ಸಚಿವ ಸ್ಥಾನ, ಚುನಾವಣೆ ಸ್ಪರ್ಧೆ ಬಗ್ಗೆ ಬಿ. ವೈ. ವಿಜಯೇಂದ್ರ ಮಾತು
ಶಿವಮೊಗ್ಗ, ಸೆಪ್ಟೆಂಬರ್ 17; ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ?. ಅವರು ಸಚಿವರಾಗಲಿದ್ದಾರೆಯೇ? ಎಂಬ ಪ್ರಶ್ನೆ ಹಲವಾರು ದಿನದಿಂದ ಕೇಳಿ ಬರುತ್ತಿದೆ. ಬಿಜೆಪಿ ಕಾರ್ಯಕರ್ತರು ಸಹ ಈ ಬಗ್ಗೆ ಕುತೂಹಲಗೊಂಡಿದ್ದಾರೆ.
ಶುಕ್ರವಾರ ಶಿವಮೊಗ್ಗಕ್ಕೆ ಬಿ. ವೈ. ವಿಜಯೇಂದ್ರ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳು ಚುನಾವಣೆ ಸ್ಪರ್ಧೆ, ಸಚಿವ ಸ್ಥಾನದ ಬಗ್ಗೆಯೇ ಪ್ರಶ್ನೆ ಮಾಡಿವೆ. "ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ" ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಸಚಿವ ಸ್ಥಾನ ಅಥವ ರಾಜ್ಯಾಧ್ಯಕ್ಷ ಪಟ್ಟ; ವಿಜಯೇಂದ್ರ ಸ್ಪಷ್ಟನೆ
ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, "ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ" ಎಂದು ಹೇಳಿದರು.
ಕಳಚಿ ಬಿತ್ತು 'ಸೂಪರ್ ಸಿಎಂ' ಟ್ಯಾಗ್; ವಿಜಯೇಂದ್ರ ಸಂತಸ!
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಯಡಿಯೂರಪ್ಪ ರಾಜೀನಾಮೆಗೂ ಮುನ್ನವೇ ಪುತ್ರ ವಿಜಯೇಂದ್ರಗೆ ಮಹತ್ವದ ಹುದ್ದೆ ಸಿಗಲಿದೆ ಎಂಬ ಸುದ್ದಿ ಹಬ್ಬಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರಲಿದ್ದಾರೆ ಎಂದು ಸಹ ನಿರೀಕ್ಷೆ ಮಾಡಲಾಗಿತ್ತು.
ಬಿಜೆಪಿಯಲ್ಲಿ ಬದಲಾವಣೆ; ಬೆಂಗಳೂರು ನಾಯಕನಿಗೆ ರಾಜ್ಯಾಧ್ಯಕ್ಷ ಪಟ್ಟ?
ಯಾವುದೇ ಲಾಬಿಯನ್ನು ಮಾಡಿಲ್ಲ
"ನನ್ನ ಪರವಾಗಿ ಯಡಿಯೂರಪ್ಪ ಅವರು ಯಾವುದೇ ಲಾಬಿ ಮಾಡಿಲ್ಲ. ಚುನಾವಣೆಯಲ್ಲಿ ನನ್ನ ಸ್ಪರ್ಧೆಯ ಬಗ್ಗೆ ಪಕ್ಷವೇ ತೀರ್ಮಾನ ಮಾಡುತ್ತದೆ. ರಾಷ್ಟ್ರ ನಾಯಕರು, ರಾಜ್ಯದ ನಾಯಕರು ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ" ಎಂದು ಶುಕ್ರವಾರ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು.
ಉತ್ತರ ಕರ್ನಾಟಕ ಅಥವ ಮೈಸೂರು ಭಾಗದಿಂದ ಸ್ಪರ್ಧೆ
ವಿಜಯೇಂದ್ರ ಉತ್ತರ ಕರ್ನಾಟಕ ಅಥವ ಹಳೆ ಮೈಸೂರು ಭಾಗದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ?, ಸಚಿವರಾಗಲಿದ್ದಾರೆಯೇ? ಎಂದು ಕೇಳಿದಾಗ, ವಿಜಯೇಂದ್ರ "ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಎಲ್ಲಿಂದ ಸ್ಪರ್ಧೆ ಮಾಡಬೇಕು? ಎಂದು ಪಕ್ಷವೇ ತೀರ್ಮಾನ ಮಾಡಲಿದೆ" ಎಂದು ಬಿ. ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.
