ವಿಮಾನ ನಿಲ್ದಾಣ ಟರ್ಮಿನಲ್ ವಿನ್ಯಾಸಕ್ಕೆ ಕಾಂಗ್ರೆಸ್ ಕ್ಯಾತೆ!
ಶಿವಮೊಗ್ಗ, ಜೂನ್ 21; ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಬಿ. ಎಸ್. ಯಡಿಯೂರಪ್ಪ ಕನಸು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಯೋಜನೆಗೆ ಇದ್ದ ಅಡೆತಡೆಗಳನ್ನು ಅವರು ನಿವಾರಿಸಿದ್ದರು. ಯೋಜನೆಗೆ ಶಂಕು ಸ್ಥಾಪನೆಗೊಂಡು ಕಾಮಗಾರಿ ಆರಂಭವಾಗಿದೆ.
Recommended Video
ಶಿವಮೊಗ್ಗ ತಾಲೂಕು ಸೋಗಾನೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಕಳೆದ ವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ ರನ್ ವೇ ಕಾಮಗಾರಿ ಪರಿಶೀಲನೆ ನಡೆಸಿದರು. ಕಾಮಗಾರಿ ಪ್ರಗತಿ ಕುರಿತು ಮಾಹಿತಿ ಪಡೆದಿದ್ದಾರೆ.
ಶಿವಮೊಗ್ಗ; ವಿಮಾನ ನಿಲ್ದಾಣದ ಟರ್ಮಿನಲ್ ನೀಲನಕ್ಷೆ ಅನಾವರಣ
ಅಂದು ಯಡಿಯೂರಪ್ಪ ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಡಿಜಿಟನ್ ನೀಲನಕ್ಷೆಯನ್ನು ಅನಾವರಣಗೊಳಿಸಿದ್ದರು. ಕಾಂಗ್ರೆಸ್ ಪಕ್ಷ ವಿಮಾನ ನಿಲ್ದಾಣದ ವಿನ್ಯಾಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ವಿನ್ಯಾಸವನ್ನು ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದೆ.
ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಸುಮಾರು 384 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. 216.06 ಕೋಟಿ ರೂ. ವೆಚ್ಚದಲ್ಲಿ ರನ್ ವೇ ಮತ್ತು ಇತರೆ ಕಾಮಗರಿಗಳು ನಡೆಯುತ್ತಿವೆ. 110 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್, ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡ ನಿರ್ಮಾಣವಾಗುತ್ತಿದೆ.
ಶಿವಮೊಗ್ಗ ವಿಮಾನ ನಿಲ್ದಾಣ; ಯೋಜನೆಯ ಮುಖ್ಯಾಂಶಗಳು
ವಿನ್ಯಾಸಕ್ಕೆ ಕ್ಯಾತೆ ಏಕೆ?; ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಡಿಜಿಟನ್ ನೀಲನಕ್ಷೆ ಅನಾವರಣಗೊಂಡಿದೆ. ಟರ್ಮಿನಲ್ ಕಟ್ಟಡದ ಮಾದರಿ ಕಮಲದ ಹೂವಿನ ಮಾದರಿಯಲ್ಲಿದೆ. ಇದು ರಾಜಕೀಯ ಪಕ್ಷದ ಚಿಹ್ನೆಯಾಗಿದೆ. ಜನರ ತೆರಿಗೆ ಹಣದಲ್ಲಿ ನಿರ್ಮಾಣ ಮಾಡುತ್ತಿರುವ ನಿಲ್ದಾಣದಲ್ಲಿ ರಾಜಕೀಯ ಪಕ್ಷದ ಚಿಹ್ನೆಯ ಪ್ರಚಾರ ಸರಿಯಲ್ಲ ಎಂಬುದು ಕಾಂಗ್ರೆಸ್ ಆಕ್ಷೇಪ.
ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಈ ಕುರಿತು ಮಾತನಾಡಿದ್ದಾರೆ. "ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇದರ ವಿನ್ಯಾಸ ಕಮಲದ ಆಕಾರದಲ್ಲಿದೆ. ಕಮಲ ಯಾವ ಪಕ್ಷದ ಚಿಹ್ನೆ ಎಂದು ಎಲ್ಲರಿಗೂ ಗೊತ್ತಿದೆ. ಪಕ್ಷದ ಚಿಹ್ನೆಗೆ ಪ್ರಚಾರ ನೀಡಲು ಸರ್ಕಾರದ ಹಣ ಬಳಕೆ ಮಾಡುವುದು ಸರಿಯಲ್ಲ. ನಮ್ಮ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಈ ವಿನ್ಯಾಸ ನಿರ್ಮಾಣ ಕೂಡಲೇ ನಿಲ್ಲಿಸಬೇಕು ಹಾಗೂ ಇದನ್ನು ಬದಲಿಸಬೇಕು ಎಂದು ಒತ್ತಾಯಿಸಿದ್ದಾರೆ" ಎಂದು ಹೇಳಿದ್ದಾರೆ.
