ಹೊಸಗುಂದಕ್ಕೆ ಮರಳಿತು ಗತವೈಭವ! ಬೆಂಗಳೂರು ದಂಪತಿಗಳ ಯಶೋಗಾಥೆ
ಸಿ.ಎಂ.ಎನ್ ಶಾಸ್ತ್ರಿ ದಂಪತಿಗಳು ಈಗ 18 ವರ್ಷಗಳ ಹಿಂದೆ ಮಲೆನಾಡಿನ ಸಾಗರ ತಾಲ್ಲೂಕಿನ ಹೊಸಗುಂದದಲ್ಲಿ ನೆಲೆಸಿ, ಐತಿಹಾಸಿಕ ದೇಗುಲದ ಜೀರ್ಣೋದ್ಧಾರಕ್ಕೆ ಟೊಂಕಕಟ್ಟಿ ತಮ್ಮ ಕನಸು ನನಸಾದ ಕ್ಷಣದಲ್ಲಿದ್ದಾರೆ.
ಶಿವಮೊಗ್ಗದಿಂದ ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಗತ್ ಪ್ರಸಿದ್ಧ ಜೋಗ್ ಜಲಪಾತದಿಂದ ಕೇವಲ 41 ಕಿ.ಮೀ ದೂರಲ್ಲಿರುವ ಹೊಸಗುಂದ ತನ್ನ ಪ್ರಾಚೀನ ಶಿಲ್ಪ ವೈಭವದಿಂದ ಕೈಬೀಸಿ ಕರೆಯುತ್ತಿದೆ. ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇದೊಂದು ಹೊಸ ಸೇರ್ಪಡೆ. ಕಂಚಿ ಕಾಳಮ್ಮ ಹಾಗೂ ಪರಿವಾರ ದೇವತೆಗಳಿಂದಾಗಿ ಭಕ್ತಾಭಿಮಾನಿಗಳಿಗೆ ಇದೊಂದು ಕಾರ್ಣಿಕ ತಾಣವಾಗಿಯೂ ಮಾರ್ಪಟ್ಟಿದೆ.
ಸಾಗರದ ಉಮಾ ಮಹೇಶ್ವರಿ ದೇಗುಲದಲ್ಲಿ ದೀಪೋತ್ಸವ
ನೂರಾರು ವರ್ಷ "ಹಳೆಗುಂದ'ವಾಗಿತ್ತು. ಅಲ್ಲೊಂದು ಭವ್ಯ ದೇವಾಲಯವಿತ್ತು ಎಂಬುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಆದರೆ ಯಾವಾಗ ಪುತ್ತೂರಿನಿಂದ ಉದ್ಯಮಿ ಸಿ.ಎಂ.ಎನ್. ಶಾಸ್ತ್ರಿ ಅವರು ಹೊಸಗುಂದಕ್ಕೆ ಕಾಲಿಟ್ಟರೋ, ಹೊಸ ಪ್ರಭೆಯೊಂದು ನಾಡಿನಲ್ಲಿ ಉದಯವಾಯಿತು. ಪತ್ನಿಯ ಊರಿನಲ್ಲಿ ನಿವೃತ್ತಿ ಜೀವನಕ್ಕೆ ಒಂದು ಜಾಗ ಖರೀದಿಸಿದ ಶಾಸ್ತ್ರಿ ಅವರಿಗೆ ಅವರ ಜಮೀನಿನ ಬದಿಯಲ್ಲೇ ಒಂದು ಪುರಾತನ ದೇವಸ್ಥಾನ ಇತ್ತು ಎಂಬುದು ಗೊತ್ತೇ ಇರಲಿಲ್ಲ. ಅದು ಕಾಡೊಳಗೆ ಹುದುಗಿ ಹೋಗಿತ್ತು. 600 ಎಕರೆಯಷ್ಟು ವಿಶಾಲವಾದ ಕಾಡಿನಲ್ಲಿ ದೇವಸ್ಥಾನದ ಅವಶೇಷಗಳು ಮುಚ್ಚಿ ಹೋಗಿದ್ದವು. ಇದೆಲ್ಲ ನಡೆದುದು 1991ರಲ್ಲಿ.
