ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ವಿಶ್ವಾಸ..!
ಶಿವಮೊಗ್ಗ : ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮೂರನೇ ಎರಡರಷ್ಟು ಶಾಸಕರ ಸ್ಥಾನ ಗೆದ್ದು ಪಕ್ಷ ಅಧಿಕಾರಕ್ಕೇರಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಶಿವಮೊಗ್ಗದ ಪೆಸಿಟ್ ಕಾಲೇಜಿನ ಆವರಣದ ಪ್ರೇರಣಾ ಸಭಾಂಗಣದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ವಿಶೇಷ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜ್ಯದಲ್ಲಿ ಪಕ್ಷವನ್ನು ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಪರಿಶ್ರಮ ಮತ್ತು ಪ್ರವಾಸ ಅತ್ಯಗತ್ಯ. ತಿಂಗಳಲ್ಲಿ ಏಳು ದಿನ ಕಾರ್ಯಕರ್ತರನ್ನು ಭೇಟಿ ಮಾಡಿ ಮತ್ತು ಪಕ್ಷಕ್ಕಾಗಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಮನವಿ ಮಾಡಿದರು.
ದೇಶದ ಅಭಿವೃದ್ಧಿಗಾಗಿ ಒಂದು ದೇಶ ಒಂದು ತೆರಿಗೆ ಇರಬೇಕು. ಹಾಗೆಯೇ ಒಂದು ದೇಶ ಒಂದೇ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಇದು ಸಕಾಲ ಎಂದು ಅಭಿಪ್ರಾಯಪಟ್ಟರು. ಈಗ ಹೆಚ್ಚಿನ ಸಮಯವನ್ನು ನಾವು ಚುನಾವಣೆಗೆ ಮೀಸಲಾಗಿ ಇಡಬೇಕಾಗುತ್ತಿದೆ. ಚುನಾವಣಾ ಕಾರ್ಯದಿಂದ ಶಿಕ್ಷಕರು, ಪೊಲೀಸ್ ವ್ಯವಸ್ಥೆ ತೊಂದರೆಗೆ ಸಿಲುಕುತ್ತದೆ. ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳುತ್ತದೆ ಎಂದು ವಿವರಿಸಿದರು.
ಕರ್ನಾಟಕ ಸರಕಾರವು ಯಡಿಯೂರಪ್ಪ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಸರಕಾರದ ಬಗ್ಗೆ ಪಕ್ಷದವರು ಹೊರಗಡೆ ಮಾತನಾಡಬಾರದು ಎಂದು ಸೂಚಿಸಿದ ಅವರು ಚಪ್ಪಾಳೆ ತಟ್ಟಿ ಯಡಿಯೂರಪ್ಪ ಅವರನ್ನು ಅಭಿನಂದಿಸಲು ಮನವಿ ಮಾಡಿದರು.
ಗೋಹತ್ಯಾ ನಿಷೇಧ ಕಾಯ್ದೆಗಾಗಿ ಸರಕಾರವನ್ನು ಅಭಿನಂದಿಸಿದರು. ಬಿಜೆಪಿಗೆ ಭದ್ರ ನೆಲೆ ಒದಗಿಸಿದ ಜಿಲ್ಲೆಯಿದು, ಕರ್ನಾಟಕದ ಪ್ರತಿ ಕ್ಷೇತ್ರದಲ್ಲೂ ಬಿಜೆಪಿಯ ಕಮಲ ಅರಳಿಸುವ ಪ್ರಯತ್ನ ನಮ್ಮದಾಗಲಿ ಎಂದರು.
ಈ ಸಭೆಗೆ ಕೋವಿಡ್ ನಡುವೆಯೂ ಶೇ 90ರಷ್ಟು ಸದಸ್ಯರು ಬಂದಿರುವುದು ಮಹತ್ವದ ವಿಚಾರ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ನಂತರ ಈ ಸಭೆ ನಡೆಯುತ್ತಿದೆ. ಇದು ಪಕ್ಷಕ್ಕೆ ಸಂತಸ ನೀಡಿದೆ ಎಂದರು.
ಇದೇ ವೇಳೆಯಲ್ಲಿ ದೇಶದ ಬಹುತೇಕ ರೈತರು ಪ್ರಧಾನಿ ಮೋದಿಜಿಯನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಪ್ರಯತ್ನದಿಂದ ಕೆಲವೇ ಕೆಲವು ರೈತರು ದೆಹಲಿಯ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.
ಕನಿಷ್ಠ ಬೆಂಬಲ ಬೆಲೆಯಡಿ ರೈತರ ಉತ್ಪನ್ನ ಖರೀದಿಯ ಪ್ರಮಾಣ ಮತ್ತು ಬೆಂಬಲ ಬೆಲೆಯೂ ಹೆಚ್ಚುತ್ತಲೇ ಸಾಗಿದೆ. 14 ವರ್ಷ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರ ನೇತೃತ್ವದಲ್ಲಿ ಕೃಷಿ ಉತ್ಪಾದನಾ ಪ್ರಮಾಣ ತೀವ್ರವಾಗಿ ಹೆಚ್ಚಿತ್ತು. ರಾಹುಲ್ ಬಾಬಾ ಅವರಿಗೆ ಕೃಷಿಯ ಬಗ್ಗೆ ಏನೇನೂ ತಿಳಿದಿಲ್ಲ ಎಂದು ಟೀಕಿಸಿದರು.