ಶಿವಮೊಗ್ಗ: ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆ ಭದ್ರಾವತಿ ತಹಶೀಲ್ದಾರ ಅಮಾನತ್ತು
ಶಿವಮೊಗ್ಗ, ಸೆಪ್ಟೆಂಬರ್ 15: ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಯ ಗ್ರಾಮ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯ ಜೊತೆ ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಭದ್ರಾವತಿ ತಹಶೀಲ್ದಾರರನ್ನು ಅಮಾನತ್ತು ಮಾಡಲಾಗಿದೆ.
ಮಹಿಳೆಯ ಜೊತೆ ಅನುಚಿತ ವರ್ತನೆ ಬಗ್ಗೆ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಷಯ ತಿಳಿದ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ರವರು ತಕ್ಷಣವೇ ಭದ್ರಾವತಿ ತಹಶೀಲ್ದಾರ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಭದ್ರಾವತಿ ತಹಶೀಲ್ದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಶಿವಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ತಹಶೀಲ್ದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆಯ ಕುಟುಂಬದವರು ಆಗ್ರಹಿಸಿದ್ದರು. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಅಮಾನತ್ತು ಮಾಡಿದ್ದಾರೆ.
ಮಹಿಳೆಗೆ ವೇತನ ಮಾಡಿ ಕೊಟ್ಟಿಲ್ಲ ಎಂದು ಕೇಳಲು ಹೋದ ಗ್ರಾಮ ಸಹಾಯಕಿಗೆ, ಕ್ವಾಟ್ರಸ್ ಗೆ ನೀನು ಒಬ್ಬಳೇ ಬರಬೇಕು, ಬಂದು ನನಗೆ ಸಂತೋಷ ಪಡಿಸಿದರೆ ಕೆಲಸ ಮಾಡಿ ಕೊಡುವುದಾಗಿ ತಹಶೀಲ್ದಾರ ಹೇಳಿದ್ದರು. ಇದರಿಂದ ನನಗೆ ಮಾನಸಿಕವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.