ಭದ್ರಾವತಿ ಗಲಭೆ; ಬಿಜೆಪಿ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ
ಶಿವಮೊಗ್ಗ, ಮಾರ್ಚ್ 05: "ಬಿಜೆಪಿ ಮುಖಂಡರು ನೀಡುತ್ತಿರುವ ಪಟ್ಟಿ ಆಧಾರದ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಕೇಸ್ ಹಾಕುತ್ತಿದ್ದಾರೆ. ಮಧ್ಯಾಹ್ನದೊಳಗೆ ಎಲ್ಲವೂ ನಿಲ್ಲಬೇಕು" ಎಂದು ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಗಡುವು ನೀಡಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, "ಭದ್ರಾವತಿಯಲ್ಲಿ ಬಿಜೆಪಿ ಮುಖಂಡರು ನೀಡುತ್ತಿರುವ ಪಟ್ಟಿಯ ಆಧಾರದ ಮೇಲೆ ಪೊಲೀಸರು ಕೇಸ್ ಹಾಕುತ್ತಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಕರ್ತರ ರೀತಿ ವರ್ತಿಸುತ್ತಿದ್ದಾರೆ. ಸಂಗಮೇಶ್ವರ್ ಅವರು ಬೆಂಗಳೂರಿನಲ್ಲಿದ್ದಾರೆ. ಇಲ್ಲಿ ಏನು ಬೇಕಾದರೂ ನಡೆಸಬಹುದು ಅಂತಾ ಇದ್ದರೆ ಇವತ್ತು ಮಧ್ಯಾಹ್ನ 2 ಗಂಟೆ ಒಳಗೆ ಎಲ್ಲವು ನಿಲ್ಲಬೇಕು" ಎಂದು ಗಡುವು ವಿಧಿಸಿದರು.
ಬಿಜೆಪಿ ಪಕ್ಷದ ದಬ್ಬಾಳಿಕೆ, ಅನ್ಯಾಯ; ಸಿದ್ದರಾಮಯ್ಯ ಟ್ವೀಟ್
"ಕೋಮು ಗಲಭೆ ಸೃಷ್ಟಿಯೇ ಬಿಜೆಪಿಯವರ ಉದ್ದೇಶ. ತೀರ್ಥಹಳ್ಳಿ, ಸಾಗರದಲ್ಲಿ ಇದೆ ರೀತಿ ಮಾಡಿದರು. ಅದೇ ಮಾದರಿ ಭದ್ರಾವತಿಯಲ್ಲಿ ನಡೆಸುತ್ತಿದ್ದಾರೆ. ಭದ್ರಾವತಿಯಲ್ಲಿ ಕಾಂಗ್ರೆಸ್ನವರು ಹಣ ಹಾಕಿದ್ದ ಕಾರ್ಯಕ್ರಮ. ಬಿಜೆಪಿಯವರು ಅಲ್ಲಿ ಹೋಗಿ ಭಾಗವಹಿಸಿದ್ದೇಕೆ?" ಎಂದು ಕಿಮ್ಮನೆ ರತ್ನಾಕರ್ ಪ್ರಶ್ನೆ ಮಾಡಿದರು.
ಭದ್ರಾವತಿಯಲ್ಲಿ ನಿಷೇಧಾಜ್ಞೆ; ಬಂಧನದ ಬಗ್ಗೆ ಶಾಸಕರ ಸ್ಪಷ್ಟನೆ
"ಗಲಾಟೆ ಮಾಡಿಸುವುದಕ್ಕಾಗಿಯೇ ಬಿಜೆಪಿ ಅವರು ಭಾಗಿಯಾಗಿದ್ದಾರೆ. ಈಗಾಗಲೇ ಹಲವರನ್ನು ಪೊಲೀಸರು ಕರೆದೊಯ್ದಿದ್ದಾರೆ. ಬಿಜೆಪಿಯವರ ಪಟ್ಟಿ ಆಧಾರದ ಮೇಲೆ ಪೊಲೀಸರು ಈ ರೀತಿ ಮಾಡಿದ್ದಾರೆ" ಎಂದು ಕಿಮ್ಮನೆ ರತ್ನಾಕರ್ ದೂರಿದರು.
ಬಿಜೆಪಿಯಿಂದ ಕರೆ ಬಂದಿಲ್ಲ, ಹೋಗುವುದು ಇಲ್ಲ : ಸಂಗಮೇಶ್ವರ
"ಕಾಂಗ್ರೆಸ್ನವರು ಪ್ರತಿಭಟನೆ ಮಾಡಬಾರದು ಎಂಬ ಉದ್ದೇಶದಿಂದ ಭದ್ರಾವತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಆದರೆ, ಬಿಜೆಪಿಯವರ ಪ್ರತಿಭಟನೆಗೆ ಮಾತ್ರ ಅವಕಾಶ ಇದೆ. ಕಾಂಗ್ರೆಸ್ನವರು ಜನರಿಗೆ ವಿಚಾರ ತಿಳಿಸಬಾರದು ಅಂತಾ ಈಗ ನಿಷೇಧಾಜ್ಞೆ ವಿಧಿಸಿ, ಮನೆಗೆ ನುಗ್ಗಿ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದಾರೆ" ಎಂದು ಹೇಳಿದರು.
ಕುಟುಂಬದ ವಿರುದ್ಧ ಸುಳ್ಳು ಕೇಸ್; "ಭದ್ರಾವತಿ ಶಾಸಕ ಸಂಗಮೇಶ್ವರ್ ಮತ್ತು ಅವರ ಕುಟಂಬದವರ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನು ಹಿಂಪಡೆಯಬೇಕು. ಮಾಜಿ ಶಾಸಕ ಅಪ್ಪಾಜಿಗೌಡರು ಈಗ ಇಲ್ಲ. ಸಂಗಮೇಶ್ವರ್ ಒಬ್ಬರೆ ಆಗಿದ್ದಾರೆ. ಹಾಗಾಗಿ ಅವರನ್ನು ಮಣಿಸಬಹುದು ಅಂದುಕೊಂಡಿದ್ದರೆ ಅದು ತಪ್ಪು" ಎಂದು ಕಿಮ್ಮನೆ ರತ್ನಾಕರ್ ಎಚ್ಚರಿಸಿದರು.
"ಭದ್ರಾವತಿಯಲ್ಲಿ ಪೊಲೀಸರು ಸುಳ್ಳು ಪ್ರಕರಣ ದಾಖಲು ವಿರೋಧಿಸಿ ಮಾರ್ಚ್ 9ರಂದು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟಿಸಲಿದ್ದೇವೆ" ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ಭದ್ರಾವತಿಯಲ್ಲಿ ಆಗಿದ್ದೇನು?; ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಕನಕ ಮಂಟಪದಲ್ಲಿ ಫೆಬ್ರವರಿ 27 ಮತ್ತು 28ರಂದು ಕಬ್ಬಡಿ ಪಂದ್ಯಾವಳಿ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು.
ಈ ಬೆಳವಣಿಗೆ ಬಳಿಕ ಪಟ್ಟಣದಲ್ಲಿ ಮತ್ತೊಮ್ಮೆ ಗಲಾಟೆ ನಡೆಯುವ ಸುಳಿವು ಸಿಕ್ಕಿತ್ತು. ಇದರಿಂದಾಗಿ ಪಟ್ಟಣದಲ್ಲಿ ಮಾರ್ಚ್ 5ರ ಮಧ್ಯರಾತ್ರಿ 12ರ ತನಕ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಕಾಂಗ್ರೆಸ್ ಶಾಸಕ ಬಿ. ಕೆ. ಸಂಗಮೇಶ್ವರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.