ಜೀರ್ಣೋದ್ಧಾರ ಮಾಡಲೇ ಬೇಕು ಅನ್ನಿಸಲು ಕಾರಣ
ಶಾಸ್ತ್ರಿ ಅವರು ಕೃಷಿ ಮಾಡತೊಡಗಿದರು. ಆದರೆ ಅದರಲ್ಲಿ ಸುಧಾರಣೆ ಕಾಣುತ್ತಿರಲಿಲ್ಲ. ಎರಡು ಮೂರು ಹಸುಗಳು ಒಮ್ಮಿಂದೊಮ್ಮೆಲೆ, ಯಾವುದೇ ಕಾಯಿಲೆ ಇಲ್ಲದೆಯೇ ಸತ್ತು ಹೋದವು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರಿಗೆ ಮೂರ್ಛೆ ಹೋಗುವ ಕಾಯಿಲೆ ಕಾಣಿಸಿತು. ಇಲ್ಲಿ ಏನೋ ತೊಂದರೆ ಇದೆ ಎಂದು ಭಾವಿಸಿದ ಶಾಸ್ತ್ರಿ ಅವರು ಹೆಸರಾಂತ ವೇದ ವಿದ್ವಾಂಸ ಕಟ್ಟೆ ಪರಮೇಶ್ವರ ಭಟ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದರು.
ಕೂಲಂಕಷವಾಗಿ ವಿಮರ್ಶಿಸಿದ ಪರಮೇಶ್ವರ ಭಟ್ಟರು, ಈ ನೆಲದಲ್ಲಿ ದೈವೀ ಸಂಚಾರವಿದೆ, ಅದನ್ನು ಬೆಳಕಿಗೆ ತರುವ ಕೆಲಸ ಮಾಡಿ ಎಂದು ಸೂಚಿಸಿದರು. ಅವರ ಸೂಚನೆಯಂತೆ ಶಾಸ್ತ್ರಿ ಅವರು ತಮ್ಮ ಜಮೀನಿನ ಸಮೀಪದಲ್ಲೇ ಇರುವ 600 ಎಕರೆ ಕಾಡಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದರು. ಅದೇನು ಅಚ್ಚರಿಯೋ, ಒಂದು ಜೀರ್ಣಾವಸ್ಥೆಯ ಶಿವಾಲಯ ಇತ್ತು. ಆದರೆ ಶಿವಲಿಂಗ ಇರಲಿಲ್ಲ. ಅದುವರೆಗೆ ಅಲ್ಲೊಂದು ದೇವಾಲಯ ಇತ್ತು ಎಂಬುದು ಯಾರಿಗೂ ಗೊತ್ತಿರಲಿಲ್ಲ.
ನರ್ಮದಾ ಬಾಣಲಿಂಗ ಪ್ರತಿಷ್ಠಾಪನೆ
ಕಟ್ಟೆ ಪರಮೇಶ್ವರ ಭಟ್ ಅವರ ಸೂಚನೆಯಂತೆ ನರ್ಮದಾ ಬಾಣಲಿಂಗವನ್ನೇ ತಂದು ಪ್ರತಿಷ್ಠಾಪಿಸಬೇಕು ಎಂಬ ಚಿಂತನೆ ಮೂಡಿತು. ಹಲವು ತೀರ್ಥ ಕ್ಷೇತ್ರಗಳಿಗೆ ತೆರಳಿದ ಬಳಿಕ ನರ್ಮದಾ ಬಾಣಲಿಂಗವನ್ನು ತಂದು ಅಕ್ಕಿಯಲ್ಲಿಟ್ಟು ಸಂಕಲ್ಪ ಮಾಡಲಾಯಿತು.