1 ವರ್ಷದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ
ಉತ್ತರ ಪ್ರದೇಶದ ಪ್ರಕರಣ; 2016ರಲ್ಲಿ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಕಾಂಗ್ರೆಸ್ ಉಲ್ಲೇಖಿಸುತ್ತಿದೆ. ಬಿಎಸ್ಪಿ ಪಕ್ಷ ತಮ್ಮ ಪಕ್ಷದ ಚಿಹ್ನೆ ಆನೆ ಆಕಾರದಲ್ಲಿ ಹಲವು ಪ್ರತಿಮೆ ನಿರ್ಮಾಣ ಮಾಡಿತ್ತು. ಆಗ ರಾಜಕೀಯ ಪಕ್ಷದ ಚಿಹ್ನೆ ಪ್ರಚಾರಕ್ಕೆ ತೆರಿಗೆದಾರರ ಹಣವನ್ನು ಬಳಸುವಂತಿಲ್ಲ ಎಂಬ ತೀರ್ಪು ನೀಡಲಾಗಿತ್ತು.
ಜನರ ತೆರಿಗೆ ಹಣ ಮತ್ತು ಜಾಗವನ್ನು ಬಳಸಿಕೊಂಡು ರಾಜಕೀಯ ಪಕ್ಷ ಅಥವ ಅದರ ಚಿಹ್ನೆಗೆ ಪ್ರಚಾರ ನೀಡಿದರೆ ಅದು ಪಾರದರ್ಶಕ ಚುನಾವಣೆಗೆ ವಿರುದ್ಧವಾದುದ್ದು ಎಂದು ಚುನಾವಣಾ ಆಯೋಗ ಸಹ ಹೇಳಿದೆ.
1968ರ ಚುನಾವಣಾ ಚಿಹ್ನೆ ಆದೇಶದ ಪ್ಯಾರಾ 16ರ ನಿಯಮಾವಳಿ ಉಲ್ಲಂಘನೆ ಮಾಡಿದರೆ ಆ ಪಕ್ಷ ತನ್ನ ಚುನಾವಣೆ ಚಿಹ್ನೆಯನ್ನೆ ಕಳೆದುಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಸರ್ಕಾರ ಕೂಡಲೇ ಶಿವಮೊಗ್ಗ ವಿಮಾನ ನಿಲ್ದಾಣದ ಕಮಲದ ವಿನ್ಯಾಸವನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದೆ.
ಯಡಿಯೂರಪ್ಪ ಕನಸು; ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂಬುದು ಯಡಿಯೂರಪ್ಪ ಕನಸು. ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗಲೇ ಶಿವಮೊಗ್ಗ ವಿಮಾನ ನಿಲ್ದಾಣದ ಯೋಜನೆ ಸಿದ್ಧವಾಗಿತ್ತು. ಆದರೆ ಹಲವಾರು ಅಡೆತಡೆಗಳ ಕಾರಣಕ್ಕೆ ಯೋಜನೆ ಸ್ಥಗಿತವಾಗಿತ್ತು.
ಯಡಿಯೂರಪ್ಪ 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದರು. ವಿಮಾನ ನಿಲ್ದಾಣ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದರು. ವಿಮಾನಯಾನ ಖಾತೆ ರಾಜ್ಯ ಸಚಿವರಾಗಿದ್ದ ದಾವಣಗೆರೆಯ ಸಂಸದ ಜಿ. ಎಂ. ಸಿದ್ದೇಶ್ವರರನ್ನು ಸ್ಥಳಕ್ಕೆ ಕರೆತಂದರು. ಅಧಿಕಾರಿಗಳ ಸಭೆ ನಡೆಸಿದರು. ಆದರೆ ಯೋಜನೆ ಮತ್ತೆ ವಿಳಂಬವಾಯಿತು.
ಈಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಯಡಿಯೂರಪ್ಪ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದರು. 662.38 ಎಕರೆ ಪ್ರದೇಶದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡರೆ ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ವಿಮಾನದಲ್ಲಿ ಹಾರಾಟ ನಡೆಸಬೇಕು ಎಂಬ ಮಲೆನಾಡಿನ ಜನರ ಆಸೆಯೂ ಈಡೇರಲಿದೆ.