ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ವಿದ್ಯುತ್ ಶಾಕ್ ನಿಂದ ಮೂವರು ಸ್ಥಳದಲ್ಲೇ ಸಾವು
ಶಿವಮೊಗ್ಗ, ಸೆಪ್ಟೆಂಬರ್ 24: ವಿದ್ಯುತ್ ಕಂಬಕ್ಕೆ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯುತ್ ಶಾಕ್ ನಿಂದ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಚಾಲಕನ ಆಯತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಾಗ ವಿದ್ಯುತ್ ಶಾಕ್ ನಿಂದ ಕಲಾವತಿ (65), ಲೋಹಿತ್ (36), ಶಶಾಂಕ್ (10) ಮೃತರಾದ ದುರ್ದೈವಿಗಳಾಗಿದ್ದಾರೆ. ಕಾರಿನಲ್ಲಿದ್ದ ಇನ್ನುಳಿದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿವಮೊಗ್ಗ: ತೀರ್ಥಹಳ್ಳಿಯ ರಂಜದಕಟ್ಟೆ ಸೇತುವೆ ಕುಸಿತ; ಸಂಚಾರ ಸ್ಥಗಿತ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗರ್ತಿಕೆರೆ ಸಮೀಪ ಈ ಘಟನೆ ನಡೆದಿದ್ದು, ಎರಡು ದಿನದ ಹಿಂದೆ ರಿಪ್ಪನ್ ಪೇಟೆಯಿಂದ ಟಾಟಾ ಇಂಡಿಕಾ ಕಾರಿನಲ್ಲಿ ಆರು ಮಂದಿ ಧರ್ಮಸ್ಥಳಕ್ಕೆ ಹೋಗಿದ್ದರು. ಕಾರು ಧರ್ಮಸ್ಥಳ ಕಡೆಯಿಂದ ರಿಪ್ಪನ್ ಪೇಟೆಗೆ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ರಿಪ್ಪನ್ ಪೇಟೆಯ ನಿವಾಸಿಗಳಾದ ಕಲಾವತಿ, ಲೋಹಿತ್ ಸೇರಿದಂತೆ ಆರು ಜನ ಧರ್ಮಸ್ಥಳಕ್ಕೆ ತೆರಳಿದ್ದರು. ಈ ಕುರಿತು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.