ಭದ್ರಾವತಿ : ಮಾರಿ ಜಾತ್ರೆಗೆ ಬಿಟ್ಟಿದ್ದ ಕೋಣಗಳು ಪೊಲೀಸರ ವಶಕ್ಕೆ!
ಶಿವಮೊಗ್ಗ, ಜನವರಿ 02 : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಕೋಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾರಿ ಹಬ್ಬಕ್ಕೆ ಕೋಣ ಬಲಿಕೊಡುವುದನ್ನು ತಡೆಯಲು ವಶಕ್ಕೆ ಪಡೆಯಲಾಗಿದೆ.
ಭದ್ರಾವತಿ ತಾಲೂಕಿನ ಕೋಮಾರನಹಳ್ಳಿಯಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಮಾರಿ ಹಬ್ಬವಿದೆ. ಹಬ್ಬಕ್ಕಾಗಿ ಎರಡು ಕೋಣಗಳನ್ನು ಬಿಡಲಾಗಿತ್ತು. ಇಂದು ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿರಸಿ ಮಾರಿಕಾಂಬಾ ಜಾತ್ರೆಗೆ ಮುಹೂರ್ತ ನಿಗದಿ
ಕೋಣಗಳನ್ನು ಬಲಿಕೊಡಲಾಗುತ್ತದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಅವುಗಳನ್ನು ವಶಕ್ಕೆ ಪಡೆದರು. ಆದರೆ, ಗ್ರಾಮಸ್ಥರು ಕೋಣಗಳ ಪೂಜೆಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಪೊಲೀಸರು ಮತ್ತು ಗ್ರಾಮಸ್ಥರ ನಡುವಿನ ವಾಗ್ವಾದದಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್ ಭೇಟಿ ನೀಡಿದ್ದಾರೆ.
ಹೈಕೋರ್ಟ್ ಆದೇಶ : ಜಾತ್ರೆ, ಮಾರಿಹಬ್ಬದಂತಹ ಸಮಯದಲ್ಲಿ ಪ್ರಾಣಿಗಳನ್ನು ಸಾರ್ವಜನಿಕವಾಗಿ ಬಲಿಕೊಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಆದ್ದರಿಂದ, ಮಾರಿಹಬ್ಬದಲ್ಲಿ ಎಲ್ಲಿಯೂ ಕೋಣಗಳನ್ನು ಬಲಿಕೊಡುವಂತಿಲ್ಲ.
ದಾವಣಗೆರೆಯಲ್ಲಿ ನಡೆಯುವ ದುಗ್ಗಮ್ಮ ಜಾತ್ರೆ ಕೋಣಗಳ ಬಲಿ ವಿಚಾರಕ್ಕೆ ಹೆಚ್ಚು ಸುದ್ದಿ ಮಾಡುತ್ತದೆ. ನಿಷೇಧವಿದ್ದರೂ ಜಾತ್ರೆಯ ದಿನದಂದು ಪೊಲೀಸರ ಕಣ್ಣು ತಪ್ಪಿಸಿ ಕೋಣ ಕಡಿಯಲಾಗುತ್ತದೆ.