ನಿವೃತ್ತಿಯಾಗಬೇಡಿ ಎಂದು 85ರ ಕಾಗೋಡಿಗೆ ಅಭಿಮಾನಿಗಳು ಒತ್ತಾಯಿಸಿದ್ದೇಕೆ?
ಶಿವಮೊಗ್ಗ, ಆಗಸ್ಟ್ 01: ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಶಿವಮೊಗ್ಗ ಜಿಲ್ಲೆ, ರಾಜ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ ತಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ತಿಳಿಸಿದ್ದಾರೆ.
ಇಲ್ಲಿನ ಪ್ರೆಸ್ ಟ್ರಸ್ಟ್ನಲ್ಲಿ ಇಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಗೋಡು ತಿಮ್ಮಪ್ಪನವರು ಜನರಿಗಷ್ಟೇ ಅಲ್ಲ, ಪಕ್ಷಕ್ಕೆ ಹಾಗೂ ನಮಗೆ ಅನಿವಾರ್ಯ. ಹಾಗಾಗಿ ಅವರು ಸಕ್ರೀಯ ರಾಜಕೀಯದಲ್ಲಿ ಮುಂದುವರೆಯಬೇಕು ಎಂಬುದು ನಮ್ಮ ಒತ್ತಾಸೆ.
ರಾಜಕೀಯ ನಿವೃತ್ತಿ ಘೋಷಿಸಿದ ಕಾಗೋಡು ತಿಮ್ಮಪ್ಪ!
ಆದರೆ ಅವರ ರಾಜಕೀಯ ನಿವೃತ್ತಿಯ ನಿರ್ಧಾರ ನಮಗೆ ಅತ್ಯಂತ ದಿಗ್ಭ್ರಮೆ ಮತ್ತು ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಮಾಜವಾದಿ ಹಿನ್ನಲೆಯಿಂದ ಬಂದಿರುವ ಕಾಗೋಡು ತಿಮ್ಮಪ್ಪನವರು ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಭೂ ಸುಧಾರಣೆ ಕಾಯಿದೆ ರೂಪಿಸುವಲ್ಲಿ ಹಾಗೂ ಬಂಗಾರಪ್ಪ ಸಿಎಂ ಆಗಿದ್ದಾಗ ಭೂಮಿ ಹಂಚಿಕೆ ವಿಷಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಕಂದಾಯ ಸಚಿವರಾಗಿದ್ದಾಗ ಲಕ್ಷಾಂತರ ಜನರಿಗೆ ಅನುಕೂಲವಾಗುವಂತೆ ಬಗರ್ ಹುಕುಂ ಹಕ್ಕುಪತ್ರ ವಿತರಣೆಯಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಅದೇ ರೀತಿ ಇನಾಂ ಭೂಮಿ ಹಂಚಿಕೆಗೂ ಕಾರಣರಾಗಿದ್ದಾರೆ. ಭೂ ಕಬಳಿಕೆಯಡಿ ಜನರ ಮೇಲೆ ಮೊಕದ್ದಮೆ ದಾಖಲಾಗುವ ಸಾಧ್ಯತೆ ಇದೆ.
ಇಂತಹ ಸಂದರ್ಭದಲ್ಲಿ ಅವರು ರಾಜಕೀಯದಲ್ಲಿ ಇರಬೇಕಾಗಿರುವ ಅವಶ್ಯಕತೆ ತುಂಬಾ ಇದೆ ಎಂದು ಹೇಳಿದರು. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವ ಹಾಗೂ ಸ್ಪೀಕರ್ ಆಗಿದ್ದಾಗ ಮುಳುಗಡೆ ರೈತರ ಹಿತ ಕಾಯುವ ಕೆಲಸ ಮಾಡಿದ್ದಾರೆ. ಸರ್ವೇಯರ್ಗಳ ನೇಮಕ, ಪೋಡಿ ಮತ್ತಿತರ ಕೆಲಸಗಳ ಅನುಷ್ಠಾನಕ್ಕೆ ಪ್ರಯತ್ನಿಸಿದ್ದಾರೆ.
ಚುನಾವಣೆಯ ಸೋಲಿನ ನಂತರವೂ ತಮ್ಮ ಹಾಗೂ ಜಿಲ್ಲೆಯ ನಾನಾ ಭಾಗಗಳಿಗೆ ಭೇಟಿ ನೀಡಿ ಮಳೆ ಹಾನಿ ನಷ್ಟದ ಅಂದಾಜಿನ ಬಗ್ಗೆ ಗಮನಹರಿಸಿ ಸರ್ಕಾರ ತೆಗೆದುಕೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷಕ್ಕೆ ಅವರ ಅಗತ್ಯವಿದೆ. ಹಾಗಾಗಿ ಅವರು ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಪಡೆಯಬಾರದು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎನ್.ರಮೇಶ್, ವಿಜಯಲಕ್ಷ್ಮಿ ಪಾಟೀಲ್, ವೈ.ಎಚ್.ನಾಗರಾಜ್ ಹಾಗೂ ಪಲ್ಲವಿ ಮತ್ತಿತರರಿದ್ದರು.