ಇದು ಗ್ರಾಮ ವಾಸ್ತವ್ಯ ಮಾಡುವ ಸಮಯವಲ್ಲ: ಯಡಿಯೂರಪ್ಪ
ಶಿವಮೊಗ್ಗ, ಜೂನ್ 27: ತಮ್ಮ ಗ್ರಾಮ ವಾಸ್ತವ್ಯಕ್ಕೆ ಬಿಜೆಪಿಯವರು ಅಡ್ಡಿಪಡಿಸುತ್ತಿದ್ದಾರೆ. ಬುಧವಾರ ಬಸ್ ಅಡ್ಡಗಟ್ಟಿ ನಡೆದ ಪ್ರತಿಭಟನೆ ಬಿಜೆಪಿ ಪ್ರಾಯೋಜಿತ ಎಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ನಿನ್ನೆ ಕುಮಾರಸ್ವಾಮಿ ಅವರು ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಹತಾಶೆಯಿಂದ ಈ ರೀತಿ ವರ್ತಿಸುತ್ತಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಆಗಲೇ ರಾಜೀನಾಮೆ ಕೊಡಬೇಕಿತ್ತು ಎಂದು ಯಡಿಯೂರಪ್ಪ ಹರಿಹಾಯ್ದರು.
ರಾಯಚೂರಿನ ಮಾನ್ವಿ ತಾಲ್ಲೂಕಿನ ಕರೆಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ಯವ್ಯಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದ್ದ ಬಸ್ಅನ್ನು ಗುಂಪೊಂದು ಅಡ್ಡಗಟ್ಟಿ ಪ್ರತಿಭಟನೆ ನಡೆಸಿತ್ತು. ಈ ಸಂದರ್ಭದಲ್ಲಿ ಕೆಲವರು ಮೋದಿ ಹೆಸರನ್ನು ಕೂಗಿದ್ದರು. ಆಗ ಕೆರಳಿದ್ದ ಕುಮಾರಸ್ವಾಮಿ ಮೋದಿಗೆ ಮತ ಹಾಕಿ ನನಗೆ ಸಮಸ್ಯೆ ಪರಿಹಾರ ಮಾಡುವಂತೆ ಕೇಳುತ್ತೀರಾ ಎಂದು ಕಿಡಿಕಾರಿದ್ದರು.
ಬಿಜೆಪಿ ಪ್ರಾಯೋಜಿತ ಗುಂಪಿನಿಂದ ಗ್ರಾಮ ವಾಸ್ತವ್ಯಕ್ಕೆ ಅಡ್ಡಿ: ಎಚ್ಡಿಕೆ
ಅಲ್ಲದೆ, ಇದು ಬಿಜೆಪಿ ಪ್ರಾಯೋಜಿತ ಪ್ರತಿಭಟನೆ. ಬಿಜೆಪಿ ಪರ ಗುಂಪುಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿವೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.
ರಾಜ್ಯದಾದ್ಯಂತ ಪ್ರವಾಸ ಮಾಡಲಿ
ಇದು ಗ್ರಾಮ ವಾಸ್ತವ್ಯ ಮಾಡುವ ಸಮಯವಲ್ಲ. ರಾಜ್ಯದ ಎಲ್ಲೆಡೆ ಬರಗಾಲ ಆವರಿಸಿದೆ. ನೀರಿನ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಜಾನುವಾರುಗಳಿಗೆ ಮೇವಿಲ್ಲ. ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಇಂತಹ ದಾರುಣ ಪರಿಸ್ಥಿತಿಯನ್ನು 40 ವರ್ಷಗಳಲ್ಲಿ ನಾವು ಕಂಡಿಲ್ಲ. ಮೊದಲು ರಾಜ್ಯದಾದ್ಯಂತ ಪ್ರವಾಸ ಮಾಡಿ ಅವರ ಸಮಸ್ಯೆಗಳನ್ನು ಕೇಳಲಿ. ಅದನ್ನು ಅರ್ಥ ಮಾಡಿಕೊಂಡು ಬಳಿಕ ಗ್ರಾಮ ವಾಸ್ತವ್ಯ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.
ಅಡ್ಡಿ ಪಡಿಸಿರುವುದು ನಾವಲ್ಲ
ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯಕ್ಕೆ ಅಡ್ಡಿ ಪಡಿಸುತ್ತಿರುವವರು ನಾವಲ್ಲ. ಅವರು ಸಾಲಮನ್ನಾದ ಭರವಸೆ, ಬರಗಾಲದ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಿಲ್ಲ. ಭರವಸೆಗಳನ್ನು ಈಡೇರಿಸದೆ ಇರುವುದಕ್ಕೆ ರೈತರು, ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿ
ಸರ್ವಾಧಿಕಾರಿ ವರ್ತನೆ
ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿ ಎಂಬುದನ್ನು ಮರೆತು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ತಮ್ಮ ವರ್ತನೆ ಮತ್ತು ಹೇಳಿಕೆಗಳ ಕುರಿತು ಅಪ್ಪ ಮಕ್ಕಳು ತಮಗೆ ತಾವೇ ಪ್ರಶ್ನೆ ಹಾಕಿಕೊಳ್ಳಬೇಕು. ಇದರಿಂದ ಜನರನ್ನು ಕೆರಳಿಸಿದಂತೆ ಆಗುತ್ತದೆ. ರಾಜ್ಯದ ಅಭಿವೃದ್ಧಿಗೆ ಧಕ್ಕೆ ಆಗುತ್ತದೆ ಎಂದು ಹೇಳಿದರು.
ಕೆರೆ, ಕಾಲುವೆ ಒತ್ತುವರಿ ತೆರವುಗೊಳಿಸಿ
ರಾಜ್ಯದಲ್ಲಿ ಮೋಡ ಬಿತ್ತನೆಗೆ ಹಣ ಇರಿಸಿರುವುದಾಗಿ ಸರ್ಕಾರ ಹೇಳುತ್ತದೆ. ಮಳೆ ಇಲ್ಲದ ಈ ಪರಿಸ್ಥಿತಿಯಲ್ಲಿ ಈಗಲಾದರೂ ಮೋಡ ಬಿತ್ತನೆ ಮಾಡಲಿ. ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆಗೆ ನನ್ನ ವಿರೋಧವಿದೆ. ಇದೊಂದು ಅವೈಜ್ಞಾನಿಕ ಯೋಜನೆ. ಈ ರೀತಿಯ ಯೋಜನೆ ನನ್ನ ಅಧಿಕಾರಾವಧಿಯಲ್ಲಿ ನಡೆದಿಲ್ಲ. ಮೊದಲು ಶಾಸಕ ಎಟಿ ರಾಮಸ್ವಾಮಿ ವರದಿಯನ್ನು ಜಾರಿಗೆ ತನ್ನಿ. ಬೆಂಗಳೂರಿನ ನೀರಿನ ಮೂಲಗಳನ್ನು ಬಳಸಿಕೊಳ್ಳಿ. ಭೂಮಿ, ಕೆರೆ, ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿ ಎಂದು ಆಗ್ರಹಿಸಿದರು.