ಬಿ. ಸಿ. ನಾಗೇಶ್ ಮಂತ್ರಿಯಾಗಲು ನಾಲಾಯಕ್; ಸಿದ್ದರಾಮಯ್ಯ
ಶಿವಮೊಗ್ಗ , ಜೂನ್ 15: ಪಠ್ಯಪುಸ್ತಕದ ಅಪಮೌಲ್ಯೀಕರಣ ಹಾಗೂ ನಾಡು, ನುಡಿಗೆ ಮಾಡಿರುವ ಅವಮಾನ ಖಂಡಿಸಿ ಕುವೆಂಪು ವಿಶ್ವಮಾನವ ವೇದಿಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಾರಥ್ಯದಲ್ಲಿ ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ.
ಪಠ್ಯಪುಸ್ತಕ ಸಮಿತಿಯ ತಿದ್ದುಪಡಿಗಳ ವಿರುದ್ದ ವಾಗ್ದಾಳಿಯನ್ನು ನಡೆಸಿದ ಸಿದ್ದರಾಮಯ್ಯ, ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ನಾಲಾಯಕ್ ಎಂದು ಟೀಕಿಸಿದ್ದಾರೆ. ಪಠ್ಯಪುಸ್ತಕ ಅಪಮಾನ ಖಂಡಿಸಿ ನಡೆದ ಪಾದಯಾತ್ರೆಯ ವೇಳೆ ಮಾತನಾಡಿದ ಸಿದ್ದರಾಮಯ್ಯ, "ಇಡಿಯಿಂದ ರಾಹುಲ್ ಗಾಂಧಿ ವಿಚಾರಣೆ ಮಾಡುತ್ತಿರುವುದು ರಾಜಕೀಯ ದ್ವೇಷದಿಂದ. ಇದು ಹೊಸ ಪ್ರಕರಣವಲ್ಲ, ಹಿಂದೆಯೇ ಈ ಬಗ್ಗೆ ತನಿಖೆಯಾಗಿದೆ, ಮತ್ತೆ ಕೇಸ್ ರಿಓಪನ್ ಮಾಡಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ರಾಜಕೀಯ ಕಿರುಕುಳ ನೀಡಲು ಷಡ್ಯಂತ್ರ ಮಾಡುತ್ತಿದ್ದಾರೆ" ಎಂದು ದೂರಿದರು.
"1938ರಲ್ಲಿ ಪ್ರಾರಂಭವಾದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಟ್ರಸ್ಟಿಗಳಾಗಿದ್ದಾರೆ. ಈ ಹಿಂದೆ ರಾಜೀವ್ ಗಾಂಧಿ ಕೂಡ ಟ್ರಸ್ಟಿ ಆಗಿದ್ದರು. ಇಡಿ ವಿಚಾರಣೆ ರಾಜಕೀಯ ದುರುದ್ದೇಶದಿಂದ ಮಾಡುತ್ತಿರುವುದು. ನಮ್ಮ ನಾಯಕರು ಭಾರತ್ ಜೋಡೋ ಯಾತ್ರ ಮಾಡುತ್ತಿದ್ದಾರೆ, ಅದಕ್ಕಾಗಿ ಅವರ ವರ್ಚಸ್ಸನ್ನು ಕಡಿಮೆ ಮಾಡಲು ಈ ರೀತಿ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
"ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದಾಗ ಇಲ್ಲಿನ ಸರ್ಕಾರ ಶೇ 40% ಲಂಚ ಕೇಳುತ್ತಿದೆ ಎಂಬ ಪತ್ರಕ್ಕೆ ಉತ್ತರ ಕೊಡಲಿ. ಇವತ್ತಿನವರೆಗೆ ಪತ್ರದ ಬಗ್ಗೆ ರಾಜ್ಯ ಸರ್ಕಾರದ ಸ್ಪಷ್ಟನೆಯನ್ನು ಅವರು ಕೇಳಿಲ್ಲ. ಮೊದಲು ಅದಕ್ಕೆ ಉತ್ತರ ನೀಡಲಿ" ಎಂದು ಸವಾಲು ಹಾಕಿದರು.
