ಶಿಕಾರಿಪುರ ನೀರಾವರಿಗೆ ಒಟ್ಟು 1100 ಕೋಟಿ ಗಿಫ್ಟ್ ಕೊಟ್ಟ ಸಿಎಂ
ಶಿವಮೊಗ್ಗ, ಸೆಪ್ಟೆಂಬರ್ 7: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರದ ಜಲ ಯೋಜನೆಗಳ ಸಲುವಾಗಿ ಒಟ್ಟು 1,100 ಕೋಟಿ ಕೊಡುಗೆ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕೆರೆಗಳ ಭರ್ತಿಗೆಂದು ತಮ್ಮ ತವರು ಕ್ಷೇತ್ರಕ್ಕೆ 250 ಕೋಟಿ ರೂಪಾಯಿ ಅನುದಾನ ಬಿಡುಗಡೆ ಘೋಷಿಸಿದ್ದರು. ಇದಾದ ನಂತರ ಸೆಪ್ಟೆಂಬರ್ 6ರ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಿಕಾರಿಪುರದಲ್ಲಿ ಕೆರೆಗಳಿಗೆ ನೀರು ಹರಿಸಲು 850 ಕೋಟಿ ರೂಪಾಯಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಒಟ್ಟು 1100 ಕೋಟಿ ರೂಪಾಯಿ ಅನುದಾನವು ಶಿಕಾರಿಪುರಕ್ಕೆ ದೊರೆತಂತಾಗಿದೆ.
ಶಿವಮೊಗ್ಗಕ್ಕೆ ಮತ್ತಷ್ಟು ಅನುದಾನ ನೀಡಿದ ಸಿಎಂ
ಕಾಮಗಾರಿಯ ಪ್ರಗತಿಗೆ ತಕ್ಕಂತೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ. ಇದರೊಂದಿಗೆ ಹಿರೇಕೆರೂರು ತಾಲ್ಲೂಕು ಪುರದಕೆರೆ ಗ್ರಾಮದ ಬಳಿಯ ತುಂಗಭದ್ರಾ ನಂದಿಯಿಂದ ಏತ ನೀರಾವರಿ ಮೂಲಕ ಶಿಕಾರಿಪುರ ತಾಲ್ಲೂಕಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ.
ನೀರಿನ ಉಳಿತಾಯದ ಕುರಿತೂ ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು, ಈಗ ರಾಜ್ಯದಲ್ಲಿ ಜಲಾಶಯಗಳು ಭರ್ತಿಯಾದ ನಂತರ ನೀರು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆದು ಅದನ್ನು ಕರೆಗಳಿಗೆ ಭರ್ತಿ ಮಾಡುವ ಯೋಜನೆ ಕುರಿತು ಆಲೋಚಿಸಲಾಗಿದೆ.