ಒಂದು ವಿಶೇಷವೆಂದರೆ ಅದೇ ಕಾಲಕ್ಕೆ ಊರವರೂ ಸಹ ಶಾಸ್ತ್ರಿ ಅವರ ಬಳಿ ಬಂದು ತಮಗಾದ ಅನುಭವವನ್ನೂ ಹೇಳಿಕೊಂಡರು. ವರದಪುರದ ಶ್ರೀಧರ ಸ್ವಾಮೀಜಿ ಅವರೇ ಈ ಹೊಸಗುಂದ ಪ್ರದೇಶಕ್ಕೆ ಬಂದಿದ್ದರಂತೆ. ಆಗ ಅವರನ್ನು ಊರವರು ಸಂಪರ್ಕಿಸಿ, ಇಲ್ಲಿನ ಪುರಾತನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬಹುದೇ ಎಂದು ಕೇಳಿದ್ದರಂತೆ.
ಶಿವಮೊಗ್ಗ ಬಳಿಯ ಹೊಸಗುಂದಕ್ಕೆ ರಾಹುಲ್ ಗಾಂಧಿ
ಶ್ರೀಧರ ಸ್ವಾಮೀಜಿ ಪ್ರತಿಷ್ಠಾಪನೆಗೆ ಒಪ್ಪಿರಲಿಲ್ಲ
ಆದರೆ ಶ್ರೀಧರ ಸ್ವಾಮೀಜಿ ಅವರು ಅದಕ್ಕೆ ಒಪ್ಪಲಿಲ್ಲವಂತೆ. "ನೀವು ಇದಕ್ಕೆ ಕೈ ಹಾಕಿದರೆ ಅಪಾಯಗಳು ಎದುರಾಗಬಹುದು. ಆದರೆ ಇಲ್ಲಿಗೆ ಹೊರಗಿನಿಂದ ವ್ಯಕ್ತಿಯೊಬ್ಬರು ಬರಲಿದ್ದು, ಅವರೇ ಈ ದೇವಾಲಯದ ಪುನರುಜ್ಜೀನವ ಕಾರ್ಯ ನೆರವೇರಿಸುವರು, ಆಗ ನೀವು ಸಹಾಯ ನೀಡಿ' ಎಂದು ಹೇಳಿದ್ದರಂತೆ.
ಪುತ್ತೂರಿನಿಂದ ಬಂದ ಶಾಸ್ತ್ರಿ ಅವರು ದೇವಸ್ಥಾನದ ಪುನರಜ್ಜೀವನಕ್ಕೆ ಕೈಹಾಕಿದ್ದಾರೆ ಎಂಬ ಮಾಹಿತಿ ಊರವರಿಗೆ ದೊರೆಯಿತು. ಅವರು ಸ್ವಯಂಪ್ರೇರಣೆಯಿಂದಲೇ ಮುಂದೆ ಬಂದು ಶಾಸ್ತ್ರಿ ಅವರ ಕೆಲಸದಲ್ಲಿ ಕೈಜೋಡಿವುದಾಗಿ ತಿಳಿಸಿಬಿಟ್ಟರು. ಆ ಮೂಲಕ "ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್' ಆರಂಭವಾಯಿತು. ಅಂತೆಯೇ ೨೦೦೧ರ ಮೇ ೪ರಂದು ಶಿವನಿಗೆ ಪೂಜಾ ಕಾರ್ಯಗಳೂ ಆರಂಭವಾದವು.
