ಶಿವಮೊಗ್ಗ: 9 ತಿಂಗಳ ತುಂಬು ಗರ್ಭಿಣಿ ನರ್ಸ್ ಗೆ ಸಿಎಂ ಕರೆ
ಶಿವಮೊಗ್ಗ, ಮೇ 10: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೂಪಾ ಅವರು ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದರೂ, ರಜೆ ಪಡೆಯದೇ ಪ್ರತಿನಿತ್ಯ 60 ಕಿ.ಮೀ ದೂರದಿಂದ ಬಂದು ಕರ್ತವ್ಯಕ್ಕೆ ಹಾಜರಾಗುತ್ತಿದ್ದರು.
ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಗರ್ಭಿಣಿ ನರ್ಸ್ ರೂಪಾ ಅವರಿಗೆ ಕರೆ ಮಾಡಿ, ""ನಮಸ್ಕಾರ ಅಮ್ಮ, ನೀವು ನಮ್ಮ ಜಿಲ್ಲೆಯಲ್ಲಿ ಇಷ್ಟು ಶ್ರಮ ಪಟ್ಟು ಕರ್ತವ್ಯ ನಿರ್ವಹಿಸುತ್ತಿದ್ದೀರಾ. ನಿಮಗೆ ಅಭಿನಂದನೆಗಳು'' ಎಂದು ತಿಳಿಸಿದ್ದಾರೆ.
ಫ್ಲಾರೆನ್ಸ್ ನೈಟಿಂಗೇಲ್ ಯಾರು? ವಿಶ್ವ ದಾದಿಯರ ದಿನಾಚರಣೆ ಏಕೆ?
ನರ್ಸ್ ರೂಪಾ ಅವರಿಗೆ ಇಂದಿನಿಂದ ಕರ್ತವ್ಯಕ್ಕೆ ಹೊಗದೇ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ರೂಪಾ ಅವರು ಸಿಎಂ ಗೆ ಪ್ರತಿಕ್ರಿಯಿಸಿ, "ಸರ್.. ನಾನು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದು, ಅದಕ್ಕೆ ಮುಖ್ಯಮಂತ್ರಿಗಳು ನಾವು ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತೇವೆ ನೀವು ವಿಶ್ರಾಂತಿ ಪಡೆದುಕೊಳ್ಳಿ'' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಒತ್ತಡದ ನಡುವೆಯೂ ಗರ್ಭಿಣಿ ನರ್ಸ್ ಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿರುವುದು ಮತ್ತು ಅವರ ಆರೋಗ್ಯ ಕಾಳಜಿ ಮಾಡಿರುವುದು ಎಲ್ಲೆಡೆ ಪ್ರಶಂಸೆಗೆ ಕಾರಣವಾಗಿದೆ. ನರ್ಸ್ ರೂಪಾ ಅವರೊಂದಿಗೆ ಸಿಎಂ ಯಡಿಯೂರಪ್ಪ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ.