ಶಿವಮೊಗ್ಗದಲ್ಲಿ ಈ ಮರದ ಕೆಳಗೆ ಹೋಗುವ ಬೈಕ್ ಗಳೆಲ್ಲ ಜಾರಿ ಬೀಳ್ತಿವೆ
ಶಿವಮೊಗ್ಗ, ಫೆಬ್ರವರಿ 19: ಶಿವಮೊಗ್ಗದಲ್ಲಿ ಮರವೊಂದರಿಂದ ರಸ್ತೆ ಮೇಲೆ ಬಿದ್ದ ದ್ರವದಿಂದಾಗಿ ದ್ವಿಚಕ್ರ ವಾಹನ ಸವಾರರು ಜಾರಿ ಬೀಳುತ್ತಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ಹಲವರು ಈ ರಸ್ತೆಯಲ್ಲಿ ಜಾರಿಬಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದು, ವಾಹನಗಳಿಗೂ ಹಾನಿ ಉಂಟಾಗಿದೆ.
ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ನಂಜಪ್ಪ ಆಸ್ಪತ್ರೆ ಮುಂಭಾಗದಲ್ಲಿ ಇರುವ ಬೃಹತ್ ಮರದಿಂದ ಜೆಲ್ ರೂಪದ ದ್ರವ ರಸ್ತೆ ಮೇಲೆ ಬಿದ್ದಿದೆ. ಇದು ರಸ್ತೆಯಲ್ಲಿ ಜಾರುವಂತೆ ಮಾಡುತ್ತಿದೆ. ಕುವೆಂಪು ರಸ್ತೆ, ದುರ್ಗಿಗುಡಿ, ಅಚ್ಚುತರಾವ್ ಲೇಔಟ್ ಕಡೆಯಿಂದ ಬರುವ ವಾಹನಗಳು ಸೇರುವ ಜಾಗದಲ್ಲಿ ಈ ಮರ ಇದೆ.
ರಾತ್ರಿ ಬಿದ್ದ ಮಳೆಯೇ ಕಾರಣ
ಶಿವಮೊಗ್ಗದಲ್ಲಿ ರಾತ್ರಿ ಮಳೆಯಾಗಿದ್ದು, ಮಳೆಯಿಂದಾಗಿ ಮರದಿಂದ ಸೋರಿಕೆಯಾದ ಜೆಲ್ ರೂಪದ ದ್ರವ ರಸ್ತೆ ಮೇಲೆ ಬಿದ್ದಿದೆ. ಬೆಳಗ್ಗೆ ನೆಹರೂ ಸ್ಟೇಡಿಯಂ ಕೊಡೆಗೆ ಹೊರಟವರು, ಕೆಲಸ ನಿಮಿತ್ತ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರರು ಅಲ್ಲಿ ಜಾರಿ ಬಿದ್ದಿದ್ದಾರೆ.
ಶಿವಮೊಗ್ಗದ ಮೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಚಾಲನೆ
ಆಯಿಲ್ ಸೋರಿಕೆ ಅಂದುಕೊಂಡರು
ಆರಂಭದಲ್ಲಿ ಯಾವುದೋ ವಾಹನದಿಂದ ಆಯಿಲ್ ಸೋರಿಕೆ ಎಂದು ಭಾವಿಸಲಾಗಿತ್ತು. ಆದ್ದರಿಂದ ಸ್ಥಳೀಯರೇ ದ್ವಿಚಕ್ರ ವಾಹನ ಸವಾರರು ಬರುತ್ತಿದ್ದಂತೆ ತಡೆದು, ನಿಧಾನಕ್ಕೆ ಚಲಿಸುವಂತೆ ಸೂಚಿಸುತ್ತಿದ್ದರು. ಸಮೀಪದಲ್ಲಿದ್ದ ಬ್ಯಾರಿಕೇಡ್ ಗಳನ್ನು ಎಳೆದು ತಂದು ನಡು ರಸ್ತೆಯಲ್ಲಿ ಇರಿಸಿ ಎಚ್ಚರಿಸುತ್ತಿದ್ದರು.
ದೌಡಾಯಿಸಿದ ಪಾಲಿಕೆ ಸಿಬ್ಬಂದಿಗಳು
ವಿಚಾರ ತಿಳಿಯುತ್ತಿದ್ದಂತೆ ಮಹಾನಗರ ಪಾಲಿಕೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದರು. ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಇದರಿಂದ ದ್ವಿಚಕ್ರ ವಾಹನ ಸವಾರರ ಆತಂಕ ನಿವಾರಣೆಯಾದಂತೆ ಆಗಿದೆ. ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಕುವೆಂಪು ರಸ್ತೆಯಲ್ಲಿ ಬೆಳಗ್ಗೆಯಿಂದ ನಿರಂತರ ವಾಹನ ದಟ್ಟಣೆ ಇರುತ್ತದೆ.
ಪ್ರತಿ ದಿನ ಹನಿ ಬೀಳುತ್ತಿತ್ತು
ಈ ಮರದಿಂದ ರಸ್ತೆ ಮೇಲೆ ನಿರಂತರ ಹನಿ ಬೀಳುತ್ತಿತ್ತು. ಹತ್ತಾರು ವರ್ಷದಿಂದ ಈ ರೀತಿ ಹನಿ ಬೀಳುತ್ತಿದೆ. ವಾಹನ ಸವಾರರಿಗೆ ಮಳೆ ಶುರುವಾಯ್ತೋ, ಯಾರಾದರೂ ಉಗುಳಿದರೋ ಅನ್ನುವ ಸಂಶಯ ಮೂಡಿಸುತ್ತಿತ್ತು. ಈಗ ಅದಕ್ಕೆ ಕಾರಣ ತಿಳಿದುಬಂದಿದೆ.