ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ವಿಭಿನ್ನ ಪ್ರತಿಭಟನೆ
ಶಿವಮೊಗ್ಗ, ಫೆಬ್ರವರಿ 6: ಅಗತ್ಯ ವಸ್ತುಗಳ ಬೆಲೆ ಏರಿಕೆ, ಗಗನ ಮುಟ್ಟಿದ ಪೆಟ್ರೋಲ್, ಡೀಸೆಲ್ ದರ, ಜನವಿರೋಧಿ ಕಾಯ್ದೆಗಳಿಂದ ಜನರಿಗೆ ಬರೆ ಹಾಕಿದಂತಾಗಿದ್ದು, ಇದೆಲ್ಲವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿವಮೊಗ್ಗದಲ್ಲಿ ಶನಿವಾರ ವಿಭಿನ್ನ ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗದ ಶಿವಪ್ಪ ನಾಯಕ ಪ್ರತಿಮೆ ಬಳಿಯಿಂದ ಗೋಪಿ ಸರ್ಕಲ್ ವರೆಗೆ ಎತ್ತಿನ ಗಾಡಿ, ಟಾಂಗಾ ಹಾಗೂ ಸೈಕಲ್ ನಲ್ಲಿ ಮೆರವಣಿಗೆ ನಡೆಸಲಾಯಿತು.
ರೈತರ ಪ್ರತಿಭಟನೆ: ಕರ್ನಾಟಕದ ಜಿಲ್ಲೆಗಳ ಅಪ್ಡೇಟ್ಸ್
ಅಡುಗೆ ಅನಿಲ ದರ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ, ವಿದ್ಯುತ್ ದರವು ಏರಿಕೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆಯು ದುಬಾರಿಯಾಗಿದೆ. ಈ ನಡುವೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು. ಇವುಗಳನ್ನು ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಇದೆ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, 'ಕೊರೊನಾ ಲಾಕ್ ಡೌನ್ ನಿಂದಾಗಿ ಜನರಿಗೆ ಭಾರೀ ಹೊಡೆತ ಬಿದ್ದಿದೆ. ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಈ ಮಧ್ಯೆ ಬಿಜೆಪಿ ಸರ್ಕಾರ ಎಲ್ಲದಕ್ಕೂ ದರ ಏರಿಕೆ ಮಾಡಿ, ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು' ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ಮಹಾನಗರ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ, ಮಹಿಳಾ ಘಟಕ ರಾಜ್ಯಾಧ್ಯಕ್ಷ ಡಾ.ಪುಷ್ಪ ಅಮರನಾಥ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗಿರೀಶ್, ಜಿಲ್ಲಾ ವಕ್ತಾರರಾದ ಪಲ್ಲವಿ, ಪ್ರಮುಖರಾದ ಚಂದ್ರಭೂಪಾಲ್, ಪ್ರವೀಣ್ ಸೇರಿದಂತೆ ಹಲವರು ಇದ್ದರು.