ಶಿವಮೊಗ್ಗ: ಭಾರಿ ಮಳೆಯಿಂದ ಜೋಗದ ಮನೆಗಳ ಮುಂಭಾಗ ತಡೆಗೋಡೆ ಕುಸಿತ
ಶಿವಮೊಗ್ಗ, ಸೆಪ್ಟೆಂಬರ್ 22: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದ ಜೋಗದ ಎಸ್.ವಿ.ಪಿ ಕಾಲೊನಿಯ ಕೆಪಿಸಿ ಮನೆಗಳ ಮುಂದಿನ ಗುಡ್ಡದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಕುಸಿತವಾಗಿದೆ.
ಕರ್ನಾಟಕ ವಿದ್ಯುತ್ ಸಂಸ್ಥೆ (ಕೆಪಿಸಿ)ಯ ನೌಕರರಿಗಾಗಿ ನೀಡಿರುವ ವಸತಿ ಗೃಹಗಳಿದ್ದು, ಇಲ್ಲಿ ಗುಡ್ಡಗಾಡು ಪ್ರದೇಶದ ರೀತಿ ಗುಡ್ಡ ಮತ್ತು ಕಂದಕಗಳಿವೆ. ನೌಕರರ ಮನೆಗಳನ್ನು ಎತ್ತರ ಪ್ರದೇಶದಲ್ಲಿ ಕಟ್ಟಲಾಗಿದೆ. ಇದಕ್ಕೆ ತಡೆಗೋಡೆಯನ್ನು ಕಟ್ಟಲಾಗಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆ, ಅಣೆಕಟ್ಟಿನ ನೀರಿನ ಮಟ್ಟ
ಆದರೆ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಕಲ್ಲಿನಿಂದ ಕಟ್ಟಿದ ತಡೆಗೋಡೆ ಕುಸಿತವಾಗಿದೆ. ಇದರಿಂದ ಕೆಪಿಸಿಯ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಮಳೆಗಾಲದಲ್ಲಿ ಈ ರೀತಿಯ ಕುಸಿತ ಇಲ್ಲಿ ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ಜೋಗದ ಅನೇಕ ಭಾಗಗಳಲ್ಲಿ ಸಣ್ಣಪುಟ್ಟ ಗುಡ್ಡಗಳ ಕುಸಿತ ಕಾಣುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 266.90 ಮಿಮಿ ಮಳೆಯಾಗಿದ್ದು, ಸರಾಸರಿ 38.13 ಮಿಮಿ ಮಳೆ ದಾಖಲಾಗಿದೆ. ಸೆಪ್ಟಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿಮಿ ಇದ್ದು, ಇದುವರೆಗೆ ಸರಾಸರಿ 291.65 ಮಿಮಿ ಮಳೆ ದಾಖಲಾಗಿದೆ. ಶಿವಮೊಗ್ಗ 16.40 ಮಿಮಿ., ಭದ್ರಾವತಿ 3.60 ಮಿಮಿ., ತೀರ್ಥಹಳ್ಳಿ 97.40 ಮಿಮಿ., ಸಾಗರ 45.40, ಶಿಕಾರಿಪುರ 9.00 ಮಿಮಿ., ಸೊರಬ 27.10 ಮಿಮಿ. ಹಾಗೂ ಹೊಸನಗರ 68.00 ಮಿಮಿ. ಮಳೆಯಾಗಿದೆ.
ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆ ಹಾಗೂ ಅಲ್ಲಲ್ಲಿ ಅಧಿಕದಿಂದ ಅತ್ಯಧಿಕ ಭಾರಿ ಮಳೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.