ದೇವಸ್ಥಾನ ವಿಶೇಷ ಕುರುಹುಗಳು ಪತ್ತೆ
2001ರಿಂದ 2005ರವರೆಗೆ ಕಾಡಲ್ಲಿ ಮತ್ತೆ ಹುಡುಕಾಟ ನಡೆಸಲಾಯಿತು. ಆಗ ಅಲ್ಲಿ ವಿಶೇಷವಾದ ದೇವಸ್ಥಾನದ ಕುರುಹುಗಳು, ಶಾಸನಗಳು ಪತ್ತೆಯಾದವು. ಉಮಾಮಹೇಶ್ವರನ ಜತೆಗೆ ವೀರಭದ್ರನ ದೇವಸ್ಥಾನ ಅಲ್ಲಿರುವುದು ಗೊತ್ತಾಯಿತು. ಮಹಿಷನಿ, ಕಂಚಿಕಾಳಮ್ಮ (ಭದ್ರಕಾಳಿ), ಲಕ್ಷ್ಮೀ ಗಣಪತಿ ದೇವಸ್ಥಾನಗಳ ಕುರುಹುಗಳು ಸಿಕ್ಕದ ಮೇರೆಗೆ ಆ ಎಲ್ಲ ದೇವಸ್ಥಾನಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಯಿತು. ಪ್ರಸನ್ನ ನಾರಾಯಣ ದೇವಸ್ಥಾನವೂ ಇಲ್ಲಿ ಇತ್ತು ಎಂಬ ಕಾರಣಕ್ಕೆ ಆ ದೇವಸ್ಥಾನದ ನಿರ್ಮಾಣ ಕಾರ್ಯವೂ ಮುಂದಿನ ದಿನಗಳಲ್ಲಿ ನಡೆಯಲಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊಸಗುಂದ ಎಂಬ ಪುರಾತನ ರಾಜಧಾನಿ 600 ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡಿತ್ತು. ಹಾಗೆ ವ್ಯಾಪಿಸಿಕೊಂಡದ್ದರ ಕುರುಹಾಗಿ ಅಲ್ಲಿ ಅಷ್ಟೇ ವಿಶಾಲ ಪ್ರದೇಶದಲ್ಲಿ ಅರಣ್ಯ ಬೆಳೆದಿದೆ. ಅಲ್ಲೊಂದು ಭವ್ಯ ದೇವಸ್ಥಾನವಿತ್ತು. ಹಾಳು ಬಿದ್ದ ವಿಗ್ರಹಗಳು, ಶಾಸನಗಳು ಕಾಡಿನ ಹಲವೆಡೆ ಚದುರಿ ಹೋಗಿದ್ದವು. ಎಲ್ಲೋ ಕಳೆದು ಹೋಗುತ್ತಿದ್ದ ಅಮೂಲ್ಯ ಸಂಪತ್ತು ಇಂದು ಒಂದೆಡೆ ನೆಲೆಸಿಬಿಟ್ಟಿದೆ. ದೈವೀಶಕ್ತಿಯ ಜತೆಗೆ ವನಶಕ್ತಿಯೂ ಸೇರಿಕೊಂಡು ಹೊಸಗುಂದ ಇಂದು ಹೊಸ ರೂಪದಲ್ಲಿ ಜಗತ್ತಿಗೆ ತೆರೆದುಕೊಂಡಿದೆ.
ಶೌಚಾಲಯ... ಇಲ್ಲಿ ಸ್ವಚ್ಛತೆಯ ಪ್ರತೀಕ, ಸಬಲೀಕರಣದ ದ್ಯೋತಕ
ಹೊಸರೂಪಕ್ಕೆ ವೀರೇಂದ್ರ ಹೆಗ್ಗಡೆ ಸಹಾಯ
ದೇವಸ್ಥಾನದ ಸ್ಪಷ್ಟ ರೂಪ ದೊರೆತ ಮೇಲೆ ಅದಕ್ಕೆ ಮೂರ್ತ ರೂಪ ಕೊಡಲು ಮುಂದಾದಾಗ ನೆರವಿಗೆ ಬಂದವರು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಗಳು. ಪುರಾತನ ದೇವಸ್ಥಾನವನ್ನು ಪುನರ್ ನಿರ್ಮಿಸುವ ಹೊಣೆ ಹೊತ್ತವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ,.ಡಿ.ವೀರೇಂದ್ರ ಹೆಗ್ಗಡೆ ಅವರು. ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಆಗಬಹುದಾಗಿದ್ದ ಪುರಾತನ ದೇವಸ್ಥಾನದ ವಿನ್ಯಾಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಮೂಲಕ ಕೇವಲ 36 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಹೆಗ್ಗಳಿಕೆ ಹೆಗ್ಗಡೆ ಅವರದ್ದು.
