ದೇಶದಲ್ಲಿ ಚುನಾವಣೆಯನ್ನು ನಿಷೇಧಗೊಳಿಸಲಿ, ಬಿಜೆಪಿ ವಿರುದ್ಧ ಎಚ್ಡಿಕೆ ಆಕ್ರೋಶ
ಶಿವಮೊಗ್ಗ, ಜೂನ್ 26: "ದೇಶದಲ್ಲಿ ಇನ್ನು ಮುಂದೆ ಚುನಾವಣೆ ನಡೆಸುವುದೆ ಬೇಡ. ಈ ಕುರಿತು ಲೋಕಸಭೆಯಲ್ಲಿ ಬಿಲ್ ಪಾಸ್ ಮಾಡಿಬಿಡಿ. ಬೇರೆಯವರು ನೆಮ್ಮದಿಯಿಂದ ಬದುಕಬಹುದು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಿಜಿಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಶಿವಮೊಗ್ಗ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, "ಸ್ಪಷ್ಟ ಬಹುಮತ ಇದ್ದರೂ ಸರ್ಕಾರ ಉಳಿಯುತ್ತದೆಯೋ?, ಇಲ್ಲವೋ? ಎನ್ನುವ ಅನುಮಾನ ಪ್ರಾರಂಭವಾಗಿದೆ. ಇದರ ಬದಲು ನೀವು ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ತಿಳಿಸಿದರೆ, ಹಣ, ಆರೋಗ್ಯ ಹಾಳು ಮಾಡಿಕೊಳ್ಳುವುದಾದರೂ ತಪ್ಪಲಿದೆ" ಎಂದರು.
'ಮಹಾ' ಡ್ರಾಮಾದ ಅಖಾಡಕ್ಕೆ ಇಳಿದ ಉದ್ಧವ್ ಠಾಕ್ರೆ ಪತ್ನಿ; ಯಾರು ಈ ರಷ್ಮಿ?
"ಬೇರೇ ರಾಜಕೀಯ ಪಕ್ಷಗಳು ಬೀದಿ ಪಾಲಾಗುವುದು ತಪ್ಪುತ್ತದೆ. ಬಿಜೆಪಿಯಲ್ಲಿದ್ದರೆ ಮಾತ್ರ ಉಳಿಗಾಲ. ಇನ್ನುಳಿದವರಿಗೆ ಉಳಿಗಾಲ ಇಲ್ಲ. ಹಾಗಾಗಿ ಚುನಾವಣೆಯನ್ನ ನಿಷೇಧ ಮಾಡುವ ಬಿಲ್ ಪಾಸ್ ಮಾಡಿಸಿ" ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಮಹಾರಾಷ್ಟ್ರ ಬಂಡಾಯ ಶಾಸಕರಿಗೆ ವೈ+ ಭದ್ರತೆ ನೀಡಿದ ಕೇಂದ್ರ
ಮುಂಬೈನಲ್ಲಿ ಅಪರೇಷನ್ ಕಮಲ
"ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ನಡೆಯುತ್ತಿರುವ ಕುರಿತು ಯಾವುದೇ ಸಂಶಯವಿಲ್ಲ. ರಾಜ್ಯದಲ್ಲಿಯು ಆವತ್ತಿನ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು, ಕೆಲ ಕಾಂಗ್ರೆಸ್ ನಾಯಕರ ಸಹಕಾರದೊಂದಿಗೆ ರಾಜ್ಯದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಪ್ರಹಸನ ಮಾಡಿದ್ದರು. ಆವತ್ತು ಕರ್ನಾಟಕ ಟು ಮುಂಬೈ. ಇವತ್ತು ಮುಂಬೈ ಟು ಸೂರತ್, ಸೂರತ್ ಟು ಗುವಾಹಟಿ" ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾದೇಶಿಕ ಪಕ್ಷ ಮುಕ್ತ ಮಾಡುವ ಯತ್ನ
"ಕರ್ನಟಕದ ಪರಿಸ್ಥಿತಿ ಬೇರೆ, ಮುಂಬೈನ ಸ್ಥಿತಿ ಬೇರೆ ಇದೆ. ಬಂಡಾಯ ಸಾರಿರುವ ಶಿವಸೇನೆ ಶಾಸಕರ ಕಚೇರಿ ಧ್ವಂಸ ಮಾಡಿ, ಗಲಭೆ ಮಾಡಲಾಗುತ್ತಿದೆ. ದೇಶದಲ್ಲಿ ಬಿಜೆಪಿ ಮುಖಂಡರು ಉಪದೇಶ ಮಾಡುತ್ತಾರೆ. ಆದರೆ ವಿರೋಧ ಪಕ್ಷಗಳನ್ನು ದಮನ ಮಾಡಲು ಹೊರಟಿದ್ದಾರೆ. 2008ರಲ್ಲಿ ರಾಜ್ಯದಲ್ಲಿ ಪ್ರಾರಂಭವಾದ ಆಪರೇಷನ್ 2014ರ ನಂತರ ದೇಶಾದ್ಯಂತ ವಿಸ್ತರಿಸಿದ್ದಾರೆ. ಗೋವಾದಲ್ಲಿ ಹೈಜಾಕ್ ಮಾಡಿ ಸರ್ಕಾರ ರಚಿಸಿದರು. ರಾಜಸ್ಥಾನದಲ್ಲಿ ಪ್ರಯತ್ನ ಮಾಡಿದರು. ಆದರೆ ಅಲ್ಲಿ ಯಶ ಕಾಣಲಿಲ್ಲ. ಮುಂದೆ ರಾಜಸ್ಥಾನ ಅಥವಾ ಜಾರ್ಖಂಡ್ ರಾಜ್ಯಗಳಲ್ಲಿ ಆಪರೇಷನ್ ಆಗಬುಹುದು" ಎಂದು ಭವಿಷ್ಯ ನುಡಿದರು.
