ಕೊಲೆ ಬೆದರಿಕೆ ಪ್ರಕರಣ; ಈಶ್ವರಪ್ಪ ಆಪ್ತ ಸಹಾಯಕನಿಂದ ದೂರು ದಾಖಲು
ಶಿವಮೊಗ್ಗ, ಜನವರಿ 6: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಪ್ರಾಣ ಬೆದರಿಕೆ ಕರೆ!
ಸಚಿವ ಕೆ.ಎಸ್.ಈಶ್ವರಪ್ಪನವರ ಆಪ್ತ ಸಹಾಯಕ ಸಂತೋಷ್ ನಿನ್ನೆ ಸಂಜೆ ಸಿಇಎನ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಕುರಿತಂತೆ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಜನವರಿ 3ರಂದು ತಮಿಳು ಹಾಗೂ ಉರ್ದು ಮಿಶ್ರಿತ ಭಾಷೆ ಮಾತನಾಡುವ ವ್ಯಕ್ತಿಯೋರ್ವ, ಈಶ್ವರಪ್ಪನವರು ಹಿಂದುತ್ವ, ಸಿಎಎ ಹಾಗೂ ಆರ್ಟಿಕಲ್ 370 ಕುರಿತಂತೆ ಪರವಾಗಿ ಮಾತನಾಡಿರುವುದರಿಂದ 48 ಗಂಟೆಯೊಳಗೆ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಸಂತೋಷ್ ದಾಖಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಎಸ್ಪಿ ಕೆ.ಎಂ.ಶಾಂತರಾಜು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಮಾಹಿತಿ ಕಲೆ ಹಾಕಲು ತಂಡಗಳನ್ನು ಈಗಾಗಲೇ ಇತರೆಡೆ ಕಳುಹಿಸಲಾಗಿದೆ ಎಂದರು.