ತುಂಬಿದ ಅಂಜನಾಪುರ ಜಲಾಶಯ; ಬಾಗಿನ ಅರ್ಪಿಸಿದ ಬಿ.ವೈ.ರಾಘವೇಂದ್ರ
ಶಿವಮೊಗ್ಗ, ಜುಲೈ 21: ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಜೀವಜಲ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ಇಂದು ಸಂಸದ ಬಿ.ವೈ. ರಾಘವೇಂದ್ರ ಅವರು ಕುಟುಂಬ ಸಮೇತ ಜಲಾಶಯದ ಗಂಗೆಗೆ ವಿಷೇಶ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಈ ಸಂದರ್ಭ ಮಾತನಾಡಿದ ಅವರು, "ಅಂಜನಾಪುರ ಜಲಾಶಯ ನಮ್ಮ ತಾಲೂಕಿನ ರೈತರ ಪಾಲಿನ ಜೀವನಾಡಿ. ಸಾಧಾರಣ ಮಳೆಯಿಂದಲೇ ಈ ಜಲಾಶಯ ಭರ್ತಿಯಾಗಿದ್ದು, ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೇವೆ. ಪ್ರತಿವರ್ಷ ಅಂಜನಾಪುರ ಜಲಾಶಯ ಭರ್ತಿಯಾದಾಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಗಮಿಸಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುತ್ತಿದ್ದರು. ಈ ವರ್ಷ ಕೊರೊನಾ ಸಂಕಷ್ಟ ಇರುವುದರಿಂದ ಸಾಧ್ಯವಾಗಿಲ್ಲ" ಎಂದು ತಿಳಿಸಿದರು.
ಶಿವಮೊಗ್ಗ ನಗರದ ವಿವಿಧ ವಾರ್ಡ್ಗಳು ಸಂಪೂರ್ಣ ಲಾಕ್ ಡೌನ್
ತಾಲೂಕಿನಲ್ಲಿ ನೀರಾವರಿ ಯೋಜನೆ ಕಾರ್ಯಗಳು ಆರಂಭವಾಗಿವೆ. ಶಾಶ್ವತ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಈ ವೇಳೆ ಅಂಜನಾಪುರ ಜಲಾಶಯದ ಮೇಲ್ದಂಡೆ ಮೇಲೆ ನಿರ್ಮಿಸಿರುವ ಉದ್ಯಾನವನ್ನು ವೀಕ್ಷಿಸಿದರು ಹಾಗೂ ಕಾರ್ಯಕರ್ತರೊಂದಿಗೆ ಪಾರ್ಕ್ ನಲ್ಲಿ ಸ್ವಲ್ಪ ಕಾಲ ವಿಶ್ರಾಂತಿಸಿದರು.
ಈ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ರೇವಣ್ಣಪ್ಪ, ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ಅಧಿಕಾರಿಗಳು ಭಾಗಿಯಾಗಿದ್ದರು.