"ದೇಶದಲ್ಲಿ ಬಿಜೆಪಿಯೇತರ ಸರ್ಕಾರ ಇರಬಾರದು ಎಂದು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಮುಕ್ತ ಆಗಿದೆ. ಈಗ ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಪ್ರಯತ್ನ ನಡೆಯಿತು. ಆದರೆ ಮಮತಾ ಬ್ಯಾನರ್ಜಿ ಅವರು ಸರ್ಕಾರ ಉಳಿಸಿಕೊಂಡರು. ಬೇರೆ ರಾಜ್ಯದಲ್ಲಿ ಇಡಿ ಸೇರಿದಂತೆ ಬೇರೆ ಬೇರೆ ಸಂಸ್ಥೆ ಬಳಸಿಕೊಂಡು ಆತಂಕ ಸೃಷ್ಟಿ ಮಾಡುತ್ತಿದ್ದಾರೆ" ಎಂದು ಕುಮಾರಸ್ವಾಮಿ ಆರೋಪಿಸಿದರು.
ಪ್ರತಿಕ್ಷೇತ್ರಕ್ಕೆ 20ರಿಂದ 30 ಕೋಟಿ ಖರ್ಚು
"ಸಚಿವರು, ಶಾಸಕರು ಆರ್ಎಸ್ಎಸ್ ಪ್ರಮುಖರಿಗೆ ಕಮೀಷನ್ ಹಣ ಕೊಡಬೇಕು. ಎರಡ್ಮೂರು ಪ್ರಮುಖರಿಗೆ ಕಮೀಷನ್ ಕೊಡಲೇಬೇಕು. ಆರ್ಎಸ್ಎಸ್ನಿಂದ ಮುಂಬರುವ ಚುನಾವಣೆಗೆ ಹಣ ಸಂಗ್ರಹ ಆರಂಭವಾಗಿದೆ. ಪ್ರತಿ ಕ್ಷೇತ್ರದಲ್ಲಿ 20 ರಿಂದ 30 ಕೋಟಿ ರೂ. ಖರ್ಚು ಮಾಡಲು ಹಣ ಸಂಗ್ರಹ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ 100 ರಿಂದ 120 ಕೋಟಿ ರೂ.ಗಳ ಕಾಮಗಾರಿಗಳು ನಡೆಯುತ್ತಿವೆ. ಇಲ್ಲಿನ ಸಚಿವರು, ಶಾಸಕರು ಎಷ್ಟು ಮೊತ್ತದ ಕಮೀಷನ್ ಕೊಟ್ಟಿದ್ದಾರೆ? ಎಂದು ಬಹಿರಂಗಪಡಿಸಲಿ" ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಸ್ವತಂತ್ರ ಸರಕಾರದ ಗುರಿ
"ಮತ್ತೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗುವ ಆಸೆ ಇಲ್ಲ. ಈ ಭಾರೀ ಮಿಷನ್ 123 ಗುರಿಯೊಂದಿಗೆ ಸ್ವತಂತ್ರ ಸರ್ಕಾರ ಕೊಡುವಂತೆ ಜನರಿಗೆ ಮನವಿ ಮಾಡಿದ್ದೇನೆ. ಆಗಸ್ಟ್ ತಿಂಗಳಿಂದ ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇವೆ. ಇನ್ನೂ ಎಳೆಂಟು ತಿಂಗಳು ಸಮಯವಿದೆ. ಜನರ ಪರಿವರ್ತನೆ ಮಾಡುತ್ತೇನೆ" ಎಂದು ಕುಮಾರಸ್ವಾಮಿ ತಿಳಿಸಿದರು.