ಶಿವಮೊಗ್ಗ ಸ್ಪೋಟ ಪ್ರಕರಣ; ಮುಂಬೈನಲ್ಲಿ ಇಬ್ಬರು, ಚನ್ನಗಿರಿಯಲ್ಲಿ ಮತ್ತಿಬ್ಬರ ಬಂಧನ
ಶಿವಮೊಗ್ಗ, ಫೆಬ್ರವರಿ 6: ಶಿವಮೊಗ್ಗ ಜಿಲ್ಲೆ ಕಲ್ಲಗಂಗೂರು ಕಲ್ಲುಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣ ಸಂಬಂಧ, ಸ್ಪೋಟಕ ಪೂರೈಕೆ ಮಾಡಿದ್ದ ಆಂಧ್ರಪ್ರದೇಶದ ಆರೋಪಿಗಳು ಸೇರಿ ನಾಲ್ವರನ್ನು ಬಂಧಿಸಲಾಗಿದ್ದು, ಇದರಿಂದ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಆಂಧ್ರಪ್ರದೇಶದ ಅನಂತಪುರದ ಪಿ.ಶ್ರೀರಾಮುಲು (68), ಆತನ ಪುತ್ರ ಪಿ.ಮಂಜುನಾಥ ಸಾಯಿ (36), ಕಲ್ಲಗಂಗೂರಿನ ಕ್ರಷರ್ ಜಾಗದ ಮಾಲೀಕ ಶಂಕರಗೌಡ ಕುಲಕರ್ಣಿ (76), ಆತನ ಪುತ್ರ ಅವಿನಾಶ್ ಕುಲಕರ್ಣಿ (43) ಬಂಧಿತರಾಗಿದ್ದಾರೆ.
ಹುಣಸೋಡು ಸ್ಪೋಟ; ಹಾನಿಯಾದ ಮನೆಗಳಿಗೆ ಸಿಕ್ಕಿಲ್ಲ ಪರಿಹಾರ
ಮುಂಬೈನಲ್ಲಿ ಸಿಕ್ಕಿಬಿದ್ದ ಶ್ರೀರಾಮುಲು
ಶ್ರೀರಾಮುಲು ಮತ್ತು ಮಂಜುನಾಥ್ ಸಾಯಿ ಮುಂಬೈನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಿದ್ದ ಶಿವಮೊಗ್ಗ ಮಹಿಳಾ ಠಾಣೆ ಇನ್ಸ್ ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್, ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್, ಎಎಸ್ಐ ವಿಜಯ್, ಕಿರಣ್ ಮೋರೆ ಅವರನ್ನು ಒಳಗೊಂಡ ತಂಡ ಇಬ್ಬರನ್ನು ಬಂಧಿಸಿದೆ.
ಆಂಧ್ರಕ್ಕೂ ತೆರಳಿದ್ದ ಟೀಮ್
ಸ್ಪೋಟ ಸರಬರಾಜು ಸಂಬಂಧ ತನಿಖೆ ನಡೆಸಲು ಆಂಧ್ರದ ಅನಂತಪುರಕ್ಕೂ ಶಿವಮೊಗ್ಗ ಪೊಲೀಸರ ಒಂದು ತಂಡ ಕಳುಹಿಸಲಾಗಿತ್ತು ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ. ತುಂಗಾನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ದೀಪಕ್ ಮತ್ತು ಸೊರಬ ಠಾಣೆ ಇನ್ಸ್ ಪೆಕ್ಟರ್ ಮರುಳಸಿದ್ದಪ್ಪ ನೇತೃತ್ವದ ತಂಡ ಆಂಧ್ರಕ್ಕೆ ತೆರಳಿತ್ತು. ಅಲ್ಲಿ ಪರವಾನಗಿ ಹೊಂದಿದ್ದ ಸ್ಪೋಟಕ ಗೋದಾಮು ಸ್ಥಾಪಿಸಿದ್ದ ಶ್ರೀರಾಮುಲು, ಅಕ್ರಮವಾಗಿ ಸ್ಪೋಟಕ ದಾಸ್ತಾನು ಮಾಡಿದ್ದು, ಲೈಸೆನ್ಸ್ ಇಲ್ಲದೆಯೇ ಸ್ಪೋಟಕ ಪೂರೈಕೆ ಮಾಡಿರುವ ಮಾಹಿತಿ ಸಂಗ್ರಹಿಸಿತ್ತು. ಈ ಸಂಬಂಧ ಗುಮ್ಮಟಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಷರ್ ಜಾಗದ ಮಾಲೀಕ, ಮಗ ಅರೆಸ್ಟ್
ಸ್ಪೋಟ ಸಂಭವಿಸಿದ ಜಾಗದ ಮಾಲೀಕ ಶಂಕರಗೌಡ ಕುಲಕರ್ಣಿ (76) ಮತ್ತು ಆತನ ಪುತ್ರ ಅವಿನಾಶ್ ಕುಲಕರ್ಣಿ (43) ಬಂಧಿತರಾಗಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದರು.
ಸ್ಪೋಟದ ಬಳಿಕ ಶಂಕರಗೌಡ ಕುಲಕರ್ಣಿ ಮತ್ತು ಅವಿನಾಶ್ ಕುಲಕರ್ಣಿ ತಲೆಮರೆಸಿಕೊಂಡಿದ್ದರು. ಭದ್ರಾವತಿ ಟೌನ್ ಠಾಣೆ ಇನ್ಸ್ ಪೆಕ್ಟರ್ ರಾಘವೇಂದ್ರ ಕಾಂಡಿಕೆ, ವಿನೋಬನಗರ ಠಾಣೆ ಪಿಎಸ್ಐ ಉಮೇಶ್, ಸಿಬ್ಬಂದಿಗಳಾದ ನಾಗರಾಜ್, ಸಂದೀಪ್ ಅವರ ತಂಡ ಇವರಿಗಾಗಿ ಶೋಧ ಕಾರ್ಯ ನಡೆಸಿತ್ತು.
ಈತನಕ ಎಂಟು ಮಂದಿ ಅರೆಸ್ಟ್
ಹಾವೇರಿ, ದಾವಣಗೆರೆ, ಜಗಳೂರು, ಚನ್ನಗಿರಿಗೆ ತೆರಳಿ ತನಿಖೆ ನಡೆಸಿದ್ದ ಪೊಲೀಸರಿಗೆ ಇಬ್ಬರ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಚನ್ನಗಿರಿಯಲ್ಲಿ ಶಂಕರಗೌಡ ಕುಲಕರ್ಣಿ ಮತ್ತು ಅವಿನಾಶ್ ಕುಲಕರ್ಣಿಯನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ಈತನಕ ಎಂಟು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಸ್ಪೋಟ ಸಂಭವಿಸುತ್ತಿದ್ದಂತೆ ಕ್ರಷರ್ ಮಾಲೀಕ ಬಿ.ವಿ.ಸುಧಾಕರ್, ನರಸಿಂಹ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಈಗ ಸ್ಪೋಟಕ ಪೂರೈಸಿದ್ದ ಇಬ್ಬರು, ಕ್ರಷರ್ ಜಾಗದ ಮಾಲೀಕರು ಅರೆಸ್ಟ್ ಆಗಿದ್ದು, ಈತನಕ ಎಂಟು ಮಂದಿಯ ಬಂಧನವಾದಂತಾಗಿದೆ. ಈ ವೇಳೆ ಹೆಚ್ಚುವರಿ ರಕ್ಷಣಾಧಿಕಾರಿ ಎಚ್.ಟಿ.ಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.