ಪಾರ್ಕಿಂಗ್ ವಿಚಾರ; ವೈದ್ಯರ ಮೇಲೆ ಕುಮಾರ್ ಬಂಗಾರಪ್ಪ ಹಲ್ಲೆ ಯತ್ನ?
ಶಿವಮೊಗ್ಗ, ಜೂನ್ 02: ದಂತವೈದ್ಯ ಡಾ. ಎಚ್. ಇ. ಜ್ಞಾನೇಶ್ ಮೇಲೆ ಸೊರಬ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೆಪಿಸಿಸಿ ವೈದ್ಯ ಘಟಕದ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಾ. ಪ್ರದೀಪ್ ಡಿಮೆಲ್ಲೊ ಘಟನೆಗೆ ಆಕ್ಷೇಪ ವ್ಯಕ್ತಿಪಡಿಸಿದ್ದು, ಶಾಸಕರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಸೊರಬ ತಾಲೂಕಿನ ಶಿರಾಳಕೊಪ್ಪ ರಸ್ತೆಯ ಕ್ಲಿನಿಕ್ನಲ್ಲಿ ಜ್ಞಾನೇಶ್ ದಂತವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಕುಮಾರ್ ಬಂಗಾರಪ್ಪ ವೈದ್ಯರನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ ಎಂಬುದು ಆರೋಪ.
ಶಿವಮೊಗ್ಗ; ಈ ಬಡಾವಣೆ ಜನರಿಗೆ ಮಳೆಗಾಲದ ಪ್ರವಾಹ ಆತಂಕ!
ವೈದ್ಯರ ಮೇಲೆ ಈ ರೀತಿ ದರ್ಪ ತೋರಿಸುವ ಶಾಸಕರು ಸಾಮಾನ್ಯ ಜನರನ್ನು ಬಿಡುತ್ತಾರೆಯೇ?. ಇಂತಹ ಧೋರಣೆಗಳನ್ನು ಶಾಸಕರು ಕೈಬಿಡಬೇಕು, ಇಲ್ಲವಾದರೆ ರಾಜ್ಯದ್ಯಾಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರದೀಪ್ ಎಚ್ಚರಿಕೆ ನೀಡಿದ್ದಾರೆ.
ಕುಮಾರ್ ಬಂಗಾರಪ್ಪ ವರ್ತನೆ ಕೇವಲ ಜ್ಞಾನೇಶ್ಗೆ ಮಾತ್ರವಲ್ಲಿ ರಾಜ್ಯದ ವೈದ್ಯ ಸಮೂಹಕ್ಕೆ ನೋವುಂಟು ಮಾಡಿದೆ. ಹಾಗಾಗಿ ಶಾಸಕರು ಕೂಡಲೇ ವೈದ್ಯರ ಕ್ಷಮೆಯಾಚಿಸಬೇಕು. ಮುಖ್ಯಮಂತ್ರಿಗಳು ಇಂತಹ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಡಾ. ಎಚ್. ಇ. ಜ್ಞಾನೇಶ್ ಹೇಳಿದ್ದೇನು?; ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದ ನಾಲ್ಕೈದು ಕಾಂಪ್ಲೆಕ್ಸ್ಗೆ ಸೇರಿದ ಜಾಗದಲ್ಲಿ ನಾವು ಮಣ್ಣನ್ನು ಹಾಕಿ ಕಾರು ಪಾರ್ಕಿಂಗ್ ಮಾಡಲು ಸ್ಥಳ ಸಿದ್ಧಪಡಿಸಿಕೊಂಡಿದ್ದೇವೆ. ಕಳೆದ ಹಲವು ವರ್ಷಗಳಿಂದ ಅದೇ ಜಾಗದಲ್ಲಿ ನಾನು ಕಾರು ಪಾರ್ಕ್ ಮಾಡುತ್ತಿದ್ದೆ. ಅದು ಯಾವುದೇ ಸಂಪರ್ಕ ಕಲ್ಪಿಸುವ ರಸ್ತೆಯಲ್ಲ, ಆಗಿದ್ದರಿಂದ ನಾನು ಕಾರನ್ನು ಅದೇ ಜಾಗದಲ್ಲಿ ನಿಲ್ಲಿಸುತ್ತಿದ್ದೆ ಎಂದು ವೈದ್ಯರು ಹೇಳಿದ್ದಾರೆ.
