನೀಡದಿರಲು ಕಾರಣವೇನು ಎಂದು ಪಲ್ಲವಿ ಅವರು ಪಿಡಿಒಗೆ ಪ್ರಶ್ನಿಸಿದರು. ಇದಕ್ಕೆ ಪಿಡಿಒ ಅವರು ಧ್ವಜ ವಿತರಣೆ ಕಾರ್ಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ ಎಂದು ತಿಳಿಸಿದರು. ಇದರಿಂದ ಪಲ್ಲವಿ ಮತ್ತೆ ಆಕ್ರೋಶಗೊಂಡು "ಜನರ ಹೆಣದ ಮೇಲೆ ಧ್ವಜ ನೆಡಲು ಹೊರಟ್ಟಿದ್ದೀರಾ? ಜನರ ಪ್ರಾಣ ಮುಖ್ಯವೋ ಬಾವುಟ ಹಾರಿಸುವುದು ಮುಖ್ಯವೋ?" ಎಂದು ಪ್ರಶ್ನಿಸಿದರು.
ಅಲ್ಲದೆ ಹಾನಿಗೊಳಗಾದ ಪ್ರದೇಶದ ಜನರಿಗೆ ಕೂಡಲೇ ಪರಿಹಾರದ ವ್ಯವಸ್ಥೆ ಮಾಡುವಂತೆ ಎಚ್ಚರಿಸಿದರು. ಈ ಸಮಯದಲ್ಲಿ ಮಳೆಯಿಂದ ಎಷ್ಟೋ ಮನೆಗಳು ಜಲಾವೃತವಾಗಿವೆ. ಅವರ ಕಡೆಗೆ ಗಮನಹರಿಸದಿರುವುದಕ್ಕೆ ನಿಜಕ್ಕೂ ನಾಚಿಕೆ ಆಗಬೇಕು. ಅವರೇನು ಮನೆಯ ಹೊರಗಡೆ ಮಳೆಯಲ್ಲಿಯೇ ಜೀವನ ನಡೆಸಬೇಕಾ? ಎಂದು ಹೇಳಿದರು.