ಶಿವಮೊಗ್ಗದಲ್ಲಿ ಭಾರತ ಬಂದ್ಗೆ ನೀರಸ ಪ್ರತಿಕ್ರಿಯೆ; ಬೀದಿಗಿಳಿದ ರೈತರು, ಕನ್ನಡಪರ ಸಂಘಟನೆಗಳು
ಶಿವಮೊಗ್ಗ, ಸೆಪ್ಟೆಂಬರ್ 27: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ ಬಂದ್ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಸ್, ಆಟೋ, ಟ್ರಾಕ್ಸ್ ಸಂಚಾರ ಎಂದಿನಂತೆ ಇದ್ದು, ಜನಜೀವನದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ.
ಭಾರತ ಬಂದ್ಗೆ ಖಾಸಗಿ ಬಸ್ ಮಾಲೀಕರು, ಆಟೋ ಚಾಲಕರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ.
ಭಾರತ ಬಂದ್: ರೈತ, ಕನ್ನಡಪರ ಸಂಘಟನೆಗಳ ಮುಖಂಡರು ಪೊಲೀಸರ ವಶಕ್ಕೆ
ಖಾಸಗಿ ಬಸ್ಗಳು ಶಿವಮೊಗ್ಗ ಜಿಲ್ಲೆಯ ಜೀವನಾಡಿಯಾಗಿದ್ದು, ಈ ಬಸ್ಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧೆಡೆಗೆ ಬಸ್ಗಳು ಸಂಚಾರ ಆರಂಭಿಸಿವೆ. ಇನ್ನು ಕೆಎಸ್ಆರ್ಟಿಸಿ ಬಸ್ಗಳು ಕೂಡ ರಸ್ತೆಗಿಳಿದಿವೆ. ದೂರದೂರುಗಳಿಗೆ ಈಗಾಗಲೇ ಬಸ್ಗಳ ಸಂಚಾರ ಆರಂಭಿಸಿವೆ. ಎರಡೂ ನಿಲ್ದಾಣದಲ್ಲಿ ಪ್ರಯಾಣಿಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಆಟೋ, ಟ್ರಾಕ್ಸ್ ಸಂಚಾರ ಶುರು
ಶಿವಮೊಗ್ಗ ನಗರದಲ್ಲಿ ಆಟೋ ಮತ್ತು ಟ್ರಾಕ್ಸ್ ಸಂಚಾರವು ಯಥಾಸ್ಥಿತಿಯಲ್ಲಿದೆ. ಆಟೋ ಮಾಲೀಕರು ಮತ್ತು ಚಾಲಕರು ನೈತಿಕ ಬೆಂಬಲ ಘೋಷಿಸಿದ್ದಾರೆ. ಹಾಗಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಆಟೋಗಳ ಸಂಚಾರ ಎಂದಿನಂತೆ ಇದೆ. ಇನ್ನು ಶಿವಮೊಗ- ಭದ್ರಾವತಿ ನಡುವೆ ಸಂಚರಿಸುವ ಟ್ರಾಕ್ಸ್ ಕೂಡ ರಸ್ತೆಗಿಳಿದಿವೆ. ಇವುಗಳ ಸಂಚಾರವು ಸಾಮಾನ್ಯ ದಿನದ ಹಾಗೆಯೇ ಇದೆ.
ಆಂಗಡಿಗಳ ಬಾಗಿಲು ಓಪನ್
ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದಲೇ ಅಂಗಡಿಗಳ ಬಾಗಿಲು ತೆಗೆಯಲಾಗಿದ್ದು, ವ್ಯಾಪಾರ- ವಹಿವಾಟು ಆರಂಭವಾಗಿದೆ. ವಿವಿಧ ಬಡಾವಣೆಗಳಲ್ಲಿನ ದಿನಸಿ ಅಂಗಡಿಗಳು, ಮೆಡಿಕಲ್ ಶಾಪ್ಗಳು, ಹೋಟೆಲ್, ಕ್ಯಾಂಟೀನ್ಗಳ ಬಾಗಿಲು ತೆಗೆದು ವ್ಯಾಪಾರ ಶುರು ಮಾಡಲಾಗಿದೆ. ಜನ ಜೀವನ ಕೂಡ ಎಂದಿನಂತೆಯೇ ಇದೆ. ಉಳಿದಂತೆ ನೆಹರೂ ರಸ್ತೆ, ಗಾಂಧಿ ಬಜಾರ್, ಬಿ.ಎಚ್. ರಸ್ತೆಯಲ್ಲಿ ಬೆಳಗ್ಗೆ 10 ಗಂಟೆ ನಂತರ ವಹಿವಾಟು ಆರಂಭವಾಗಲಿದೆ. ಹಾಗಾಗಿ ಇಲ್ಲಿ ಅಂಗಡಿಗಳನ್ನು ಬಂದ್ ಆಗಿವೆ. ಇದರ ಹೊರತು ಶಿವಮೊಗ್ಗ ನಗರದಲ್ಲಿ ಜನಜೀವನ ಎಂದಿನಂತೆಯೇ ಇದೆ.