ಬಸವಕಲ್ಯಾಣ ಉಪ ಚುನಾವಣೆ
ಮಾರ್ಚ್ ತಿಂಗಳಿನಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ವೇಳೆ ವಿಜಯೇಂದ್ರ ಹೆಸರು ಕೇಳಿ ಬಂದಿತ್ತು. ಉಪ ಚುನಾವಣೆ ಕಣಕ್ಕಿಳಿದು ಅವರು ಬಳಿಕ ಸಚಿವರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಈ ಸುದ್ದಿಯನ್ನು ತಳ್ಳಿ ಹಾಕಿದ್ದರು. "ಬಸವಕಲ್ಯಾಣದಲ್ಲಿ ಬಿ. ವೈ. ವಿಜಯೇಂದ್ರ ಅಭ್ಯರ್ಥಿಯಾಗಲಿದ್ದಾರೆ ಎಂಬುದು ನೂರಕ್ಕೆ ನೂರರಷ್ಟು ಸುಳ್ಳುಸುದ್ದಿ" ಎಂದು ಹೇಳಿದ್ದರು.
ಹಳೆ ಮೈಸೂರು ಭಾಗದಿಂದ ಕಣಕ್ಕೆ?
2018ರ ಚುನಾವಣೆಯಲ್ಲಿಯೇ ಬಿ. ವೈ. ವಿಜಯೇಂದ್ರ ಮೈಸೂರು ಭಾಗದಿಂದ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಹೈಕಮಾಂಡ್ ಒಪ್ಪಿಗೆ ನೀಡಿರಲಿಲ್ಲ. ಕೆಲವು ತಿಂಗಳ ಹಿಂದೆ ಮಾತನಾಡಿದ್ದ ಯಡಿಯೂರಪ್ಪ, "ಬಿ. ವೈ. ವಿಜಯೇಂದ್ರ ಅವರು ಮೈಸೂರಿಗೆ ಹೋಗಿ ಅಲ್ಲಿಯೇ ಇರುತ್ತಾರೆ. ಅಲ್ಲಿಯೇ ಮನೆ ಮಾಡಲಿದ್ದಾರೆ. ಇದರಿಂದಾಗಿ ಐದಾರು ಜಿಲ್ಲೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ. ಮುಂದಿನ ಬಾರಿ ವರುಣಾ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ" ಎಂದು ಹೇಳಿದ್ದರು.
ಯಾವ ಕ್ಷೇತ್ರ ತೀರ್ಮಾನವಾಗಿಲ್ಲ
ಇನ್ನು ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಆಗ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಪುತ್ರ ವಿಜಯೇಂದ್ರ ಉಪಚುನಾವಣೆ ಸ್ಪರ್ಧೆ ಮಾಡುವುದಿಲ್ಲ. ಮುಂದೆ ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ? ಅನ್ನೋದು ನಿರ್ಧಾರವಾಗಿಲ್ಲ" ಎಂದು ಹೇಳಿದರು.
ಯಡಿಯೂರಪ್ಪ ಅವರು ಈ ಹೇಳಿಕೆ ಮೂಲಕ ವಿಜಯೇಂದ್ರ ಹಾನಗಲ್ ಕ್ಷೇತ್ರದಿಂದ ಉಪ ಚುನಾವಣೆ ಕಣಕ್ಕಿಳಿಯಲಿದ್ದಾರೆ ಎಂದು ಹಬ್ಬಿದ್ದ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಸಿ. ಎಂ. ಉದಾಸಿ ನಿಧನದಿಂದಾಗಿ ಹಾನಗಲ್ ಕ್ಷೇತ್ರಕ್ಕೆ ಉಪ ಚುಣಾವಣೆ ಎದುರಾಗಿದೆ. ಚುನಾವಣಾ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.