ಯತ್ನಾಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆಯನೂರು ಮಂಜುನಾಥ್
ಬೆಂಗಳೂರು, ಮಾರ್ಚ್ 2: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಕುರಿತು ಪರ ಮತ್ತು ವಿರೋಧದ ವಾದಗಳಿಂದ ಪ್ರಯೋಜನವಿಲ್ಲ. ಹೀಗೆ ಮಾಡುವುದರಿಂದ ಹಿರಿಯರಿಗೆ ಬೇಸರವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ; ಸಾಮೂಹಿಕ ವಿವಾಹದಲ್ಲಿ ನಡೆದ ಆಯನೂರು ಮಂಜುನಾಥ ಪುತ್ರಿ ಮದುವೆ
ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬುದು ನಿಜ. ಅವರ ಕುರಿತು ಶಾಸಕ ಯತ್ನಾಳ್ ಬಳಸಿದ ಪದಗಳು ಸರಿಯಲ್ಲ. ಅವರಿಗೆ ನಾವೆಲ್ಲರೂ ಗೌರವ ಕೊಡಬೇಕು. ಆದರೆ, ಈ ವಿಷಯವನ್ನಿಟ್ಟುಕೊಂಡು ದೊರೆಸ್ವಾಮಿ ಅವರನ್ನು ಎಲ್ಲರೂ ಅವಮಾನಿಸುತ್ತಿರುವುದು ಸರಿಯಲ್ಲ. ಇದು ಇಲ್ಲಿಗೆ ನಿಲ್ಲಬೇಕು ಎಂದು ಹೇಳಿದರು.
ಆದರೆ, ಹಲವು ಬಿಜೆಪಿ ಮುಖಂಡರು ಯತ್ನಾಳ ಸರ್ಮಥನೆಯ ಹೇಳಿಕೆ ನೀಡಿದ್ದರು. ಶುಕ್ರವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೂಡ ಯತ್ನಾಳ ಸಮರ್ಥಿಸಿದ್ದರು. ಕೊಡಗಿನಲ್ಲಿ ಶನಿವಾರ ಮಾತನಾಡಿರುವ ಸಚಿವ ಸುರೇಶ್ ಕುಮಾರ್ ಅವರು, ಯತ್ನಾಳ ಹೇಳಿಕೆ ಸರಿ ತಪ್ಪು ಎಂದು ನಾನು ಹೇಳುವುದಿಲ್ಲ. ಆದರೆ ದೊರೆಸ್ವಾಮಿ ಅವರು ಮೋದಿ ಬಗ್ಗೆ ಯಾವ ರೀತಿ ಮಾತನಾಡಿದ್ದರು ಎಂಬುದನ್ನು ನೀವೇ ನೋಡಿ ಎಂದು ಹೇಳಿದ್ದಾರೆ.