ಆತಂಕ ಬೇಡ, ಸಹಜ ಸ್ಥಿತಿಯತ್ತಾ ಶಿವಮೊಗ್ಗ.. ಹೇಗಿದೆ ನಗರದ ಪರಿಸ್ಥಿತಿ?
ಶಿವಮೊಗ್ಗ, ಆಗಸ್ಟ್ 16: ವೀರ್ ಸಾವರ್ಕರ್ ಫ್ಲೆಕ್ಸ್ ವಿವಾದದ ಬೆನ್ನಿಗೆ ಶಿವಮೊಗ್ಗದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಂಗಳವಾರ ನಗರ ಸಹಜ ಸ್ಥಿತಿಗೆ ಮರಳಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.
ಭಾನುವಾರ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಅಮೀರ್ ಅಹಮದ್ ವೃತ್ತದಲ್ಲಿ ಮಂಗಳವಾರ ಪರಿಸ್ಥಿತಿ ತಿಳಿಯಾಗಿದೆ. ವಾಹನ ಮತ್ತು ಜನ ಸಂಚಾರದಲ್ಲಿ ಯಾವುದೇ ಅಡಚಣೆ ಇಲ್ಲ. ಸರ್ಕಲ್ನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಶಿವಮೊಗ್ಗ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡವಿದೆ: ಈಶ್ವರಪ್ಪ
ಇನ್ನು, ಗಾಂಧಿಬಜಾರ್, ಬಿ.ಹೆಚ್.ರಸ್ತೆಯಲ್ಲಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಸಿಟಿ ಸೆಂಟರ್ ಮಾಲ್ ಕೂಡ ಬಂದ್ ಆಗಿದೆ. ಹಳೆ ಶಿವಮೊಗ್ಗ ಭಾಗದಲ್ಲಿಯೂ ಅಂಗಡಿಗಳ ಬಾಗಿಲು ಹಾಕಿಸಲಾಗಿದೆ. ಆಸ್ಪತ್ರೆ, ಮೆಡಿಕಲ್ ಶಾಪ್ಗಳು ಎಂದಿನಿಂತೆ ಕಾರ್ಯನಿರ್ವಹಿಸುತ್ತಿವೆ.
ನೆಹರೂ ರಸ್ತೆಯಲ್ಲಿ ಕೆಲವು ಅಂಗಡಿಗಳ ಬಾಗಿಲು ತೆಗೆಯಲಾಗಿದೆ. ದುರ್ಗಿಗುಡಿಯಲ್ಲಿಯು ಕೆಲವು ಮಳಿಗೆಗಳಲ್ಲಿ ವಹಿವಾಟು ನಡೆಯುತ್ತಿದೆ. ಉಳಿದಂತೆ ನಗರದ ಹೊರವಲಯಗಳಲ್ಲಿ ಅಂಗಡಿಗಳು ತೆಗೆದಿದ್ದು, ವ್ಯಾಪಾರಕ್ಕೆ ಯಾವುದೇ ಸಮಸ್ಯೆ ಇಲ್ಲ.
ಜನಜೀವನ ಹೇಗಿದೆ?
ಶಿವಮೊಗ್ಗ ನಗರದಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಳಿದಂತೆ ಸರಕಾರಿ ಕಚೇರಿಗಳು, ಖಾಸಗಿ ಕಂಪನಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಜನ ಮತ್ತು ವಾಹನ ಸಂಚಾರವಿದೆ. ಬಿ.ಹೆಚ್. ರಸ್ತೆ, ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆ ಸೇರಿದಂತೆ ಎಲ್ಲಾ ಪ್ರಮುಖ ರಸ್ತೆಗಳಲ್ಲಿಯು ವಾಹನ ಸಂಚಾರವಿದೆ.