ಆ ರಸ್ತೆಯಲ್ಲಿ ಆ ದಿನ ಕಾರಿನ ಹಾರ್ನ್ ಶಬ್ಧ ಕೇಳಿ ಹೊರಬಂದೆ, ಶಾಸಕರ ಕಾರು ನಿಂತಿತ್ತು. ನಾನು ಅವರಿಗೆ ನಮಸ್ಕಾರ ಮಾಡಿ ಕಾರನ್ನು ತೆಗೆಯಲು ಮುಂದಾದೆ. ಆದರೆ ಶಾಸಕರು ನಿರಂತರವಾಗಿ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಲು ಶುರು ಮಾಡಿದರು. ಆದರೂ ನಾನು ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಬಂದು, ಯಾಕೆ ಸರ್ ಬೈತೀದೀರಾ, ನಾನೊಬ್ಬ ವೈದ್ಯ ಸರಿಯಾಗಿ ಮಾತನಾಡಿ ಎಂದು ಕೇಳಿದೆ. ಆದರೂ ಅವರು ನೀನು ವೈದ್ಯನಾದರೆ, ಪುಕ್ಕಟೆ ಕೆಲಸ ಮಾಡುತ್ತೀಯಾ, ಜನರಿಂದ ದುಡ್ಡು ತೆಗೆದುಕೊಳ್ಳುವುದಿಲ್ಲವೇ?. ಯೂಸ್ಲೆಸ್ ಫೆಲೋ ಅಂತಾ ಬೈಯಲು ಶುರುಮಾಡಿದರು ಎಂದು ಆರೋಪಿಸಿದ್ದಾರೆ.
ಇಷ್ಟೆಲ್ಲಾ ಬೈಯ್ದ ಮೇಲೂ ನಾನೇನು ಪ್ರತಿಕ್ರಿಯಿಸದೇ ಗೌರವ ಕೊಟ್ಟು ಮಾತನಾಡಿ ಸರ್, ನಾನು ಇಲ್ಲಿ ಎಲ್ಲರಿಗೂ ಗೊತ್ತಿರುವ ವ್ಯಕ್ತಿ ಎಂದು ಹೇಳಿದೆ. ಸ್ವಲ್ಪ ದೂರ ಹೋದವರು ಮತ್ತೆ ವಾಪಸ್ ಬಂದು ನನ್ನ ಕ್ಲಿನಿಕ್ ಮೆಟ್ಟಿಲ ಬಳಿ ನಿಂತು ಹಲ್ಲೆ ಮಾಡುವ ರೀತಿಯಲ್ಲಿ ಬಂದು ಜೋರಾಗಿ ಮಾತನಾಡಿದರು. ಇದೆಲ್ಲಾಅಗತ್ಯವಿರಲಿಲ್ಲ, ಅವರ ಜೊತೆಗೆ ಯಾವುದೇ ವೈಷಮ್ಯವಿರಲಿಲ್ಲ, ಆದರೂ ಅವರು ನನ್ನೊಂದಿಗೆ ಆ ರೀತಿ ನಡೆದುಕೊಂಡ ರೀತಿ ತಪ್ಪು, ನಾನೊಬ್ಬ ವೈದ್ಯನಾಗಿ ಇದನ್ನು ಖಂಡಿಸುತ್ತೇನೆ ಎಂದು ಜ್ಞಾನೇಶ್ ತಿಳಿಸಿದ್ದಾರೆ.
'ರಾಜ್ಯದಲ್ಲಿ ನೆಲೆಯೇ ಇಲ್ಲದ ಬಿಜೆಪಿಯನ್ನು ಬೆಳೆಸಿದ್ದು ಎಸ್.ಬಂಗಾರಪ್ಪ'
ಕೇವಲ ಪಾರ್ಕಿಂಗ್ ವಿಚಾರಕ್ಕೆ ಶಾಸಕ ಸ್ಥಾನದಲ್ಲಿರುವ ಕುಮಾರ್ ಬಂಗಾರಪ್ಪ ಹಲ್ಲೆ ಮಾಡುವ ಮಟ್ಟಕ್ಕೆ ಮುಂದಾಗಿದ್ದಾರೆ. ಆದರೆ ಇದು ಯಾವುದೇ ವೈಷಮ್ಯದ ಮೇಲೆ ನಡೆದಿಲ್ಲ ಎಂದಿರುವ ವೈದ್ಯ ಡಾ. ಎಚ್. ಇ. ಜ್ಞಾನೇಶ್, ತಾವೂ ರೋಟರಿ ಸಂಸ್ಥೆಯ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದೇನೆ. ನನ್ನ ಈ ಬೆಳವಣಿಗೆ ಸಹಿಸದೇ ಅವರು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಯೇ? ಎಂಬ ಅನುಮಾನ ಕಾಡುತ್ತಿದೆ. ನನಗೂ ಅವರು ಏಕೆ ಆ ರೀತಿ ನಡೆದುಕೊಂಡರು ಎನ್ನುವುದನ್ನು ತಿಳಿದುಕೊಳ್ಳಬೇಕು. ಇಲ್ಲಿನ ಜನರೂ ಕೂಡ ಅದನ್ನೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದ್ದಾರೆ.