ಭೂಮಿ ನೀಡುವ ಯಾವ ರೈತರಿಗೂ ಅನ್ಯಾಯವಾಗಲು ಬಿಡುವುದಿಲ್ಲ: ಬಿ.ವೈ.ರಾಘವೇಂದ್ರ
ಶಿವಮೊಗ್ಗ, ಜುಲೈ 24: ಶಿಕಾರಿಪುರ- ರಾಣೇಬೆನ್ನೂರು-ಶಿವಮೊಗ್ಗ ರೈಲ್ವೆ ಯೋಜನೆಗೆ ಭೂಮಿ ನೀಡುವ ರೈತರಿಗೆ ಯಾವುದೇ ರೀತಿಯಲ್ಲಿ ಮೋಸ ಆಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಸಂಸದ ಬಿ.ವೈ.ರಾಘವೇಂದ್ರ.
ಶಿಕಾರಿಪುರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಸಂಸದ ಬಿ.ವೈ ರಾಘವೇಂದ್ರ ಅವರು ರೈಲ್ವೆ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಭೂಮಿ ನೀಡುವ ರೈತರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಿದರು.
ಶಿಕಾರಿಪುರ: ಬಿಜೆಪಿ ಸೇರ್ಪಡೆಗೊಂಡ 2 ಕಾಂಗ್ರೆಸ್, 3 ಜನ ಸ್ವತಂತ್ರ ಪುರಸಭಾ ಸದಸ್ಯರು
ಈ ಸಂದರ್ಭ ಮಾತನಾಡಿದ ಅವರು, "ಹೆತ್ತ ತಾಯಿ ಬೇರೆಯಲ್ಲ. ಅನ್ನ ನೀಡೋ ಭೂಮಿ ಬೇರೆಯಲ್ಲ. ಹೆತ್ತ ತಾಯಿ ಒಂಬತ್ತು ತಿಂಗಳು ಹಾಲುಣಿಸಿದರೆ, ಭೂಮಿ ನಮ್ಮ ಕೊನೆ ಉಸಿರು ಇರೋವರೆಗೂ ಅನ್ನ ನೀಡುತ್ತಾಳೆ. ಇಂಥ ಭೂಮಿಯನ್ನು ಉತ್ತಿ ಬಿತ್ತಿ ಬೆಳೆ ಬೆಳೆದು ಎಲ್ಲರಿಗೂ ಅನ್ನ ನೀಡೋ ರೈತರಿಗೆ ಎಂದಿಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಅನ್ಯಾಯ ಆಗಲು ಬಿಡುವುದಿಲ್ಲ" ಎಂದು ಹೇಳಿದರು.
ತಾಲ್ಲೂಕಿನ ಹಾರೋಗೊಪ್ಪ, ಎರೆಕಟ್ಟೆ, ದೂಪದಳ್ಳಿ, ಸದಾಶಿವಪುರ ತಾಂಡ, ಬೇಗೂರು ಸೇರಿದಂತೆ ಒಟ್ಟು 11 ಗ್ರಾಮಗಳಲ್ಲಿ ರೈಲ್ವೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲಾಗುವುದು. ಈ ಗ್ರಾಮಗಳಲ್ಲಿ ಒಟ್ಟಾರೆಯಾಗಿ 277 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಲಾಗುವುದು. ಇದರಲ್ಲಿ 73 ಎಕರೆ ಬಗರ್ ಹುಕುಂ, 55 ಎಕರೆ ಸರ್ಕಾರಿ ಜಮೀನು, 10 ಎಕರೆ ಕಂದಾಯ ಇಲಾಖೆಯ ಜಮೀನು, 5.18 ಎಕರೆ ಶೃಂಗೇರಿ ಮಠದ ಜಮೀನು ಇದೆ. ಇದರಲ್ಲಿ ಉಳುಮೆ ಮಾಡುವ ಎಲ್ಲಾ ರೈತರಿಗೂ ಸಿಎಂ ಹಾಗೂ ತಾವು ಸೇರಿ ಅಧಿಕಾರಿಗಳ ಜೊತೆ ಸಮಾಲೋಚನೆ ಸಭೆ ನಡೆಸಿ ಸೂಕ್ತ ಪರಿಹಾರ ಕೊಡಿಸಲು ಬದ್ಧರಾಗಿದ್ದೇವೆ ಎಂದರು.
ಈ ಸಂದರ್ಭ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಕೆ. ರೇವಣಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಉಡುಗಣಿ, ಭೂ ಸ್ವಾಧೀನಾಧಿಕಾರಿ ಸರೋಜಮ್ಮ, ಸಾಗರ ಉಪವಿಭಾಗಾಧಿಕಾರಿ ಡಾ. ನಾಗರಾಜ್, ತಹಶೀಲ್ದಾರ್ ಕವಿರಾಜ್ ಇದ್ದರು.