ಶಿವಮೊಗ್ಗ; ಖಾಸಗಿ ಬಸ್ ಸಂಚಾರ ಮತ್ತೆ ಆರಂಭಿಸಲು 5 ಸವಾಲು
ಶಿವಮೊಗ್ಗ, ಜೂನ್ 25; ಕರ್ನಾಟಕ ಸರ್ಕಾರ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿದೆ. ಸೋಮವಾರದಿಂದಲೇ ಸರ್ಕಾರಿ ಬಸ್ಗಳು ರಸ್ತೆಗೆ ಇಳಿದಿವೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳೇ ಜೀವನಾಡಿಯಾಗಿವೆ. ಜನರು ಖಾಸಗಿ ಬಸ್ ಯಾವಾಗ ರಸ್ತೆಗಿಳಿಯಲಿವೆ? ಎಂದು ಕಾಯುತ್ತಿದ್ದಾರೆ.
ಶಿವಮೊಗ್ಗ, ಉಡುಪಿ, ಮಂಗಳೂರು ಸೇರಿದಂತೆ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಖಾಸಗಿ ಬಸ್ಗಳ ಸಂಚಾರ ಹೆಚ್ಚು. ಹಳ್ಳಿ ಹಳ್ಳಿಗೂ ತಲುಪುವ ಬಸ್ಸುಗಳು, ಕೃಷಿ ಚಟುವಟಿಕೆ, ರೈತರ ಆದಾಯದ ಆಧಾರವಾಗಿವೆ. ಲಾಕ್ಡೌನ್ನಿಂದಾಗಿ ಬಸ್ ಮಾಲೀಕರು ಸಹ ಸಂಕಷ್ಟದಲ್ಲಿದ್ದಾರೆ.
ಮಂಗಳೂರು; ಖಾಸಗಿ ಬಸ್ ಓಡಿಸಲ್ಲ ಎಂದ ಮಾಲೀಕರು!
ಖಾಸಗಿ ಬಸ್ ಮಾಲೀಕರಿಗೆ ಬಸ್ಸುಗಳನ್ನು ರಸ್ತೆಗಿಳಿಸುವ ತವಕವಿದೆ. ಆದರೆ ಪ್ರಮುಖ ಸವಾಲುಗಳು ಅವರನ್ನು ಕಾಡುತ್ತಿವೆ. ಇದೆ ಕಾರಣಕ್ಕೆ ಬಸ್ ಸಂಚಾರ ಶುರು ಮಾಡಲು ಹತ್ತಾರು ಭಾರಿ ಯೋಚಿಸುವಂತಾಗಿವೆ. ಈ ಕುರಿತು ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಪ್ಪ ಸವಾಲುಗಳ ಕುರಿತು ವಿವರಿಸಿದ್ದಾರೆ.
ಅನ್ಲಾಕ್; ಬಸ್ ಸಂಚಾರ ಆರಂಭವಾದರೂ ಪ್ರಯಾಣಿಕರಿಲ್ಲ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸಹ ಜಿಲ್ಲಾಡಳಿತ ಅನುಮತಿ ನೀಡಿದರೂ ಖಾಸಗಿ ಬಸ್ ರಸ್ತೆಗೆ ಇಳಿದಿಲ್ಲ. ಡೀಸೆಲ್ ಬೆಲೆ ಹೆಚ್ಚಳ, ತೆರಿಗೆ ಪಾವತಿ ಸೇರಿದಂತೆ ಹಲವು ಕಾರಣಗಳನ್ನು ಮಾಲೀಕರು ಹೇಳುತ್ತಿದ್ದಾರೆ. ಜುಲೈ 1ರಿಂದ ಬಸ್ ಸಂಚಾರ ಆರಂಭಿಸಲು ನಿರ್ಧರಿಸಿದ್ದಾರೆ.
ಸರ್ಕಾರ ಅನುಮತಿ ಕೊಟ್ಟರೂ ಖಾಸಗಿ ಬಸ್ ಸೇವೆ ಆರಂಭವಿಲ್ಲವೇಕೆ?
