ಗ್ರಾಮೀಣ ಪ್ರದೇಶದ ನಿವಾಸಿಗಳ ಮನೆಮನೆಗೆ ಶುದ್ಧ ಕುಡಿಯುವ ನೀರು: ಸಚಿವ ಈಶ್ವರಪ್ಪ
ಶಿವಮೊಗ್ಗ, ನವೆಂಬರ್ 4: ಕೇಂದ್ರ ಪುರಸ್ಕೃತ ಜಲಜೀವನ ಮಿಷನ್ ಯೋಜನೆಯಡಿ ರಾಜ್ಯದ ಗ್ರಾಮೀಣ ಪ್ರದೇಶಗಳ ಪ್ರತಿ ಮನೆಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲು ಯೋಜನೆಯನ್ನು ರೂಪಿಸಿದ್ದು, ವ್ಯವಸ್ಥಿತ ಅನುಷ್ಠಾನ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಸಹ್ಯಾದ್ರಿ ಸಭಾಂಗಣದಲ್ಲಿ ಜಲಜೀವನ ಮಿಷನ್ ಆಯುಕ್ತರೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಅವರು, ಮಾಧ್ಯಮಗಳಿಗೆ ವಿವರ ನೀಡಿ ಮಾತನಾಡಿದರು. ಈಗಾಗಲೇ ರಾಜ್ಯದ ಗ್ರಾಮೀಣ ಪ್ರದೇಶದ 24,72,000 ಮನೆಗಳಿಗೆ ಶುದ್ಧ ನೀರನ್ನು ಪೂರೈಸುವ ನಲ್ಲಿಗಳನ್ನು ಅಳವಡಿಸಿ ನೀರನ್ನು ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮುಂದಿನ 100 ದಿನಗಳ ಅವಧಿಯಲ್ಲಿ 23,57,000 ಮನೆಗಳಿಗೆ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಕೊರೊನಾ ಲಸಿಕೆ ವಿತರಣೆಗೆ ಮಾಹಿತಿ ಸಂಗ್ರಹಿಸಲು ಶಿವಮೊಗ್ಗ ಡಿಸಿ ಸೂಚನೆ
ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರದಿಂದ 4,093 ಕೋಟಿ ರೂ. ಹಾಗೂ ರಾಜ್ಯದಿಂದ 3,982 ಕೋಟಿ ರೂ. ಸೇರಿದಂತೆ ಒಟ್ಟು 8,075 ಕೋಟಿ ರೂ.ಗಳನ್ನು ವ್ಯಯ ಮಾಡಲಾಗುವುದು ಎಂದ ಅವರು, ನಿಗದಿಪಡಿಸಿದ ಕಾಲಮಿತಿಯಲ್ಲಿ ಪ್ರತಿ ಮನೆಗೆ ನೀರು ಒದಗಿಸುವ ವಿಶ್ವಾಸ ಹೊಂದಿರುವುದಾಗಿ ಮಾಹಿತಿ ನೀಡಿದರು.
ರಾಜ್ಯದ 42,036 ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇದೆ. ಪ್ರಸಕ್ತ ಸಾಲಿನಲ್ಲಿ 39,963 ಶಾಲೆಗಳಿಗೆ ನೀರನ್ನು ಒದಗಿಸುವ ಕಾರ್ಯ ಪೂರ್ಣಗೊಂಡಿದೆ. ಪ್ರಧಾನಿಯವರ ಸೂಚನೆಯಂತೆ ಮುಂದಿನ 100 ದಿನಗಳೊಳಗಾಗಿ ಉಳಿದ 1595 ಶಾಲೆಗಳಿಗೂ ನೀರನ್ನು ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿದ್ದು, ಸ್ವಂತ ಕಟ್ಟಡ ಹೊಂದಿರುವ 44,852 ಅಂಗನವಾಡಿಗಳ ಪೈಕಿ 41,799 ಅಂಗನವಾಡಿಗಳಿಗೆ ನೀರಿನ ವ್ಯವಸ್ಥೆ ಇದೆ. ಉಳಿದ ಅಂಗನವಾಡಿ ಕೇಂದ್ರಗಳಿಗೆ ಮೂರೂವರೆ ತಿಂಗಳ ಅವಧಿಯೊಳಗಾಗಿ ನೀರನ್ನು ಒದಗಿಸಲಾಗುವುದು. ಅಲ್ಲದೇ ಇತರೆ ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಜಾತಿ ಜನಾಂಗಗಳ ವಸತಿ ನಿಲಯಗಳಿಗೂ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಇದೇ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾರ್ಯಾನುಷ್ಠಾನದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತೀಕ್ ಅಹ್ಮದ್, ಶಾಸಕ ಕೆ.ಬಿ ಅಶೋಕನಾಯ್ಕ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಜಲನಿಗಮ ಮಿಷನ್ ಚೀಫ್ ಇಂಜಿನಿಯರ್ ಹೊಳೆಆಚೆ ಮತ್ತು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಯರಾಮ್ ಇದ್ದರು.