ಅಪಸ್ವರದ ನಡುವೆ ಬಂಗಾರಪ್ಪ ಮೂರ್ತಿ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ
ಶಿವಮೊಗ್ಗ, ಮಾರ್ಚ್ 04: ಸೊರಬ ಜನರ ಹಲವು ದಿನಗಳ ಕನಸಾಗಿರುವ ದಿ.ಬಂಗಾರಪ್ಪನವರ ಪುತ್ಥಳಿಗೆ ಶಂಕುಸ್ಥಾಪನೆಯನ್ನ ಶಾಸಕ ಕುಮಾರ ಬಂಗಾರಪ್ಪ ಇಂದು ಸೋಮವಾರ ನೆರವೇರಿಸಿದರು.
ಶಾಸಕ ಕುಮಾರ ಬಂಗಾರಪ್ಪನವರು, ತಂದೆ ದಿ.ಬಂಗಾರಪ್ಪನವರ ಪುತ್ಥಳಿಯನ್ನು ನಿರ್ಮಾಣ ಮಾಡಲು ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಟ್ಟಣ ಪಂಚಾಯಿತಿ ಸದಸ್ಯರು ಅಪಸ್ವರ ತೆಗೆದಿದ್ದಾರೆ.
ಡಿ.ಹೊಸೂರಲ್ಲಿ ಅಂಬಿ ಪ್ರತಿಮೆ ನಿರ್ಮಿಸಿದ ಅಭಿಮಾನಿಗಳು
ಸೊರಬ ಪಟ್ಟಣ ಪಂಚಾಯಿತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಇಂದು ಕಾರ್ಯಕ್ರಮ ನಡೆದಿರುವ ಬಗ್ಗೆ ನಮಗೆ ಭಿನ್ನಾಭಿಪ್ರಾಯವಿಲ್ಲ. ಆದರೆ ದಿ.ಬಂಗಾರಪ್ಪನವರ ಅಭಿಮಾನಿಗಳು, ಅವರಿಗೆ ಬೆಂಬಲ ನೀಡಿದವರು ಅಪಾರ ಸಂಖ್ಯೆಯಲ್ಲಿದ್ದಾರೆ. ಈ ಕಾರ್ಯಕ್ರಮ ನಡೆಸುವ ಮುಂಚೆ ಪೂರ್ವಭಾವಿ ಸಭೆ ಕರೆಯಬೇಕೆಂದು ಜೆಡಿಎಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸೊರಬ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ರತ್ನ, ನಮ್ಮ ಜೆಡಿಎಸ್ ಪಕ್ಷದ ಮಾಜಿ ಶಾಸಕ ಮಧು ಬಂಗಾರಪ್ಪರವರು ಶಾಸಕರಾಗಿದ್ದಾಗ ಸೊರಬ ತಾಪಂ ಸದಸ್ಯರೆಲ್ಲಾ ಸಭೆ ಸೇರಿ 4 ಲಕ್ಷ ರೂ.ವೆಚ್ಚದಲ್ಲಿ ದಿ.ಬಂಗಾರಪ್ಪನವರ ಪುತ್ಥಳಿ ನಿರ್ಮಿಸಲು ನಿರ್ಣಯ ತೆಗೆದುಕೊಂಡಿತ್ತು. ಹಂತಹಂತವಾಗಿ ಇದಕ್ಕೆ ಹಣ ಏರಿಸಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಹಾಗಾಗಿ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ, ದಿ.ಬಂಗಾರಪ್ಪನವರ ಪುತ್ಥಳಿ ನಿರ್ಮಾಣಕ್ಕೆ ನಡೆಯುವ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಬಂಗಾರಪ್ಪನವರ ಅಭಿಮಾನಿಗಳನ್ನ ಕರೆಯಿಸಿ ಸನ್ಮಾನ ಮಾಡಬೇಕಿತ್ತು. ಆ ಕೆಲಸ ಮಾಡದೆ ಇರುವುದು ಬೇಸರತಂದಿದೆ ಎಂದರು.
ಈ ಕುರಿತು ಮಾತನಾಡಿದ ಕುಮಾರ್ ಬಂಗಾರಪ್ಪ, ಈ ಹಿಂದೆ ಬಂಗಾರಪ್ಪನವರ ಪುತ್ಥಳಿ ನಿರ್ಮಾಣಕ್ಕೆ ಜಗಳವಾಗಿ ಅನಾವರಣಗೊಳ್ಳಬೇಕಿದ್ದ ಪುತ್ಥಳಿಯನ್ನ ತಹಶೀಲ್ದಾರ್ ಸೀಜ್ ಮಾಡಿ ತಾಲೂಕ್ ಪಂಚಾಯಿತಿಯಲ್ಲಿಡಲಾಯಿತು.
ಹಾಗಾಗಿ ಈ ಕುರಿತು ದಿ.ಬಂಗಾರಪ್ಪನವರ ಪುತ್ಥಳಿಯನ್ನ ಸ್ಮಾರಕವೆಂದು ಪರಿಗಣಿಸಿ ಸರ್ಕಾರದವತಿಯಿಂದ ದಿ.ಬಂಗಾರಪ್ಪನವರ ಪ್ರತಿಮೆ ಅನಾವರಣಗೊಳಿಸಿ ಎಂದು ಮನವಿ ಮಾಡಿಕೊಂಡಿದ್ವಿ. ಆದರೂ ಅದು ಕಾರಣಾಂತರದಿಂದ ಸಾಧ್ಯವಾಗಲಿಲ್ಲ.ಹಾಗಾಗಿ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಇಂದು ಕಾರ್ಯಕ್ರಮ ನಡೆಸಲಾಗಿದೆ ಎಂದರು.