ಬೇಳೂರು v/s ಹಾಲಪ್ಪ : ಸಾಗರದ ಬಿಜೆಪಿ ಟಿಕೆಟ್ ಯಾರಿಗೆ?
ಶಿವಮೊಗ್ಗ, ಡಿಸೆಂಬರ್ 26 : ಸಾಗರ ಕ್ಷೇತ್ರದಲ್ಲಿ ಚುನಾವಣಾ ರಾಜಕೀಯ ಕಾವು ಪಡೆದುಕೊಳ್ಳುತ್ತಿದೆ. ಬೇಳೂರು ಗೋಪಾಲಕೃಷ್ಣ, ಹರತಾಳು ಹಾಲಪ್ಪ ಬೆಂಬಲಿಗರು ಕೈ-ಕೈ ಮಿಲಾಯಿಸಿಕೊಂಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬೇಳೂರು ಗೋಪಾಲಕೃಷ್ಣ ಕೈ ತಪ್ಪಲಿದೆ ಸಾಗರದ ಟಿಕೆಟ್?
2018ರ ವಿಧಾನಸಭೆ ಚುನಾವಣೆಗೆ ಸಾಗರ ಕ್ಷೇತ್ರದಿಂದ ಹರತಾಳು ಹಾಲಪ್ಪ ಬಿಜೆಪಿ ಅಭ್ಯರ್ಥಿ ಎಂಬ ಸುದ್ದಿ ಹಬ್ಬಿದೆ. ಆದರೆ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ.
ಡಿ.28ರಂದು ಬಿಜೆಪಿಯ ಪರಿವರ್ತನಾ ಯಾತ್ರೆ ಸಮಾವೇಶ ಸಾಗರದಲ್ಲಿ ನಡೆಯಲಿದೆ. ಸಮಾವೇಶಕ್ಕೆ ಫೆಕ್ಸ್ ಹಾಕುವ ವಿಚಾರದಲ್ಲಿ ಹಾಲಪ್ಪ, ಬೇಳೂರು ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು ಕೈ ಕೈ ಮಿಲಾಯಿಸಿದ್ದಾರೆ.
ಬೇಳೂರು ಬೆಂಬಲಿಗ ವಿನಯ್, ಹಾಲಪ್ಪ ಬೆಂಬಲಿಗ ಗಣೇಶ್ ಶೆಟ್ಟಿ ನಡುವೆ ಜಟಾಪಟಿ ನಡೆದಿದೆ. ಹಾಲಪ್ಪ ಅವರು ಸೊರಬಕ್ಕಿಂತ ಸಾಗರ ಕ್ಷೇತ್ರದಲ್ಲಿಯೇ ಹೆಚ್ಚಾಗಿ ಓಡಾಡುತ್ತಿದ್ದು ಅವರಿಗೆ ಟಿಕೆಟ್ ಎಂಬ ಸುದ್ದಿಗಳು ಹಬ್ಬಿವೆ.
ಸಾಗರ ಅಥವ ಸೊರಬದಿಂದ ಸ್ಪರ್ಧಿಸಲು ಸಿದ್ಧ : ಹಾಲಪ್ಪ
ಕಾಂಗ್ರೆಸ್ನಲ್ಲಿದ್ದ ಕುಮಾರ್ ಬಂಗಾರಪ್ಪ ಅವರು ಬಿಜೆಪಿ ಸೇರಿದ್ದಾರೆ. ಆದ್ದರಿಂದ, ಸೊರಬದಲ್ಲಿ ಅವರಿಗೆ ಟಿಕೆಟ್ ನೀಡಿ, ಸಾಗರದಲ್ಲಿ ಹಾಲಪ್ಪ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಬೇಳೂರು ಗೋಪಾಲಕೃಷ್ಣ ಈ ಸುದ್ದಿಗಳನ್ನು ಅಲ್ಲಗಳೆದಿದ್ದಾರೆ.
ಸಾಗರದ ಟಿಕೆಟ್ : ಬೇಳೂರು ಗೋಪಾಲಕೃಷ್ಣ ಹೇಳಿದ್ದೇನು?
2013ರ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಕಾಗೋಡು ತಿಮ್ಮಪ್ಪ ಜಯಗಳಿಸಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಈಗ ಕಂದಾಯ ಸಚಿವರು.
ಜೆಡಿಎಸ್ನಿಂದ ಸ್ಪರ್ಧಿಸಿದ್ದ ಬೇಳೂರು ಗೋಪಾಲಕೃಷ್ಣ 3ನೇ ಸ್ಥಾನಕ್ಕೆ ಕುಸಿದಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಶರಾವತಿ ಸಿ.ಆರ್. ಅವರೂ ಸಹ 4ನೇ ಸ್ಥಾನಕ್ಕೆ ಕುಸಿದಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ಬಿ.ಎಸ್.ಯಡಿಯೂರಪ್ಪ ತಂತ್ರ ರೂಪಿಸುತ್ತಿದ್ದಾರೆ. ಪರಿವರ್ತನಾ ಯಾತ್ರೆಯಲ್ಲಿ ಅಭ್ಯರ್ಥಿ ಘೋಷಣೆ ಮಾಡಲಿದ್ದಾರೆಯೇ? ಕಾದು ನೋಡಬೇಕು.