ಸಿಟಿ ಬಸ್ಸುಗಳು, ಸರ್ಕಾರಿ ಬಸ್ಸುಗಳ ಸಂಚಾರ ಎಂದಿನಂತೆ ಇದೆ. ಆಟೋಗಳು, ಟ್ರಾಕ್ಸ್ಗಳು ಸಂಚರಿಸುತ್ತಿವೆ. ಬೈಕುಗಳ 40 ವರ್ಷಕ್ಕಿಂತಲೂ ಕೆಳಗಿನವರ ಸಂಚಾರವನ್ನು ನಿಷೇಧಿಸಲಾಗಿದೆ. ಉಳಿದಂತೆ ಹಿರಿಯರು, ಮಹಿಳೆಯರನ್ನು ಕರೆದೊಯ್ಯಲು ಯಾವುದೇ ನಿರ್ಬಂಧವಿಲ್ಲ.
ಶಿವಮೊಗ್ಗ ಜಿಲ್ಲೆಯಲ್ಲಿ ಸಾವರ್ಕರ್ ಫೋಟೋ ವಿವಾದ; 6 ಅಂಶಗಳು
ಪೊಲೀಸ್ ಸರ್ಪಗಾವಲು
ಸಾವರ್ಕರ್ ಫೋಟೊ ವಿವಾದ ಮತ್ತು ನಿಷೇಧಾಜ್ಞೆ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಗಾಂಧಿ ಬಜಾರ್ ಸೇರಿದಂತೆ ಹಳೆ ಶಿವಮೊಗ್ಗ ಭಾಗದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಬಿ.ಹೆಚ್.ರಸ್ತೆ, ನೆಹರೂ ರಸ್ತೆಯಲ್ಲಿ ಒಂದೇ ಕಡೆಯಲ್ಲಿ ಒನ್ ವೇ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಹಜಸ್ಥಿತಿಗೆ ಮರಳುತ್ತಿದೆ ಶಿವಮೊಗ್ಗ
ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಜನರು ದೈನಂದಿನ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೆಲವು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ 'ಶಿವಮೊಗ್ಗ ಪ್ರಕ್ಷುಬ್ದ' ಎಂಬ ಸುದ್ದಿ ಬಿತ್ತರವಾಗುತ್ತಿದೆ. ಆದರೆ ನಗರದಲ್ಲಿ ಯಾವುದೇ ಅಹಿತಕರ ನಡೆದಿಲ್ಲ, ಸದ್ಯ ಶಿವಮೊಗ್ಗ ನಗರದಲ್ಲಿ ವಾತಾವರಣ ಶಾಂತಿಯುತವಾಗಿದೆ. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದ್ದು ಜನ ಗುಂಪುಗೂಡುವಂತಿಲ್ಲ.
ಮಂಗಳವಾರ ನಡೆದಿದ್ದೇನು?
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಗರದ ಅಮೀರ್ ಅಹಮದ್ ಸರ್ಕಲ್ನಲ್ಲಿ ವಿ.ಡಿ.ಸಾವರ್ಕರ್ ಫೋಟೊ ಕಟ್ಟಲಾಗಿತ್ತು. ಆದರೆ ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ಸಾವರ್ಕರ್ ಫೋಟೊ ಕಟ್ಟಿರುವ ಜಾಗದಲ್ಲಿ ಟಿಪ್ಪು ಸುಲ್ತಾನ್ ಫೋಟೊ ಹಾಕಲು ಮುಂದಾಯಿತು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಲುಪಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು.
ಇದಾದ ಕೆಲವೆ ಗಂಟೆಗಳಲ್ಲಿ ಉಪ್ಪಾರಕೇರಿಯಲ್ಲಿ ಅಂಗಡಿ ಮುಚ್ಚಿ ಮನೆಗೆ ಹೋಗುತ್ತಿದ್ದ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿಯಲಾಗಿತ್ತು. ತಕ್ಷಣ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಸಂಬಂಧ ಮೊಹಮ್ಮದ್ ಜಬೀ ಅಲಿಯಾಸ್ ಚರ್ಬಿ, ಜೆ.ಸಿ.ನಗರದ ನದೀಮ್ (25) ಮತ್ತು ಬುದ್ಧಾ ನಗರದ ಅಬ್ದುಲ್ ರೆಹಮಾನ್ (25) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.