ಮುಖ್ಯಮಂತ್ರಿಗಳು ಇಷ್ಟು ಕೆಳಮಟ್ಟದ ರಾಜಕೀಯ ಮಾಡಬಾರದು: ಸುಂದರೇಶ್
ಶಿವಮೊಗ್ಗ, ಜುಲೈ 26: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದರಾದ ಬಿ.ವೈ ರಾಘವೇಂದ್ರರವರು ಶಿಕಾರಿಪುರ ಪುರಸಭೆಯನ್ನು ಆಪರೇಷನ್ ಕಮಲ ಮಾಡಲು ಹೊರಟಿರುವುದು ಅವಮಾನಕರ ಸಂಗತಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಹೇಳಿದರು.
ಶಿಕಾರಿಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಿಕಾರಿಪುರ ಪುರಸಭೆ ಚುನಾವಣೆಯಲ್ಲಿ ಜನರೇ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿರುತ್ತಾರೆ. ಕಾಂಗ್ರೆಸ್ ನ ಇಬ್ಬರು ಕಾಂಗ್ರೆಸ್ ಸದಸ್ಯರನ್ನು ಮತ್ತು ಮೂರು ಜನ ಪಕ್ಷೇತರರನ್ನು ಹಣದ ಆಮಿಷ ಒಡ್ಡಿ, ಹಾಗೂ ಬೆದರಿಸಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನ ಪಟ್ಟಿದ್ದಾರೆ ಎಂದು ಟೀಕಿಸಿದರು.
ಶಿಕಾರಿಪುರ: ಬಿಜೆಪಿ ಸೇರ್ಪಡೆಗೊಂಡ 2 ಕಾಂಗ್ರೆಸ್, 3 ಜನ ಸ್ವತಂತ್ರ ಪುರಸಭಾ ಸದಸ್ಯರು
ಈ ಕೆಲಸ ಮುಖ್ಯಮಂತ್ರಿಗಳಿಗೆ ಶೋಭೆ ತರುವಂತದ್ದಲ್ಲ, ಹಾಗೂ ಕೆಳಮಟ್ಟದ ರಾಜಕೀಯವನ್ನು ಮುಖ್ಯಮಂತ್ರಿಗಳು ಮತ್ತು ಲೋಕಸಭಾ ಸದಸ್ಯರು ಮಾಡಿದ್ದು ಅವಮಾನಕರ ಸಂಗತಿ. ರಾಜೀನಾಮೆ ನೀಡಿರುವ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ಶಿಕಾರಿಪುರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಪ್ರಭಲವಾಗಿದ್ದು, ಮತ್ತೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಮುಖ್ಯಮಂತ್ರಿಗಳು, ಲೋಕಸಭಾ ಸದಸ್ಯರ ಕೀಳು ಮಟ್ಟದ ರಾಜಕಾರಣ ನಿಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಭೂಮಿ ನೀಡುವ ಯಾವ ರೈತರಿಗೂ ಅನ್ಯಾಯವಾಗಲು ಬಿಡುವುದಿಲ್ಲ: ಬಿ.ವೈ.ರಾಘವೇಂದ್ರ
ಈ ವೇಳೆ ಪುರಸಭಾ ಸದಸ್ಯರಾದ ಹುಲ್ಮಾರ್ ಮಹೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಗೆದ್ದು ಹಣದಾಸೆಯಿಂದ ಇಬ್ಬರು ಸದಸ್ಯರು ಪಕ್ಷ ದ್ರೋಹ ಮಾಡಿ ಬಿಜೆಪಿ ಸೇರಿದ್ದಾರೆ. ಶ್ರೀ ಮಾರಿಕಾಂಭ ದೇವಸ್ಥಾನದ ಖಾತೆಯನ್ನು ದೇವಸ್ಥಾನ ಸಮಿತಿಗೆ ಮಾಡಿಕೊಡುತ್ತಾರೆ, ದೇವಸ್ಥಾನದ ಅಭಿವೃದ್ಧಿ ಮಾಡುತ್ತಾರೆ ಎಂದು ದೇವರ ಹೆಸರು ಹೇಳಿಕೊಂಡು ಒಬ್ಬ ಸದಸ್ಯ ಬಿಜೆಪಿ ಪಕ್ಷ ಸೇರಿದ್ದೇನೆ ಎಂದಿದ್ದಾರೆ ಇದು ಶುದ್ದ ಸುಳ್ಳು, ಹಣದಾಸೆಗೆ ಬಿಜೆಪಿ ಸೇರಿದ್ದಾರೆ ಎಂದು ಆರೋಪಿಸಿದರು.
ದೇವರ ಹೆಸರು ಹೇಳಿಕೊಂಡು ರಾಜಕೀಯ ಮಾಡಬೇಡಿ ಇದನ್ನು ದೇವರು ಕ್ಷಮಿಸುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಾಗರಾಜ ಗೌಡ, ದರ್ಶನ್ ಉಳ್ಳಿ, ರೋಷನ್,ಭಂಡಾರಿ ಮಾಲತೇಶ್ ಇದ್ದರು.