Secret Politics: ಶಿಕಾರಿಪುರದಲ್ಲಿ ವಿಜಯೇಂದ್ರ ಶುರು ಮಾಡಿದರೇ ಮತ ಶಿಕಾರಿ!?
ಶಿವಮೊಗ್ಗ, ಆಗಸ್ಟ್ 12: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳುಗಳಷ್ಟೇ ಬಾಕಿ ಉಳಿದಿವೆ. ಇದರ ಮಧ್ಯ ರಾಜ್ಯ ರಾಜಕಾರಣ ಮತ್ತು ಶಿವಮೊಗ್ಗ ಪಾಲಿಟಿಕ್ಸ್ ನಲ್ಲಿ ಸದ್ದು ಮಾಡುತ್ತಿರುವ ಅದೊಂದು ಹೆಸರೇ ಬಿ. ವೈ. ವಿಜಯೇಂದ್ರ.
ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮದೇ ಹಿಡಿತ ಹೊಂದಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈಗಾಗಲೇ ತಮ್ಮ ಪುತ್ರನಿಗಾಗಿ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
Breaking:ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಪ್ರಕಟಿಸಿದ ಬಿಎಸ್ವೈ
ಶಿಕಾರಿಪುರ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಬದಲಿಗೆ ಕಿರಿಯ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅಖಾಡಕ್ಕೆ ಇಳಿಯುತ್ತಾರೆ ಎಂದು ಬಿಎಸ್ವೈ ಹೇಳಿದ್ದಾರೆ. ಇದೊಂದು ಹೇಳಿಕೆ ಬೆನ್ನಲ್ಲೇ ಸಕ್ರಿಯರಾಗಿ ಗುರುತಿಸಿಕೊಳ್ಳುತ್ತಿರುವ ವಿಜಯೇಂದ್ರ ಮತಶಿಕಾರಿ ಶುರುವಿಟ್ಟುಕೊಂಡಿದ್ದಾರೆ. ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ವಿಜಯೇಂದ್ರ ಚುನಾವಣಾ ಸಿದ್ಧತೆಗೆ ಹೇಗಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಪುತ್ರನಿಗೆ 'ಶಿಕಾರಿ' ಬಿಟ್ಟುಕೊಡ್ಡ ಮಾಜಿ ಮುಖ್ಯಮಂತ್ರಿ
ರಾಜ್ಯದಲ್ಲಿ ಮುಂಬರುವ 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಜುಲೈ 22ರಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದರು. ಇದರ ಜೊತೆಗೆ ಅವರು ಹೊರಡಿಸಿರುವ ಇನ್ನೊಂದು ಘೋಷಣೆ ರಾಜಕೀಯ ವಲಯದಲ್ಲಿ ಸಖತ್ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಕಿರಿಯ ಪುತ್ರ ಬಿ. ವೈ. ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಿರುವುದು ತೀವ್ರ ಚರ್ಚೆಯನ್ನು ಹುಟ್ಟು ಹಾಕುತ್ತಿದೆ.
ಶಿಕಾರಿಪುರದಲ್ಲಿ ಸ್ಪರ್ಧೆಗೆ ಬಿಜಿಪಿಯಲ್ಲೇ ವಿರೋಧ? ವಿಜಯೇಂದ್ರ ಉತ್ತರವೇನು?
ಶಿಕಾರಿಪುರದಲ್ಲಿ ಸ್ಪರ್ಧಿಸುವ ಕುರಿತು ವಿಜಯೇಂದ್ರ ಹೇಳಿದ್ದೇನು?
2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಿಕಾರಿಪುರದಿಂದ ತಾವು ಸ್ಪರ್ಧಿಸುವುದಕ್ಕೆ ಒಪ್ಪಿಗೆ ಅಥವಾ ವಿರೋಧ ಎಂಬ ಪ್ರಶ್ನೆಯೇ ಇಲ್ಲ ಎಂದು ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ಈ ಹಿಂದೆಯೂ ತಮ್ಮ ತಂದೆ ತೋರಿದ ಮಾರ್ಗದರ್ಶನದಲ್ಲಿ ನಡೆದುಕೊಂಡು ಬಂದಿದ್ದೇನೆ. ಮುಂದೆಯೂ ಅವರ ಮಾರ್ಗದರ್ಶನದಲ್ಲಿಯೇ ಮುಂದುವರಿಯುತ್ತೇನೆ. ಈ ಮಧ್ಯೆ ಶಿಕಾರಿಪುರವಷ್ಟೇ ಅಲ್ಲದೇ ರಾಜ್ಯದ ಎಲ್ಲಾ ಕ್ಷೇತ್ರಗಳ ವಿಷಯದಲ್ಲೂ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ಕೇಂದ್ರದ ಬಿಜೆಪಿ ನಾಯಕರು ನಿರ್ಧರಿಸಲಿದ್ದಾರೆ ಎಂದು ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಗೆ ಈಗಾಗಲೇ ವಿಜಯೇಂದ್ರ ಶಿಕಾರಿ ಶುರು
ತಂದೆ ಬದಲಿಗೆ ತಾವೇ ಶಿಕಾರಿಪುರದಲ್ಲಿ ಸ್ಪರ್ಧಿಸುವುದು ಎಂದು ತಿಳಿಯುತ್ತಿದ್ದಂತೆ ಬಿ. ವೈ. ವಿಜಯೇಂದ್ರ ಸಖತ್ ಆಕ್ಟಿವ್ ಆಗಿದ್ದಾರೆ. ಈ ಹಿನ್ನೆಲೆ ಕ್ಷೇತ್ರದಲ್ಲಿ ಸಾಲುಸಾಲು ಸಭೆ ಮತ್ತು ಸಂಘಟನೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆ ಬಿಜೆಪಿ ಶಿಕಾರಿಪುರ ಮಂಡಲ ಮಹಾಶಕ್ತಿಕೇಂದ್ರಗಳ ಸಭೆಯನ್ನು ನಡೆಸುತ್ತಿದ್ದಾರೆ. ಇದೇ ಸಭೆಯ ಪ್ರಯುಕ್ತ ತಾಲ್ಲೂಕಿನ ನೇಲರಗಿ ಸಮುದಾಯ ಭವನದಲ್ಲಿ ಸುಣ್ಣದಕೊಪ್ಪ ಮಹಾಶಕ್ತಿ ಕೇಂದ್ರದ ಪೇಜ್ ಪ್ರಮುಖರ ಸಭೆ ನಡೆಸಿದರು. 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ಮೋದಿ ಕರೆ ನೀಡಿದ ಹರ್ ಘರ್ ತಿರಂಗ ಆಶಯದಂತೆ ದಿನಾಂಕ 13,14 ಮತ್ತು 15 ರಂದು ಪ್ರತಿ ಮನೆಯಲ್ಲಿಯೂ ಧ್ರಜಾರೋಹಣ ಮಾಡಲು ಸಾಂಕೇತಿಕವಾಗಿ ರಾಷ್ಟ್ರಧ್ವಜವನ್ನು ನೀಡಿದರು.
