ಶಿವಮೊಗ್ಗದಲ್ಲಿ ಅನಾವರಣಗೊಂಡ ಬಸವೇಶ್ವರರ ಪುತ್ಥಳಿ; ಗೊತ್ತಿರಬೇಕಾದ 10 ಸಂಗತಿಗಳು
ಶಿವಮೊಗ್ಗ, ಜುಲೈ 24: ಲಂಡನ್ನಿಂದ ಶಿವಮೊಗ್ಗಕ್ಕೆ ಬಂದಿದ್ದ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಕೊನೆಗೂ ಅನಾವರಣವಾಗಿದೆ. ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ವರ್ಚುವಲ್ ವಿಡಿಯೋ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಸವೇಶ್ವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, "ಬಸವೇಶ್ವರರು ಸಮಾನತೆ, ಸಮ ಸಮಾಜದ ತತ್ವವನ್ನು ಸಾರಿದವರು. ಶ್ರಮಿಕ ಸಮಾಜದವರಿಗೆ ಸಮಾನತೆ ಬಗ್ಗೆ 12ನೇ ಶತಮಾನದಲ್ಲೇ ಜಗತ್ತಿಗೆ ತಿಳಿಸಿದ್ದವರು. ಅವರ ಪ್ರತಿಮೆ ಅನಾವರಣ ಆಗುತ್ತಿರುವುದು ಸಂತೋಷವನ್ನುಂಟು ಮಾಡಿದೆ,'' ಎಂದು ತಿಳಿಸಿದರು.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ""ಜಿಲ್ಲೆಯಲ್ಲಿ ಶರಣ ಪರಂಪರಯೇ ಇದೆ. ಇಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣಗೊಳ್ಳುತ್ತಿರುವುದು ನಮ್ಮ ಸೌಭಾಗ್ಯ. ಇದೊಂದು ಪುಣ್ಯದ ಕೆಲಸವಾಗಿದೆ,'' ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ""ಶಿವಮೊಗ್ಗ ಜಿಲ್ಲೆಯಲ್ಲಿ ಸರ್ವ ಜಾತಿಯವರು ಸಹೋದರರಂತೆ ಬಾಳುತ್ತಿದ್ದಾರೆ. ಬಸವಣ್ಣನವರ ಪುತ್ಥಳಿ ಇಲ್ಲಿ ಪ್ರತಿಷ್ಠಾಪನೆ ಆಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ,'' ಎಂದರು.
ಬಸವೇಶ್ವರ ಪುತ್ಥಳಿ ಬಗ್ಗೆ ಗೊತ್ತಿರಬೇಕಾದ 10 ಸಂಗತಿಗಳು ಇಲ್ಲಿದೆ
1. ಲಂಡನ್ನ ಲ್ಯಾಂಬೆತ್ ನಗರದಲ್ಲಿ ಥೇಮ್ಸ್ ನದಿ ದಂಡೆ ಮೇಲೆ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಅಲ್ಲಿನ ಮೇಯರ್ ಆಗಿದ್ದ ನೀರಜ್ ಪಟೇಲ್ ಈ ಬಸವೇಶ್ವರರ ಪುತ್ಥಳಿಯನ್ನು ಮಾಡಿಸಿದ್ದರು.
2. 2015ರ ನವೆಂಬರ್ 14ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಲಂಡನ್ ಭೇಟಿ ವೇಳೆ ಬಸವೇಶ್ವರ ಪುತ್ಥಳಿಯನ್ನು ಅನಾವರಣ ಮಾಡಿದ್ದರು.
3. ನೀರಜ್ ಪಟೇಲ್ ಒಂದೇ ಮಾದರಿಯ ಎರಡು ಪುತ್ಥಳಿಗಳನ್ನು ಮಾಡಿಸಿದ್ದರು. ಲಂಡನ್ನಲ್ಲಿ ಒಂದು ಪುತ್ಥಳಿಯ ಪ್ರತಿಷ್ಠಾಪನೆ ಮಾಡಲಾಗಿದ್ದು, ಎರಡನೇ ಪುತ್ಥಳಿಯನ್ನು ಶಿವಮೊಗ್ಗ ನಗರಕ್ಕೆ ಕೊಡುಗೆಯಾಗಿ ನೀಡಿದ್ದರು. 2018ರ ನವೆಂಬರ್ 22ರಂದು ಈ ಪುತ್ಥಳಿ ಶಿವಮೊಗ್ಗಕ್ಕೆ ಆಗಮಿಸಿತ್ತು.
4. ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು. ಮಹಾನಗರ ಪಾಲಿಕೆಗೆ ಪುತ್ಥಳಿ ಹಸ್ತಾಂತರ ಮಾಡಲಾಯಿತು. ಆಗಿನಿಂದ ಈ ಪುತ್ಥಳಿ ಪಾಲಿಕೆ ಆವರಣದಲ್ಲಿ ಸೇಫ್ ಲಾಕರ್ನಲ್ಲಿ ಬಂಧಿಯಾಗಿತ್ತು.
5. 2018- 19ನೇ ಸಾಲಿನ ಬಜೆಟ್ನಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಮಹಾನಗರ ಪಾಲಿಕೆ 25 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿತ್ತು.
6. ಪುತ್ಥಳಿ ಸ್ಥಾಪನೆ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆ ಈ ಪ್ರಸ್ತಾವನೆ ಹಿಂದಕ್ಕೆ ಬಂದಿತ್ತು.
7. ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿಗಳ ಸ್ಥಾಪನೆಗೆ ನ್ಯಾಯಾಲಯ ಅವಕಾಶ ನಿರಾಕರಿಸಿದೆ. ಈ ನಿರ್ದೇಶನದ ಹಿನ್ನೆಲೆಯಲ್ಲಿ ಬಸವೇಶ್ವರರ ಪುತ್ಥಳಿ ಪಾಲಿಕೆಯಲ್ಲೇ ಉಳಿದಿತ್ತು.
8. ಪುತ್ಥಳಿ ಸ್ಥಾಪನೆ ಮಾಡವಂತೆ ಶಿವಮೊಗ್ಗದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕಾರ್ಪೊರೇಟರ್ ಎಚ್.ಸಿ. ಯೋಗೇಶ್ ಒಮ್ಮೆ ಬಸವೇಶ್ವರರಂತೆ ಡ್ರೆಸ್ ಧರಿಸಿ ಪಾದಯಾತ್ರೆ ಮಾಡಿದ್ದರು.
9. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಸವೇಶ್ವರರ ಪುತ್ಥಳಿ ಸ್ಥಾಪನೆ ಸಂಬಂಧ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಅದರಂತೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
Recommended Video
10. ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಗುತ್ತಿದ್ದಂತೆ ಗಾಂಧಿ ಪಾರ್ಕ್ ಮುಂಭಾಗ ಸ್ಥಳ ಗುರುತಿಸಿ, ಮಹಾನಗರ ಪಾಲಿಕೆ ವತಿಯಿಂದ ಬಸವೇಶ್ವರರ ಪುತ್ಥಳಿ ಸ್ಥಾಪಿಸಲಾಯಿತು. ಶುಕ್ರವಾರ ಪಾಲಿಕೆ ಆವರಣದಿಂದ ಪುತ್ಥಳಿಯನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲಾಯಿತು. ಇವತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪುತ್ಥಳಿಯ ಅನಾವರಣ ಮಾಡಿದರು.