ಸವಾಲು 1; ಟ್ಯಾಕ್ಸ್ ಕಟ್ಟಬೇಕು
"ಎರಡು ತಿಂಗಳಿಂದ ಬಸ್ ಸಂಚಾರ ಸ್ಥಗಿತವಾಗಿದೆ. ಕಳೆದ ವರ್ಷ 9 ತಿಂಗಳು ಬಸ್ಸುಗಳನ್ನು ನಿಲ್ಲಿಸಿದ್ದೆವು. ದುಡಿಮೆ ಇಲ್ಲ. ಆದರೂ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕು. ಪ್ರತಿ ಮೂರು ತಿಂಗಳಿಗೆ 50 ಸಾವಿರ ಟ್ಯಾಕ್ಸ್ ಇದೆ. ಈ ಸಂದರ್ಭದಲ್ಲಿ ಟ್ಯಾಕ್ಸ್ ಕಟ್ಟುವುದು ಸುಲಭದ ಸಂಗತಿಯಲ್ಲ. ಈಗಾಗಲೇ ಸರ್ಕಾರಕ್ಕೆ ಪರ್ಮಿಟ್ ಸರೆಂಡರ್ ಮಾಡಿದ್ದೇವೆ. ಅದನ್ನು ಹಿಂಪಡೆದ ದಿನದಿಂದಲೇ ಟ್ಯಾಕ್ಸ್ ಶುರುವಾಗಲಿದೆ" ಎಂದು ರಂಗಪ್ಪ ಹೇಳಿದರು
ಸವಾಲು 2; ರಿಪೇರಿ, ಬ್ಯಾಟರಿಗೆ ದುಡ್ಡು
ಬಸ್ಸುಗಳು ನಿಂತಲ್ಲೆ ನಿಂತು ಕೆಟ್ಟು ಹೋಗಿರುತ್ತವೆ. ಹೊಸ ಬ್ಯಾಟರಿ ಬೇಕು. ಪ್ರತಿ ಬಸ್ಗೆ ಕನಿಷ್ಠ 10 ಸಾವಿರ ರೂ. ಬೇಕು. ಆದಾಯವೇ ಇಲ್ಲದೆ ಇರುವ ಸಂದರ್ಭದಲ್ಲಿ ಇದನ್ನು ಹೊಂದಿಸಿಕೊಂಡು ಬಸ್ ರಸ್ತೆಗಿಳಿಸುವುದು ಸದ್ಯದ ಸವಾಲುಗಳಲ್ಲಿ ಒಂದಾಗಿದೆ.
ಸವಾಲು 3; ಡಿಸೇಲ್ ಹಾಕಿಸುವುದೆ ಕಷ್ಟ
ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈಗ ಪ್ರತಿ ಲೀಟರ್ಗೆ 100 ರೂ. ತನಕ ಬಂದಿದೆ. ಲಾಂಗ್ ರೂಟ್ ಓಡಾಡುವ ಬಸ್ಸುಗಳು ಪ್ರತಿ ದಿನ ಫುಲ್ ಟ್ಯಾಂಕ್ ಮಾಡಿಸಬೇಕು. ಫುಲ್ ಟ್ಯಾಂಕ್ ಡಿಸೇಲ್ ತುಂಬಿಸಲು 10 ಸಾವಿರ ರೂ. ಬೇಕು. ತಿಂಗಳಿಗೆ ಕನಿಷ್ಠ 3 ಲಕ್ಷ ರೂ. ಬೇಕು. ಆದರೆ ಈ ಸಂದರ್ಭದಲ್ಲಿ ಇಷ್ಟು ಆದಾಯ ನಿರೀಕ್ಷೆ ಮಾಡುವುದು ಹೇಗೆ?.
ಸವಾಲು 4; ಶೇ.50ರಷ್ಟು ಪ್ರಯಾಣಿಕರು
ರಾಜ್ಯ ಸರ್ಕಾರದ ಕೋವಿಡ್ ನಿಯಮದಂತೆ ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಬಸ್ಸಿಗೆ ಹತ್ತಿಸಬೇಕು. ಶೇ.50ರಷ್ಟು ಪ್ರಯಾಣಿಕರಿಂದ ಬರುವ ಆದಾಯ ಯಾವುದಕ್ಕೂ ಸಾಲುವುದಿಲ್ಲ. ಕಲೆಕ್ಷನ್ ಇಲ್ಲದೆ ಡಿಸೇಲ್ ಹಾಕಿಸುವುದೆಲ್ಲಿ?, ರಿಪೇರಿ ಮಾಡಿಸುವುದು ಹೇಗೆ?, ಕಾರ್ಮಿಕರಿಗೆ ಸಂಬಳ ಕೊಡಲು ಆಗುತ್ತದೆಯೇ? ಎಂದು ಬಸ್ ಮಾಲೀಕರು ಪ್ರಶ್ನಿಸಿದ್ದಾರೆ.
