ಶೂನ್ಯ ವರ್ಷ ಎಂದು ಘೋಷಿಸಿ ವಿಷಮ ಸ್ಥಿತಿ ತಪ್ಪಿಸಿ; ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ, ಅಕ್ಟೋಬರ್ 10: ಕೊರೊನಾ ಸೋಂಕಿನ ಕಾರಣವಾಗಿ ಕಲಾಪವನ್ನೇ ಮೊಟಕುಗೊಳಿಸಿದ ಸರ್ಕಾರ, ಶಾಲೆ ಆರಂಭಿಸುವ ಚಿಂತನೆ ಮಾಡುತ್ತಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ರಾಜ್ಯದಾದ್ಯಂತ ಕೊರೊನಾ ಸೋಂಕಿನಿಂದಾಗಿ ಶಿಕ್ಷಕರು ಸಾವನ್ನಪ್ಪಿರುವ ಸಂಗತಿ ಸದ್ಯಕ್ಕೆ ಚರ್ಚೆಯಲ್ಲಿದೆ. ಸರ್ಕಾರದ ವಿದ್ಯಾಗಮ ಶಿಕ್ಷಣ ಯೋಜನೆಯ ಕುರಿತೂ ಅಪಸ್ವರ ಕೇಳಿಬಂದಿದೆ. ವಿದ್ಯಾಗಮ ಯೋಜನೆ ಜಾರಿಯಾದ ಬಳಿಕ ಕೊರೊನಾ ವೈರಸ್ಗೆ ತುತ್ತಾಗುತ್ತಿರುವ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ 154ಕ್ಕೂ ಹೆಚ್ಚು ಶಿಕ್ಷಕರು ಕೊರೊನಾ ವೈರಸ್ನಿಂದ ಮೃತಪಟ್ಟಿದ್ದಾರೆಂಬ ಮಾಹಿತಿ ಇದ್ದು, ಶಾಲೆಗಳನ್ನು ಯಾವುದೇ ಕಾರಣಕ್ಕೂ ತೆರೆಯುವ ಆಲೋಚನೆಯೇ ಬೇಡ ಎಂಬ ಅಭಿಪ್ರಾಯ ಎಲ್ಲೆಡೆಯಿಂದ ಕೇಳಿಬರುತ್ತಿದೆ.
'ಶಿಕ್ಷಕರಿಗೆ' ಸಾವಿನ ಮನೆಯಾದ 'ವಿದ್ಯಾಗಮ' ಯೋಜನೆ!
ಈ ಕುರಿತು ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಮಾಧ್ಯಮ ಹೇಳಿಕೆ ನೀಡಿದ್ದು, "ಖಾಸಗಿ ಶಾಲೆಗಳ ಲಾಬಿಗೆ ಮಣಿದು ಇಂತಹ ಕಾರ್ಯಕ್ಕೆ ಮುಂದಾದರೆ ಮುಂದಾಗುವ ಅಪಾಯಕ್ಕೆ ಸರ್ಕಾರವೇ ಹೊಣೆ ಹೊರಬೇಕು" ಎಂದಿದ್ದಾರೆ. "ಈಗ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಅಂಕೆಗೆ ಸಿಗುತ್ತಿಲ್ಲ. ಹೀಗಿರುವಾಗ ಮಕ್ಕಳನ್ನು ಗುಂಪು ಸೇರಿಸುವ ಕಾರ್ಯವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ತಜ್ಞರ ಅಭಿಪ್ರಾಯದಂತೆ ಶೂನ್ಯ ವರ್ಷ ಎಂದು ಘೋಷಿಸಿ ವಿಷಮ ಸ್ಥಿತಿ ತಪ್ಪಿಸಿ" ಎಂದಿದ್ದಾರೆ.
ಅವಸರದಲ್ಲಿ ಶಾಲೆ ತೆರೆಯುವ ಕುರಿತು ಯೋಚಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಅಲ್ಲದೆ ವಿದ್ಯಾಗಮ ಹೆಸರಿನಲ್ಲಿ ಮಕ್ಕಳನ್ನು ಸೇರಿಸುವುದು ಕೂಡ ತಪ್ಪು. ಇದರಿಂದ ಮಕ್ಕಳಿಗೆ, ಪೋಷಕರಿಗೆ ಅಭದ್ರತೆ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈಗಲೇ ಸರ್ಕಾರ ಎಚ್ಚೆತ್ತು ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಗಮನ ನೀಡಿ ಶಾಲೆಗಳನ್ನು ಆರಂಭಿಸುವ ವಿಚಾರವನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.