ಸ್ವತಃ ಧರ್ಮಸ್ಥಳ 1 ಲಕ್ಷದ ಅನುದಾನವೂ ದೊರೆಯಿತು. ಒಟ್ಟಾರೆಯಾಗಿ ಸುಮಾರು 7 ಕೋಟಿ ವೆಚ್ಚದ ಹೊಸಗುಂದ ದೇವಸ್ಥಾನ ಪುನರುಜ್ಜೀವನದ ಯೋಜನೆ ಇಂದು ಬಹುತೇಕ ಪೂರ್ಣಗೊಂಡಿದ್ದು, ಇದೇ ಮೇ 1ರಂದು ಮತ್ತು 2ರಂದು ದೇವತಾ ವಿಗ್ರಹಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯಲಿದೆ.
ಪುತ್ತೂರಿನವರಾದ ಶ್ರೀ ಸಿ.ಎಂ.ಎನ್.ಶಾಸ್ತ್ರಿ ಅವರು ಹೆಸರಾಂತ ಉದ್ಯಮಿ, ಸಾವಯವ ಕೃಷಿಯನ್ನು ಜಗತ್ತಿಗೆ ಪರಿಚಯಿಸಲು ಹೊರಟ ಸಾಹಸಿ. ಜತೆಗೆ ಪುರಾತನ ಕಲೆ, ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಟೊಂಕಕಟ್ಟಿ ನಿಂತವರು. ಅವರ ಪತ್ನಿ ಶೋಭಾ ಶಾಸ್ತ್ರಿ ಮತ್ತು ಪುತ್ರಿ, ಪುತ್ರನ ಸಹಕಾರವೂ ಅವರ ಬೆನ್ನ ಹಿಂದೆ ಇದೆ. ಅದೆಲ್ಲಕ್ಕೂ ಮಿಗಿಲಾಗಿ ಊರವರು ಅವರ ಎಲ್ಲ ಯೋಜನೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ.
ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿದೆ
ಹಸಗುಂದ ಈಗಾಗಲೇ ನಾಡಿನ ಗಮನ ಸೆಳೆದುಬಿಟ್ಟಿದೆ. ಪುರಾತನ ದೇವಸ್ಥಾನಗಳು ಇಲ್ಲಿ ಮತ್ತೆ ತಲೆ ಎತ್ತಿದ್ದರಿಂದ ಮಾತ್ರ ಇಲ್ಲಿಗೆ ಈ ಹಿರಿಮೆ ಬಂದುದಲ್ಲ, ಇಲ್ಲಿನ 600 ಎಕರೆ ಕಾಡು ಸಹ ಇಂದು ದೇವರ ಕಾಡಾಗಿ ಬದಲಾಗಿದೆ. ಅಂದರೆ ಇಲ್ಲಿನ ಒಂದೇ ಒಂದು ಗಿಡವನ್ನೂ ಯಾರೂ ಕಡಿಯುವಂತಿಲ್ಲ. ಜಲತಜ್ಞರಾದ ಶ್ರೀಪಡ್ರೆ, ಶಿವಾನಂದ ಕಳವೆ ಮೊದಲಾದವರ ಸಲಹೆ ಮೇರೆಗೆ ಕಾಡಿನೊಳಗೆ 5 ವರ್ಷಗಳ ಕಾಲ ಜಲಕೊಯ್ಲು ಕಾಯಕ ನಡೆದಿದೆ. ಹೀಗಾಗಿಯೇ ಕಾಡೊಳಗೆ ಇದ್ದ 5 ಕೆರೆಗಳು ಇಂದು ನೀರಿನಿಂದ ನಳನಳಿಸುತ್ತಿವೆ. ಈ ಪೈಕಿ ದೇವಸ್ಥಾನದ ಪುಷ್ಕರಿಣಿಯಲ್ಲಿ ಬಿರು ಬೇಸಿಗೆಯಲ್ಲೂ ಇಂದು 15ರಿಂದ 20 ಅಡಿಯಷ್ಟು ನೀರು ನಗುತ್ತಿದೆ.
