3 ಸಚಿವರು,ಸಿಎಂ ಶೀಘ್ರ ರಾಜೀನಾಮೆ : ಬಿಎಸ್ ವೈ ಶಕುನ
ಶಿವಮೊಗ್ಗ, ಡಿಸೆಂಬರ್ 12: ಹಗರಣಗಳಲ್ಲಿ ಭಾಗಿಯಾಗಿರುವ ರಾಜ್ಯ ಸರಕಾರದ ಮೂವರು ಸಚಿವರು ಶೀಘ್ರ ರಾಜಿನಾಮೆ ನೀಡಲಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜಿನಾಮೆ ಕೊಡಬೇಕಾತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರಕಾರದ ಎತ್ತಿನಹೊಳೆ ಹಗರಣ, ಸ್ಟೀಲ್ ಬ್ರಿಡ್ಜ್ ಹಗರಣದಲ್ಲಿ ಸಚಿವರುಗಳು ಭಾರಿ ಕಮಿಷನ್ ಪಡೆದಿರುವುದು ಕಂಡು ಬಂದಿದೆ. ಐಟಿ ದಾಳಿಯಲ್ಲಿ ಸಿಕ್ಕಿ ಬಿದ್ದಿರುವ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರೊಂದಿಗೆ ಸಂಪುಟದ ಸಚಿವರು ಕೋಟ್ಯಾಂತರ ರು ಅವ್ಯವಹಾರ ನಡೆಸಿದ್ದಾರೆ ಹೀಗಾಗಿ ಅವರು ಸಿಕ್ಕಿ ಬೀಳುವ ಸಾದ್ಯತೆಯಿದೆ. ಬಹುಬೇಗ ರಾಜಿನಾಮೆ ನೀಡಲಿದ್ದಾರೆ ಎಂದರು.[ಯಡಿಯೂರಪ್ಪ ಇನ್ನೊಮ್ಮೆ ಜೈಲಿಗೆ ಹೋಗ್ತಾರೆ: ಸಿದ್ದು]
ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳ ವಿರುದ್ಧ ಕಿಡಿಕಾರಿದ್ದು ಸಿಎಂ ತುಂಬಾನೇ ಹಗುರವಾಗಿ ಮಾತನಾಡುತ್ತಿದ್ದು, ನಾನು ಮತ್ತೆ ಜೈಲಿಗೆ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ. ಅವರ ಸಂಪುಟದಲ್ಲಿ ಜೈಲಿಗೆ ಹೋಗುವ ಸಚಿವರ ಸಂಖ್ಯೆ ದೊಡ್ಡದಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಸಿಕ್ಕಿ ಬಿದ್ದಿರುವ ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ಸಚಿವರುಗಳ ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.[ರಾಯಣ್ಣ ಬ್ರಿಗೇಡ್ ಕಾವು: ಈಶ್ವರಪ್ಪನವರಿಗೆ 5 ಪ್ರಶ್ನೆಗಳು]
ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ನನ್ನ ಪ್ರತಿಕ್ರಿಯಿಲ್ಲ ಈಗಾಗಲೇ ಹಲವು ಭಾರಿ ಈಶ್ವರಪ್ಪ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಕೇಂದ್ರ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದು ಅವರೇ ಮುಂದಿನ ಕ್ರಮ ಜರುಗಿಸುತ್ತಾರೆ ಎಂದರು.