ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಸರಿಯಾಗಿ ನೀಡುತ್ತಿಲ್ಲ: ಆರೋಪ
ಶಿವಮೊಗ್ಗ, ಜುಲೈ 29: ಕೊರೊನಾ ಸೋಂಕಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಆರೋಪಿಸಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಟಿಜನ್ಸ್ ಯುನೈಟೆಡ್ ಮೂವ್ ಮೆಂಟ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Recommended Video
ಮೆಗ್ಗಾನ್ ಆಸ್ಪತ್ರೆಯು ಅವ್ಯವಸ್ಥೆಗಳ ಆಗರವಾಗಿದ್ದು, ವೆಂಟಿಲೇಟರ್ ಸರಿಯಾಗಿ ಸಿಗುತ್ತಿಲ್ಲ. ಆಕ್ಸಿಜನ್ ವ್ಯವಸ್ಥೆ ಇಲ್ಲ, ಸ್ವಚ್ಛತೆ ಇಲ್ಲ. ಇದು ಕೋವಿಡ್-19 ಆಸ್ಪತ್ರೆಯಾಗಿದ್ದರೂ ಕೂಡ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಇದರಿಂದ ಸೋಂಕಿತರು ಸಾಯುವಂತಾಗಿದೆ ಎಂದು ಆರೋಪಿಸಿದರು.
ಪರಿಸರ ವಿನಾಶದಿಂದ ಕೊರೊನಾದಂತಹ ಕಾಯಿಲೆಗಳು ಬರುತ್ತಿವೆ: KS ಗುರುಮೂರ್ತಿ
ಬಡವರಿಗೆ ಮತ್ತು ಶ್ರೀಮಂತರಿಗೆ ಇಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸಾಮಾನ್ಯ ಜ್ವರ, ಕೆಮ್ಮು, ನೆಗಡಿ ಇದ್ದರೂ ಮೆಗ್ಗಾನ್ ಆಸ್ಪತ್ರೆಯಲ್ಲೆ ತೋರಿಸಬೇಕು ಹಾಗಾಗಿ ಅಲ್ಲಿಗೆ ಹೋದರೆ ಭಯವೇ ಆಗುತ್ತದೆ. ಕೊರೊನಾ ಟೆಸ್ಟಿಂಗ್ ಮಾಡಲು ಕೂಡ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ಶಿವಮೊಗ್ಗ ಜಿಲ್ಲಾಡಳಿತ ತಕ್ಷಣವೇ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು, ವೆಂಟಿಲೇಟರ್ ಮತ್ತು ಆಕ್ಸಿಜನ್ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಸಾವನ್ನಪ್ಪಿದ ವ್ಯಕ್ತಿಗಳ ಮೃತ ದೇಹಗಳನ್ನು ಕವರಿಂಗ್ ಮಾಡುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಧಾರಣ ಜ್ವರ, ಕೆಮ್ಮು, ನೆಗಡಿಗೆ ಚಿಕಿತ್ಸೆ ನೀಡಲು ಓಪಿಡಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕೊರೊನಾ ಸೋಂಕಿನ ಬಗ್ಗೆ ಡಾ.ಗಿರಿಧರ್ ಕಜೆ ಅವರ ಸಲಹೆ ಇಲ್ಲಿದೆ
ಪ್ರತಿಭಟನೆಯಲ್ಲಿ ಪ್ರಮುಖರಾದ ಷಹರಾಜ್ ಮುಜಾಹಿದ್ ಸಿದ್ದಿಕಿ, ಜಫ್ರುಲ್ಲಾ ಸತ್ತಾರ್ ಖಾನ್, ಮುಜಮಿಲ್ ಅನ್ವರ್, ಸೈಯದ್ ಫಸಿವುಲ್ಲಾ, ಶೇಖ್ ಆಲಿ, ಮೊಹಮ್ಮದ ರಫೀ ಇದ್ದರು.