ಹಳ್ಳಿ ದೇವಾಲಯಗಳಿಗೂ ಬೀಗ: ಮನೆಯಲ್ಲೇ ಯುಗಾದಿ ಹಬ್ಬ
ಶಿವಮೊಗ್ಗ, ಮಾರ್ಚ್ 25: ಕೊರೊನಾ ಭೀತಿಯಿಂದ ಹಳ್ಳಿಯ ದೇವಸ್ಥಾನಗಳು ಸಹ ಬಂದ್ ಆಗಿದೆ. ಈ ಬಾರಿಯ ಯುಗಾದಿಯನ್ನು ಜನ ಮನೆಯಲ್ಲಿಯೇ ಆಚರಿಸಬೇಕು ಎಂದು ಗ್ರಾಮ ಪಂಚಾಯತಿ ವತಿಯಿಂದ ಆದೇಶ ನೀಡಿದ್ದಾರೆ.
ಕೊರೊನಾ ಹರಡುವಿಕೆ ಹಿಂದೆಯೇ ಶುರು ಆಗಿದ್ದರೂ, ಅದು ಹಳ್ಳಿಗಳಿಗೆ ತಟ್ಟಿರಲಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಪಾಸಿಟಿವ್ ಪ್ರಕರಣಗಳು ದಾಖಲಾಗಿರದ ಕಾರಣವೋ ಏನೋ ಈ ಭಾಗದ ಹಳ್ಳಿಯ ಜನರಿಗೆ ಕೊರೊನಾ ಭೀತಿ ಇರಲಿಲ್ಲ. ಆದರೆ, ಈಗ ಹಳ್ಳಿಯ ಜನರಿಗೂ ಕೊರೊನಾ ಭಯ ಶುರುವಾಗಿದೆ.
11 ವರ್ಷಗಳ ನಂತರ ಬಂದ್ ಆದ ಮಂತ್ರಾಲಯ: ರಾಯರ ದರ್ಶನ ಇಲ್ಲ
ಭದ್ರಾವತಿ ತಾಲೂಕಿನ ಹಳ್ಳಿಗಳಾದ ಮಂಗೋಟೆ, ಅರಸಿನಘಟ್ಟ, ನಿಂಬೆಗುಂದಿ, ಆನವೇರಿ, ಇಟ್ಟಿಗೆಹಳ್ಳಿ, ಮಲ್ಲಾಪುರ ಗ್ರಾಮಗಳ ದೇವಸ್ಥಾನಗಳಿಗೆ ಬೀಗ ಹಾಕಲಾಗಿದೆ. ದೇವಸ್ಥಾನಗಳಿಲ್ಲದೆ ಹಳ್ಳಿಯ ಹಬ್ಬದ ಆಚರಣೆಯನ್ನು ಉಹಿಸಿಕೊಳ್ಳುವುದಕ್ಕೂ ಸಾಧ್ಯ ಇಲ್ಲ. ಆದರೆ, ಈ ಬಾರಿ ದೇವಸ್ಥಾನಗಳ ಪ್ರವೇಶಕ್ಕೆ ನಿರ್ಬಂಧ ಏರಲಾಗಿದೆ.
ಚಂದ್ರನನ್ನು ನೋಡಿದ ನಂತರ ಊರಿನ ಎಲ್ಲರೂ ದೇವರ ದರ್ಶನವನ್ನು ಮಾಡುತ್ತಾರೆ. ಆದರೆ, ಯಾರೂ ಸಹ ದೇವಸ್ಥಾನಕ್ಕೆ ಬಾರದೆ ಇರುವಂತೆ ತಿಳಿಸಲಾಗಿದೆ. ಅಕ್ಕ ಪಕ್ಕದ ಮನೆಗೆ ಹೋಗದೆ, ಯಾರ ಕಾಲಿಗೆ ನಮಸ್ಕಾರ ಮಾಡದೆ ನಿಮ್ಮ ಮನೆಯಲ್ಲಿಯೇ ನೀವು ಹಬ್ಬ ಆಚರಣೆ ಮಾಡಿಬೇಕು ಎಂದು ಗ್ರಾಮ ಪಂಚಾಯತಿ ತಿಳಿಸಿದೆ.
ಹಬ್ಬ ಅಂದ್ರೆ, ಹಳ್ಳಿಯಲ್ಲಿ ಜೋರು ಸಂಭ್ರಮ. ಆದರೆ, ಈ ಬಾರಿ ಹಳ್ಳಿಯ ಜನರು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕಿದೆ. ಇದು ಅವರಿಗೆ ಕಷ್ಟವಾಗಿದ್ದರೂ ಕೊರೊನಾ ತಡೆಗೆ ಇದು ಅನಿವಾರ್ಯ.