ಬೆಳ್ಳಂಬೆಳಗ್ಗೆ ಬೀದಿಗಿಳಿಂದ ಕನ್ನಡಪರ ಸಂಘಟನೆಗಳು
ಭಾರತ ಬಂದ್ಗೆ ಬೆಂಬಲ ಘೋಷಿಸಿ ಕನ್ನಡಪರ ಸಂಘಟನೆಗಳು ಬೆಳ್ಳಂಬೆಳಗ್ಗೆ ರಸ್ತೆಗಿಳಿದಿವೆ. ಬಸ್ಗಳ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿವೆ. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂದೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಘೋಷಣೆ ಕೂಗುತ್ತ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಸ್ ಸಂಚಾರ ತಡೆಗೆ ಯತ್ನ
ಇನ್ನು ಕೆಎಸ್ಆರ್ಟಿಸಿ ಬಸ್ಗಳ ಸಂಚಾರಕ್ಕೆ ತಡೆಯೊಡ್ಡಲು ಕನ್ನಡಪರ ಕಾರ್ಯಕರ್ತರು ಯತ್ನಿಸಿದರು. ಬಸ್ಗಳು ಹೊರಗೆ ಹೋಗುವ ಮಾರ್ಗದಲ್ಲಿ ರಸ್ತೆಗೆ ಕುಳಿತು ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಶಿವಮೊಗ್ಗದ ಅಶೋಕ ಸರ್ಕಲ್ನಲ್ಲಿ ಕನ್ನಡಪರ ಸಂಘಟನೆ ಮುಖಂಡ ವಾಟಾಳ್ ಮಂಜುನಾಥ್ ಉರುಳು ಸೇವೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಎಪಿಎಂಸಿ ತರಕಾರಿ ಮಾರುಕಟ್ಟೆ ಬಂದ್
ಶಿವಮೊಗ್ಗದ ವಿನೋಬ ನಗರದಲ್ಲಿರುವ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆ ಬಂದ್ ಮಾಡಲಾಗಿದೆ. ಇಲ್ಲಿನ ವ್ಯಾಪಾರಿಗಳು ಬಂದ್ಗೆ ಬೆಂಬಲ ಸೂಚಿಸಿರುವುದರಿಂದ ಎಪಿಎಂಸಿ ಗೇಟ್ನ್ನು ಬೆಳಗ್ಗೆಯಿಂದ ಬಂದ್ ಮಾಡಲಾಗಿದೆ. ಬೆಳಗ್ಗೆಯಿಂದಲೇ ವಹಿವಾಟು ಸ್ಥಗಿತಗೊಳಿಸಿ ವ್ಯಾಪಾರಿಗಳು ರೈತರ ಪರವಾಗಿ ಬೆಂಬಲ ಘೋಷಿಸಿದ್ದಾರೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಈ ತರಕಾರಿ ಮಾರುಕಟ್ಟೆಗೆ ರೈತರ ಬೆಳೆದ ಬೆಳೆ ಬರುತ್ತಿದ್ದವು.
ರೈತರಿಂದ ಬೈಕ್ ಜಾಥಾ
ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ಗೆ ಬೆಂಬಲ ನೀಡುವಂತೆ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮನವಿ ಮಾಡಿದರು. ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರಿಗಳಿಗೆ ಕರಪತ್ರ ಹಂಚಿ ಮನವಿ ಮಾಡಿದರು. ಅಶೋಕ ಸರ್ಕಲ್ ಸೇರಿದಂತೆ ವಿವಿಧೆಡೆ ರೈತರ ಸಂಘದ ಪ್ರಮುಖರಾದ ಕೆ.ಟಿ. ಗಂಗಾಧರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ತರಕಾರಿ ಮಂಡಿ ಅಧ್ಯಕ್ಷ ಎನ್. ರಮೇಶ್ ಸೇರಿದಂತೆ ಹಲವರು ಅಂಗಡಿಗಳು, ಹೋಟೆಲ್ಗಳಿಗೆ ತೆರಳಿ ಮನವಿ ಮಾಡಿದರು. ಇನ್ನು ರೈತ ಸಂಘದ ಕಾರ್ಯಕರ್ತರು ಶಿವಮೊಗ್ಗದ ನಗರದಾದ್ಯಂತ ಬೈಕ್ ಜಾಥಾ ನಡೆಸಿ, ಭಾರತ್ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.