ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿ ಮಲ್ಲಿಕಾ ಘಂಟಿ ವಿರುದ್ಧ ವಾರೆಂಟ್
ಭದ್ರಾವತಿ, ಅಕ್ಟೋಬರ್ 09 : ತಮ್ಮ ಹತ್ಯೆಗೆ ಕುವೆಂಪು ವಿವಿ ಸಿಬ್ಬಂದಿ ಸಂಚು ರೂಪಿಸಿದ್ದಾರೆಂದು ದೂರು ನೀಡಿ ವಿಚಾರಣೆಗೆ ಗೈರುಹಾಜರಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಮಲ್ಲಿಕಾ ಘಂಟಿ ವಿರುದ್ಧ ಭದ್ರಾವತಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದೆ.
ಮಲ್ಲಿಕಾ ಘಂಟಿ ವಿರುದ್ಧ 36 ಕೋಟಿ ಅವ್ಯವಹಾರದ ಆರೋಪ
ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದಾಗ ಕೆಲವು ಸಿಬ್ಬಂದಿ ತಮ್ಮ ಕೊಲೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿ ಮಲ್ಲಿಕಾ ಘಂಟಿ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ಪ್ರಕರಣದ ವಿಚಾರಣೆಗೆ ಡಾ. ಮಲ್ಲಿಕಾ ಘಂಟಿ ಗೈರಾಗಿದ್ದರಿಂದ ಕೋರ್ಟ್ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.
ಇದರ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಇದೇ ಪ್ರಕರಣದ ಆರೋಪಿಯಾಗಿದ್ದ ಅಂದಿನ ಪರೀಕ್ಷಾಂಗ ಕುಲಸಚಿವ ಪ್ರೊ. ಬೋಜಾ ನಾಯ್ಕ ಅವರ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ, ಉಳಿದ ಮೂವರ ವಿರುದ್ಧ ವಿಚಾರಣೆ ಇನ್ನು ನಡೆಯುತ್ತಿದೆ.
ಮಲ್ಲಿಕಾ ಘಂಟಿ ಹತ್ಯೆಗೆ ಸಂಚು ರೂಪಿಸಿದ್ದ ಕುವೆಂಪು ವಿವಿ ಸಿಬ್ಬಂದಿ
ಮಲ್ಲಿಕಾ ಘಂಟಿ ಅವರು, ಇತ್ತೀಚೆಗೆ ಸಮಾರಂಭವೊಂದರಲ್ಲಿ ಭಾಷಣ ಮಾಡುವಾಗ ''ಸರ್ಕಾರದಲ್ಲಿ ಸೂಟ್ ಕೇಸ್ ನೀಡದೆ ಯಾವ ಕೆಲಸವೂ ನಡೆಯುವುದಿಲ್ಲ. ಎಲ್ಲಿ ಎಲ್ಲವೂ ಹಣದ ಮೇಲೆಯೇ ನಿಂತಿರುತ್ತೆ'' ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.
ಘಂಟಿ ಹೇಳಿಕೆಗೆ ಸರಕಾರದ ಕಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯೂ ಘಂಟಿ ಹೇಳಿಕೆಗೆ ಅಸಮಧಾನ ವ್ಯಕ್ತಪಿಡಿಸಿ ಹೇಳಿಕೆ ನಿಜವಾಗಿದ್ದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಬಳಿಕ ಮಲ್ಲಿಕಾ ಘಂಟಿ ತಾವು ಹಾಗೆ ಹೇಳಿಯೇ ಇಲ್ಲ. ನನ್ನ ಹೇಳಿಕೆಯನ್ನು ಸುದ್ದಿ ಮಾಧ್ಯಮಗಳು ತಿರುಚಿ ಪ್ರಸಾರ ಮಾಡಿವೆ ಎಂದು ಸ್ಪಷ್ಟನೆ ನೀಡಿ ಕೈತೊಳೆದುಕೊಂಡಿದ್ದರು.