ಚೀನಾದಿಂದ ಬಂದು ಊರೂರು ಸುತ್ತಿದ ಹೊಸನಗರ ವ್ಯಕ್ತಿ ಮೇಲೆ ಕೇಸ್
ಶಿವಮೊಗ್ಗ, ಮಾರ್ಚ್ 28: ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿ ಮಾರಣಾಂತಿಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ಭಾದಿತ ದೇಶದಿಂದ ಬಂದು, ಹೋಂ ಕ್ವಾರಂಟೈನ್ ನಲ್ಲಿರದೆ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿರುವ ಹೊಸನಗರ ಪಟ್ಟಣದ ಅಂಬೇಡ್ಕರ್ ಕಾಲನಿ ನಿವಾಸಿಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ಇವರಿಗೆ ಇನ್ನೆಷ್ಟು ಹೇಳ್ಬೇಕು? ಕ್ವಾರಂಟೈನಲ್ಲಿದ್ದರೂ ಚಿತ್ರದುರ್ಗದಲ್ಲಿ ಇಬ್ಬರ ಸುತ್ತಾಟ
ಈ ವ್ಯಕ್ತಿಗೆ ಮಾ.19 ರಿಂದ ಏ.01 ರವರೆಗೆ 14 ದಿನಗಳ ಕಾಲ ಸುರಕ್ಷತಾ ದೃಷ್ಟಿಯಿಂದ ಹೋಂ ಕ್ವಾರೆಂಟೈನ್ ನಲ್ಲಿರುವಂತೆ ಸೂಚಿಸಲಾಗಿತ್ತು. ಆದರೆ ತಾಲ್ಲೂಕು ವೈದ್ಯಾಧಿಕಾರಿಗಳು ಪರೀಕ್ಷಿಸಲು ಹೋದಾಗ ಇವರು ಮನೆಯಲ್ಲಿರದೇ ಹೊಸನಗರ ಟೌನ್ ಮತ್ತು ಬೇರೆ ಬೇರೆ ಊರುಗಳಿಗೆ ಹೋಗಿ ಸುತ್ತಾಡಿರುವುದಾಗಿ ತಿಳಿದುಬಂದಿದೆ.
ಈ ವ್ಯಕ್ತಿಯು ತಾನು ಕೊರೊನಾ ಸೋಂಕಿತ ದೇಶದಿಂದ ಬಂದವನೆಂದು ಅರಿವಿದ್ದರೂ, ಸಾರ್ವಜನಿಕವಾಗಿ ಓಡಾಡಿದರೆ ತೊಂದರೆ ಎಂಬ ತಿಳಿವಳಿಕೆಯಿದ್ದರೂ ನಿರ್ಲಕ್ಷ್ಯತನ ವಹಿಸಿ ಊರುರು ಸುತ್ತಾಡಿರುವುದಾಗಿ ಮಾಹಿತಿ ದೊರೆತಿದೆ. ಈ ಬಗ್ಗೆ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಈ ವ್ಯಕ್ತಿ ಮೇಲೆ ಕಾನೂನು ಕ್ರಮಕ್ಕಾಗಿ ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ದೂರು ನೀಡಿದ್ದಾರೆ.
ಇವರ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿಯನ್ನು ಐಸೋಲೇಟೆಡ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡುವ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಯವರಿಗೆ ಮಾಹಿತಿ ನೀಡಲಾಗಿದೆ.