ಸವಾಲು 5 : ಬೈಕು, ಕಾರುಗಳು
ಲಾಕ್ಡೌನ್ ಬಳಿಕ ಬಸ್ ಸಂಚಾರ ಸ್ಥಗಿತವಾಯಿತು. ಬಹುತೇಕ ಜನರು ಸ್ವಂತ ವಾಹನಗಳ್ನು ಅವಲಂಬಿಸಿದ್ದಾರೆ. ಹಾಗಾಗಿ ಬಸ್ ಸಂಚಾರ ಆರಂಭವಾದರೂ ಈಗ ಸ್ವಂತ ವಾಹನಗಳನ್ನು ಬಳಕೆ ಮಾಡುತ್ತಿರುವವರನ್ನು ಬಸ್ಗಳತ್ತ ಕರೆತರಲು ಸಮಯವಕಾಶ ಬೇಕಾಗಲಿದೆ.
ಇಷ್ಟೆಲ್ಲ ಸವಾಲುಗಳ ನಡುವೆಯು ಖಾಸಗಿ ಬಸ್ ಸಂಚಾರ ಆರಂಭಿಸಲಾಗುತ್ತಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಪ್ಪ ತಿಳಿಸಿದ್ದಾರೆ. "ಜುಲೈ ಮೊದಲ ವಾರದಿಂದ ಕೆಲವೇ ಕೆಲವು ಖಾಸಗಿ ಬಸ್ಗಳು ಸಂಚಾರ ಶುರು ಮಾಡಲಿವೆ. ಇವುಗಳ ಕಲೆಕ್ಷನ್ ನೋಡಿಕೊಂಡು ಉಳಿದ ಬಸ್ಸುಗಳ ಸಂಚಾರ ಆರಂಭಿಸಲು ಯೋಜಿಸಲಾಗಿದೆ" ಎಂದರು.
ಕಾರ್ಮಿಕರ ಪರಿಸ್ಥಿತಿ ಕೇಳುವವರಿಲ್ಲ
ಶಿವಮೊಗ್ಗ ಜಿಲ್ಲೆಯ ಹೊಳಲೂರು ರಸ್ತೆ ಮತ್ತು ಭದ್ರವಾತಿ ರಸ್ತೆಗಳು ಮಾತ್ರ ರಾಷ್ಟ್ರೀಕರಣವಾಗಿವೆ. ಈ ರಸ್ತೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮಾರ್ಗದಲ್ಲೂ ಖಾಸಗಿ ಬಸ್ ಸಂಚರಿಸುತ್ತವೆ. ಸುಮಾರು 600 ಖಾಸಗಿ ಬಸ್ಸುಗಳು ಶಿವಮೊಗ್ಗ ಜಿಲ್ಲೆಯಿಂದ ಕಾರ್ಯಾಚರಿಸುತ್ತವೆ. ಈ ಬಸ್ಸುಗಳನ್ನು ನಂಬಿಕೊಂಡು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎರಡದಿಂದ ಮೂರು ಸಾವಿರ ಕಾರ್ಮಿಕರಿದ್ದಾರೆ. ಇವರಾರಿಗೂ ಕೋವಿಡ್ ಸಂಕಷ್ಟ ಕಾಲದಲ್ಲಿ ನೆರವು ಸಿಕ್ಕಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ, ಸಚಿವ ಈಶ್ವರಪ್ಪ ಅವರು ಗಮನ ಹರಿಸಬೇಕು ಎಂದು ರಂಗಪ್ಪ ಮನವಿ ಮಾಡಿದ್ದಾರೆ.
Recommended Video