ಹರ್ ಘರ್ ತಿರಂಗಾ ಅಭಿಯಾನದ ಹೆಸರಲ್ಲಿ ಸಭೆ
ಬಿಜೆಪಿ ಶಿಕಾರಿಪುರ ಮಂಡಲ ಮಹಾಶಕ್ತಿ ಕೇಂದ್ರಗಳ ಸಭೆಯ ಪ್ರಯುಕ್ತ ತಾಲ್ಲೂಕಿನ ಮಂಗಳಭವನದಲ್ಲಿ ಕಪ್ಪನಹಳ್ಳಿ ಮಹಾಶಕ್ತಿ ಕೇಂದ್ರದ ಪೇಜ್ ಪ್ರಮುಖರೊಂದಿಗೆ ಬಿ. ವೈ. ವಿಜಯೇಂದ್ರ ಸಭೆ ನಡೆಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ ಹರ್ ಘರ್ ತಿರಂಗ ಆಶಯದಂತೆ 13,14 ಮತ್ತು 15ರಂದು ಪ್ರತಿ ಮನೆಯಲ್ಲಿಯೂ ಧ್ರಜಾರೋಹಣ ಮಾಡಲು ಸಾಂಕೇತಿಕವಾಗಿ ರಾಷ್ಟ್ರಧ್ವಜವನ್ನು ನೀಡಲಾಯಿತು. ಅದೇ ರೀತಿ ಕುಮದ್ವತಿ ಕಾಲೇಜಿನ ಸಭಾಂಗಣದಲ್ಲಿ ಹೊಸೂರು ಮಹಾಶಕ್ತಿ ಕೇಂದ್ರದ ಪೇಜ್ ಪ್ರಮುಖರ ಸಭೆ ನಡೆಸಿದರು. ಪ್ರತಿ ಮನೆಯಲ್ಲಿಯೂ ಧ್ರಜಾರೋಹಣ ಮಾಡಲು ಸಾಂಕೇತಿಕವಾಗಿ ರಾಷ್ಟ್ರಧ್ವಜವನ್ನು ನೀಡಿದರು. ಆ ಮೂಲಕ ತಾಲೂಕು ಮಟ್ಟದ ನಾಯಕರೊಂದಿಗೆ ವಿಜಯೇಂದ್ರ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.
ಶಿಕಾರಿ ಟಿಕೆಟ್ ಕುರಿತು ಬಿಎಸ್ ವೈ ಮತ್ತೊಂದು ಹೇಳಿಕೆ
ಕಳೆದ ತಿಂಗಳು ತಮ್ಮ ಬದಲಿಗೆ ಪುತ್ರನೇ ಶಿಕಾರಿಪುರದಲ್ಲಿ ಸ್ಪರ್ಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಆದರೆ ಬುಧವಾರ ಮಂತ್ರಾಲಯಕ್ಕೆ ಹೋಗುವುದಕ್ಕೂ ಪೂರ್ವದಲ್ಲಿ ಮಾಧ್ಯಮಗಳಿಗೆ ಪ್ರತ್ರಿಕಿಯೆ ನೀಡಿದ ಅವರ ಹೇಳಿಕೆಯಲ್ಲಿ ಒಂದು ಹೆಜ್ಜೆ ಹಿಂದೆ ಇಟ್ಟಂತೆ ತೋರುತ್ತಿತ್ತು. ವಿಜಯೇಂದ್ರ ಸ್ಪರ್ಧೆಗೆ ಸ್ವಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ ಎಂಬ ಗಾಸಿಪ್ ನಡುವೆ ಬಿಎಸ್ವೈ ಬೇರೆಯದ್ದೇ ಹೇಳಿಕೆ ನೀಡಿದ್ದರು. ಶಿಕಾರಿಪುರದಲ್ಲಿ ಬಿ. ವೈ. ವಿಜಯೇಂದ್ರ ಸ್ಪರ್ಧಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿ ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವಕಾಶ ನೀಡಿದರೆ, ವಿಜಯೇಂದ್ರ ಸ್ಪರ್ಧೆಗೆ ಇಳಿಯುವುದಾಗಿ ಯಡಿಯೂರಪ್ಪ ಹೇಳಿದರು.