ಕುವೆಂಪು ಪದ್ಮವಿಭೂಷಣ ಪ್ರಶಸ್ತಿ ಪದಕ ಇನ್ನು ನೆನಪು ಮಾತ್ರ
ಶಿವಮೊಗ್ಗ, ಡಿಸೆಂಬರ್ 01 : ರಾಷ್ಟ್ರಕವಿ ಕುವೆಂಪು ಅವರ ಪದ್ಮವಿಭೂಷಣ ಪ್ರಶಸ್ತಿ ಇನ್ನು ಮುಂದೆ ನೆನಪು ಮಾತ್ರ. ಪ್ರಶಸ್ತಿ ಜೊತೆ ನೀಡುವ ಪದಕದ ಪ್ರತಿಕೃತಿಯನ್ನು ನೀಡಲು ಕೇಂದ್ರ ನಿರಾಕರಿಸಿದೆ. ಕುವೆಂಪು ಅವರ ಮನೆಯಲ್ಲಿ ಕಳ್ಳತನ ನಡೆದಾಗ ಮೂಲ ಪದ್ಮವಿಭೂಷಣ ಪ್ರಶಸ್ತಿ ಫಲಕ ನಾಪತ್ತೆಯಾಗಿತ್ತು.
ಕುವೆಂಪು ಅವರ ಮನೆಯಲ್ಲಿ ಕಳ್ಳತನ ಮಾಡಿದವ ಸಿಕ್ಕಿಬಿದ್ದ
2015ರ ನವೆಂಬರ್ 23ರಂದು ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ ಕುವೆಂಪು ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ದಾವಣಗೆರೆ ಮೂಲದ ರೇವಣ್ಣ ಎಂಬಾತನನ್ನು ಬಂಧಿಸಿದ್ದರು.
ಕವಿಶೈಲದಲ್ಲಿ ಕಿಡಿಗೇಡಿಗಳ ಹಸ್ತಾಕ್ಷರ, ಫೇಸ್ಬುಕ್ನಲ್ಲಿ ಖಂಡನೆ
ಕಳ್ಳತನ ಮಾಡಿಕೊಂಡು ಹೋಗುವಾಗ ಪದ್ಮವಿಭೂಷಣ ಪ್ರಶಸ್ತಿ ಜೊತೆ ನೀಡುವ ಪದಕವನ್ನು ರೇವಣ್ಣ ತೆಗೆದುಕೊಂಡು ಹೋಗಿದ್ದ. ಆದರೆ, ಎಷ್ಟು ಹುಡುಕಿದರೂ ಪದಕ ಮಾತ್ರ ಲಭ್ಯವಾಗಲಿಲ್ಲ. ಆದ್ದರಿಂದ, ಪದಕದ ಪ್ರತಿಕೃತಿ ನೀಡುವಂತೆ ಕುವೆಂಪು ಪತಿಷ್ಠಾನ, ಕುಟುಂಬದವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಸರ್ಕಾರ ಪತ್ರಕ್ಕೆ ಉತ್ತರ ನೀಡಿದ್ದು, ಪ್ರಶಸ್ತಿ ಪಡೆದ ವ್ಯಕ್ತಿ ಮನವಿ ಮಾಡಿದರೆ ಮಾತ್ರ ಪ್ರತಿಕೃತಿ ನೀಡಬಹುದು. ಇಲ್ಲವಾದಲ್ಲಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದಾಗಿ ಪದಕದ ಪ್ರತಿಕೃತಿ ಪಡೆದು ಕುಪ್ಪಳ್ಳಿಯಲ್ಲಿ ಪ್ರದರ್ಶನಕ್ಕಿಡುವ ಚಿಂತನೆಗೆ ಹಿನ್ನಡೆಯಾಗಿದೆ.
ಕುವೆಂಪು ಅವರ ಪದ್ಮವಿಭೂಷಣ ಫಲಕ ಇನ್ನೂ ಸಿಕ್ಕಿಲ್ಲ
ಮೈಸೂರಿನಲ್ಲಿತ್ತು ಪದಕ : 1958ರಲ್ಲಿ ಕುವೆಂಪು ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಜೊತೆ ನೀಡುವ ಪದಕ ಮೊದಲು ಮೈಸೂರಿನ ಉದಯರವಿ ನಿವಾಸದಲ್ಲಿತ್ತು.
ಕುವೆಂಪು ಪ್ರತಿಷ್ಠಾನ ರಚನೆಯಾದ ಬಳಿಕ ಅದನ್ನು ಕುಪ್ಪಳ್ಳಿಯ ಮನೆಗೆ ತರಲಾಯಿತು. 2001ರಿಂದ ಕುಪ್ಪಳ್ಳಿಯ ನಿವಾಸದಲ್ಲಿ ಅದನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ, ಕಳ್ಳತನ ನಡೆದ ಬಳಿಕ ಪದಕ ಕಾಣೆಯಾಗಿದೆ. ಈಗ ಅದರ ಪ್ರತಿಕೃತಿಯನ್ನು ನೀಡಲು ಸರ್ಕಾರ ನಿರಾಕರಿಸಿದೆ.