ಕುವೆಂಪು ವಿಶ್ವವಿದ್ಯಾಲಯದ ತಜ್ಞರು ಈ ಕಾಡಿನೊಳಗೆ ಅಧ್ಯಯನ ನಡೆಸಿದ್ದು, 340 ಜಾತಿಯ ಸಸ್ಯ ಪ್ರಭೇದಗಳನ್ನು ಇಲ್ಲಿ ಗುರುತಿಸಿದ್ದಾರೆ. ದೇವಸ್ಥಾನದ ಸಮಿತಿಯ ವತಿಯಿಂದ 200ಕ್ಕೂ ಅಧಿಕ ಪ್ರಭೇಧದ ಸಸ್ಯಗಳನ್ನು ಕಾಡಿನೊಳಗೆ ನೆಡಲಾಗಿದೆ. ಹೀಗಾಗಿ ಹೊಸಗುಂದ ಕಾಡಿನಲ್ಲಿ ಇಂದು ೫೪೦ಕ್ಕಿಂತ ಅಧಿಕ ಪ್ರಭೇದದ ಅಪರೂಪದ ಸಸ್ಯಗಳನ್ನು ಗುರುತಿಸಬಹುದು. ಇಷ್ಟು ಪ್ರ್ರಭೇದದ ಸಸ್ಯಗಳನ್ನು ಹುಡುಕಲು ಪಶ್ಚಿಮ ಘಟ್ಟದ ಹಲವಾರು ಭಾಗಗಳಿಗೆ ತೆರಳಬೇಕಾಗಿತ್ತು. ಇದೀಗ ಒಂದೇ ಸ್ಥಳದಲ್ಲಿ ಅಂದರೆ ಹೊಸಗುಂದದ ಕಾಡಿನಲ್ಲೇ ಇಷ್ಟೂ ಜಾತಿಯ ಸಸ್ಯಗಳನ್ನು ನೋಡುವುದು ಸಾಧ್ಯವಾಗಿದೆ.
ರೈಲು ಪ್ರಯಾಣಿಕರ ಜೀವ ಉಳಿಸಿದ ಪುಟಾಣಿಗಳ ಸಾಹಸಗಾಥೆ
ಹಂಪಿ ಉತ್ಸವದಂತೆ ಹೊಸಗುಂದ ಉತ್ಸವ
ಹೊಸಗುಂದವನ್ನು ಅತ್ಯಂತ ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ಪೈಕಿ ಹಂಪಿ ಉತ್ಸವದಂತೆ "ಹೊಸಗುಂದ ಉತ್ಸವ'ವನ್ನು ನಡೆಸುವುದೂ ಸೇರಿದೆ. ಈಗಾಗಲೇ ನಿರ್ಮಿಸಲಾಗಿರುವ ಬಾಲಾಲಯಗಳಲ್ಲಿ ಪಿರಾಮಿಡ್ ಆಕಾರದ ಆರೋಗ್ಯ ಕುಟೀರಗಳನ್ನು ನಿರ್ಮಿಸಿ, ಆರೋಗ್ಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಯೋಜನೆ ಇದೆ. ಹೊಸಗುಂದ ಮುಂದಿನ ದಿನಗಳಲ್ಲಿ ಕನ್ನಡ ನಾಡಿನ ಹೊಸ ಪ್ರವಾಸಿ ತಾಣವಾಗಿ ಪರಿವರ್ತನೆಗೊಳ್ಳಲಿದೆ. ಇಲ್ಲಿನ 600 ಎಕರೆ ದೇವರ ಕಾಡು ಪಶ್ಚಿಮ ಘಟ್ಟದ ಅಪರೂಪದ ಸಸ್ಯ ಸಂಕುಲಗಳ ಬೀಡಾಗಲಿದ್ದು, ಹೊಸಗುಂದಕ್ಕೆ ಭೇಟಿ ನೀಡಿದರೆ ಮಾನಸಿಕ, ಆರೋಗ್ಯ ಸುಧಾರಣೆ ನಿಶ್ಚಿತ ಎಂಬ ಭಾವ ಜನರಲ್ಲಿ ಮೂಡುವಂತಾಗಲಿದೆ.