71 ಜನ ಸಾಹಿತಿಗಳು ಸಹಿ ಮಾಡಿ ಸರ್ಕಾರಕ್ಕೆ ಪತ್ರ
"ನಾಗೇಶ್ ಅವರು ಮಂತ್ರಿಯಾಗಲು ನಾಲಾಯಕ್, ಮೊದಲು ಚರಿತ್ರೆ ತಿರುಚಿಲ್ಲ ಎಂದು ಹೇಳಿದ್ದರು, ನಂತರ ಚರಿತ್ರೆ ತಿರುಚಿದ್ದು ಒಪ್ಪಿಕೊಂಡು ಬದಲಾವಣೆ ಮಾಡುತ್ತೇವೆ ಎಂದರು. ಹಾಗಾದರೆ 21 ಜನ ಸ್ವಾಮೀಜಿಗಳು ಧಾರವಾಡದಲ್ಲಿ ಸಭೆ ಸೇರಿ ಈ ಸರ್ಕಾರವನ್ನು ಖಂಡಿಸಿದರಲ್ಲ ಅದು ಸುಳ್ಳಾ?. 71 ಜನ ಸಾಹಿತಿಗಳು ಸಹಿ ಮಾಡಿ ಸರ್ಕಾರಕ್ಕೆ ಪತ್ರ ನೀಡಿದ್ದು ಸುಳ್ಳಾ?. ವಿರೋಧ ಜಾಸ್ತಿಯಾದ ಮೇಲೆ ರೋಹಿತ್ ಚಕ್ರತೀರ್ಥ ಅವರನ್ನು ತೆಗೆದು ಹಾಕಿದ್ದು ಯಾಕೆ?, ಸುಮ್ಮಸುಮ್ಮನೆ ತೆಗೆದಿದ್ದಾ?" ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಂವಿಧಾನ ಶಿಲ್ಪಿ ಎಂದು ಕರೆದಿದ್ದು ಟಿ.ಟಿ ಕೃಷ್ಣಮಾಚಾರಿ
"ಬರಗೂರು ರಾಮಚಂದ್ರಪ್ಪರವರು ಪರಿಷ್ಕರಿಸಿದ್ದ ಪಠ್ಯದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂದು ಇತ್ತು, ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಇದನ್ನು ತೆಗೆದಿದೆ. ಸಂವಿಧಾನದ ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದವರು ಯಾರು?. ರೋಹಿತ್ ಚಕ್ರತೀರ್ಥನಾ? ಅಮಿತ್ ಶಾ ಅಥವಾ ನರೇಂದ್ರ ಮೋದಿ ಅವರು ಆಗಿದ್ದರ?. ಸಂವಿಧಾನ ಕರಡು ರಚನಾ ಸಮಿತಿಯ ನೇತೃತ್ವ ವಹಿಸಿದ್ದು ಡಾ. ಬಿ. ಆರ್ ಅಂಬೇಡ್ಕರ್ ಅವರು, ಇದು ಸತ್ಯವಲ್ಲವಾ?. ಅವರಿಗೆ ಸಂವಿಧಾನ ಶಿಲ್ಪಿ ಎಂದು ಹೆಸರು ಕೊಟ್ಟವರು ಟಿ. ಟಿ. ಕೃಷ್ಣಮಾಚಾರಿ. ಇವರು ಕೂಡ ಕರಡು ರಚನಾ ಸಮಿತಿಯ ಒಬ್ಬ ಸದಸ್ಯರಾಗಿದ್ದವರು. ಬಿಜೆಪಿಗೆ ಇತಿಹಾಸ ತಿರುಚುವುದು ಮಾತ್ರ ಗೊತ್ತಿದೆ" ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪ್ರತಾಪ್ ಸಿಂಹ ನಮ್ಮ ಪಕ್ಷದ ವಕ್ತಾರ ಲಕ್ಷ್ಮಣ್ ಜೊತೆ ಚರ್ಚಿಸಲಿ
"ಸಿ. ಟಿ. ರವಿ ಕಾನೂನು ಅಭ್ಯಾಸ ಮಾಡಿದ್ದಾರಾ?. ನಾನು ಕಾನೂನು ಓದಿದ್ದೀನಿ ಅದಕ್ಕೆ ಕಾನೂನು ರೀತಿ ಮಾತನಾಡುತ್ತೇನೆ. ಅವರು ಓದಿಲ್ಲ ಅದಕ್ಕೆ ಕಾನೂನಿಗೆ ವಿರುದ್ಧ ಮಾತನಾಡುತ್ತಾರೆ. ಪ್ರತಾಪ್ ಸಿಂಹನವರಿಗೆ ಚಾಲೆಂಜ್ ಮಾಡಿದ್ದು ನಾನಲ್ಲ, ನಮ್ಮ ಪಕ್ಷದ ವಕ್ತಾರರಾದ ಲಕ್ಷ್ಮಣ್. ಅವರು ಬಿಇ ಪದವೀಧರ. ಇವರೇನು ಓದಿದ್ದಾರೆ?. ಅಂಬೇಡ್ಕರ್ ಅವರಷ್ಟು ಓದಿದ್ದಾರಾ?. ಮೊದಲು ಲಕ್ಷ್ಮಣ್ ಜೊತೆ ಚರ್ಚೆ ಮಾಡಲಿ, ಆಮೇಲೆ ನೋಡೋಣ" ಎಂದರು.
