ಶಿವಮೊಗ್ಗ ಸ್ಫೋಟ; ಸಿಗರೇಟು ಸೇದುತ್ತಿದ್ದ ಕಾರ್ಮಿಕರು!
ಶಿವಮೊಗ್ಗ, ಜನವರಿ 22: ಗುರುವಾರ ರಾತ್ರಿ ಶಿವಮೊಗ್ಗದಲ್ಲಿ ಕೇಳಿ ಬಂದ ನಿಗೂಢ ಶಬ್ದ, ಸ್ಫೋಟಕ್ಕೆ ಕಾರಣ ಭೂಕಂಪನ ಕಾರಣ ಅಲ್ಲ ಎಂಬುದು ಸಾಬೀತಾಗಿದೆ. ಕ್ರಷರ್ಗೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ.
ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಕ್ರಷರ್ನಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟಗೊಂಡಿದೆ. ರೈಲ್ವೆ ಇಲಾಖೆಗೆ ಜಲ್ಲಿಗಳನ್ನು ಪೂರೈಕೆ ಮಾಡುವ ಕ್ರಷರ್ನಲ್ಲಿ ಈ ಸ್ಪೋಟ ಸಂಭವಿಸಿದ್ದು, ತೀವ್ರತೆಗೆ 6ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ.
ದುರಂತ ನಡೆದ ಸ್ಥಳದಲ್ಲಿ ಕಗ್ಗತ್ತಲೆ, ಕೆಟ್ಟ ವಾಸನೆ
ಸ್ಫೋಟದ ತೀವ್ರತೆಗೆ ಶಿವಮೊಗ್ಗದಲ್ಲಿ ಮತ್ತು ಚಿಕ್ಕಮಗಳೂರಿನಲ್ಲಿ ಶಬ್ದ ಕೇಳಿ ಬಂದಿದ್ದು, ಜನರು ಕೆಲವು ಕಾಲ ಆತಂಕಗೊಳ್ಳುವಂತೆ ಮಾಡಿತ್ತು.ಹುಣಸೋಡು ಬಳಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಸ್ಫೋಟ; ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಮೋದಿ
ಗುರುವಾರ ರಾತ್ರಿ 10.30ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ 8 ಮಂದಿ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಜಿಲ್ಲಾಡಳಿತ ಯಾವುದೇ ಖಚಿತವಾದ ಮಾಹಿತಿ ನೀಡಿಲ್ಲ. ಸ್ಫೋಟದ ತೀವ್ರತೆ ಗಮನಿಸಿದರೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
ಶಿವಮೊಗ್ಗದಲ್ಲಿ ಸ್ಫೋಟ; ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ
ಸಿಗರೇಟು ಸೇದುತ್ತಿದ್ದರು
ಹುಣಸೋಡು ಗ್ರಾಮಸ್ಥರು ಹೇಳುವ ಪ್ರಕಾರ ಬೊಲೆರೋ ವಾಹನದಲ್ಲಿ ಬಂದಿದ್ದ ವ್ಯಕ್ತಿಗಳು ಸ್ಫೋಟಕ ವಸ್ತುಗಳನ್ನ ಇಟ್ಟುಕೊಂಡು ಹೋಗುತ್ತಿದ್ದರು. ಅವರು ಬೀಡಿ, ಸಿಗರೇಟು ಹಚ್ಚಿಕೊಂಡಿದ್ದರು. ಇದೇ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ಬೆಂಗಳೂರಿನಿಂದ ತಜ್ಞರ ತಂಡ
ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಕೇಳಿ ಬಂದ ನಿಗೂಢ ಶಬ್ದಕ್ಕೂ ಸ್ಪೋಟಕ್ಕೂ ಏನಾದರು ತಾಳೆ ಆಗುತ್ತದೆಯೇ? ಎಂಬ ಮಾಹಿತಿಯನ್ನು ತಿಳಿಯಲು ಬೆಂಗಳೂರಿನಿಂದ ತಜ್ಞರ ತಂಡ ಶುಕ್ರವಾರ ಶಿವಮೊಗ್ಗಕ್ಕೆ ಆಗಮಿಸಲಿದೆ. ಹುಣಸೋಡು, ಕಲ್ಲುಗಂಗೂರು ನಡುವೆ ಇರುವ ರೈಲ್ವೆ ಕ್ರಶರ್ ಹಿಂಭಾಗದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಈ ಪ್ರದೇಶವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನಿಖೆಗೆ ಆದೇಶ ನೀಡಿದ ಮುಖ್ಯಮಂತ್ರಿಗಳು
ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದ ಕ್ರಷರ್ನಲ್ಲಿ ನಡೆದ ಸ್ಫೋಟದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿಗಳು ಶನಿವಾರ ಶಿವಮೊಗ್ಗ ಪ್ರವಾಸ ಕೈಗೊಳ್ಳಲಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ಏನು? ಎಂಬುದು ತನಿಖೆಯ ನಂತರ ತಿಳಿದುಬರಲಿದೆ.
|
ಎಚ್. ಡಿ. ಕುಮಾರಸ್ವಾಮಿ ಟ್ವೀಟ್
"ಕಲ್ಲು ಕ್ವಾರಿಯಲ್ಲಿ ನಡೆದ ಈ ಸ್ಫೋಟದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.