"ನಾನು ಎಲ್ಲೂ ನಾನೊಬ್ಬ ಆರ್ಥಿಕ ತಜ್ಞ ಎಂದು ಹೇಳಿಲ್ಲ. ನಾನು ಮನಮೋಹನ್ ಸಿಂಗ್ ಅವರ ರೀತಿ ಅರ್ಥಶಾಸ್ತ್ರಜ್ಞ ಎಂದು ಯಾವತ್ತಾದರೂ ಹೇಳಿದ್ದೀನಾ?. ನಾನು ಕಾನೂನು ಪದವೀಧರ" ಎನ್ನುವ ಮೂಲಕ ಪ್ರತಾಪ್ ಸಿಂಹಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಡಿ.ಕೆ ಸುರೇಶ್ ಒಬ್ಬರು ಗೌರವಾನ್ವಿತ ಸಂಸದ
"ಕಾನೂನು ಪದವೀಧರನಾದ ನಾನು 13 ಬಜೆಟ್ಗಳನ್ನು ಮಂಡನೆ ಮಾಡಿದ್ದೇನೆ. ಪ್ರತಾಪ್ ಸಿಂಹ ಎಷ್ಟು ಬಜೆಟ್ ಮಂಡಿಸಿದ್ದಾರೆ?. ಬರೆದು ಕೊಟ್ಟ ಬಜೆಟ್ ಅನ್ನು ನಾನು ಓದಿದ್ದು ಎಂದಾದರೆ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರು ಅದನ್ನೇ ಮಾಡಿರೋದಾ?. ನಿರ್ಮಲಾ ಸೀತಾರಾಮನ್ ಅವರು ಅಧಿಕಾರಿಗಳು ಬರೆದು ಕೊಟ್ಟಿದ್ದನ್ನು ಓದಿದ್ದಾ?. ಬಸವರಾಜ ಬೊಮ್ಮಾಯಿ ಒಂದು ಬಜೆಟ್ ಮಂಡಿಸಿದ್ದಾರೆ, ಅವರು ಅದನ್ನೇ ಮಾಡಿದ್ದಾ?" ಎಂದರು.
"ಅರುಣ್ ಜೇಟ್ಲಿ ಯಾವ ಅರ್ಥಶಾಸ್ತ್ರಜ್ಞರು?. ಪ್ರಧಾನಿ ಮೋದಿ ಏನು ಓದಿದ್ದಾರೆ?. ಅವರನ್ನು ಹಾಡಿ ಹೊಗಳುತ್ತಾರಲ್ಲ. ಅವರು ಪ್ರಧಾನಿ ಆಗಬಾರದು ಎಂದು ನಾನು ಹೇಳುತ್ತಿಲ್ಲ. ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದೆ, ಆಗಲಿ ಬಿಡಿ. ಪ್ರತಾಪ್ ಸಿಂಹ ಲೋಕಸಭಾ ಸದಸ್ಯ ಆದ ಕೂಡಲೇ ಸರ್ವಜ್ಞನಾ?. ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧೀನದಲ್ಲಿ ಇರುವುದು. ಡಿ. ಕೆ. ಸುರೇಶ್ ಒಬ್ಬರು ಗೌರವಾನ್ವಿತ ಸಂಸದ. ಪೊಲೀಸರು ಒಬ್ಬ ಸಂಸದನ ಜೊತೆ ಈ ರೀತಿ ನಡೆದುಕೊಂಡಿದ್ದನ್ನು ನಾನು ಖಂಡಿಸುತ್ತೇನೆ" ಎಂದು ಸಿದ್ದರಾಮಯ್ಯ ಹೇಳಿದರು.